Saturday, December 7, 2024

ಸತ್ಯ | ನ್ಯಾಯ |ಧರ್ಮ

ಬೇರೆ ಪಕ್ಷದ ನಾಯಕರ ನಡುವೆ ವಿವಾಹ ಸಂಬಂಧದ ಕಾರಣಕ್ಕೆ ಬಿಎಸ್ಪಿ ನಾಯಕನನ್ನು ಪಕ್ಷದಿಂದ ಉಚ್ಛಾಟಿಸಿದ ಮಾಜಿ ಸಿಎಂ ಮಾಯಾವತಿ

ಎರಡು ಬೇರೆ ಬೇರೆ ಪಕ್ಷ ಎಂದ ಮಾತ್ರಕ್ಕೆ ಸಂಪೂರ್ಣ ವಿರೋಧಿಗಳು ಎಂದು ಸಾಮಾನ್ಯ ಜನರು ತಿಳಿದುಕೊಂಡಿರುವುದರ ನಡುವೆ ಹಲವು ರಾಜಕೀಯ ನಾಯಕರು ಪಕ್ಷ ಬೇಧ ಮರೆತು ಸಂಬಂಧ ಬೆಸೆದು ಮದುವೆ ಕಾರ್ಯಗಳ ನಡೆಸುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಎರಡು ಬೇರೆ ಬೇರೆ ಪಕ್ಷಗಳ ನಾಯಕರ ಮಕ್ಕಳ ನಡುವೆ ಮದುವೆ ಕಾರ್ಯ ನಡೆದದ್ದನ್ನೇ ಗುರಿಯಾಗಿಸಿ ಪಕ್ಷದಿಂದಲೇ ಉಚ್ಛಾಟನೆ ಮಾಡಿದ ಘಟನೆ ನಡೆದಿದೆ.

ಸಮಾಜವಾದಿ ಪಕ್ಷದ (SP) ಶಾಸಕರೊಬ್ಬರ ಪುತ್ರಿಯೊಂದಿಗೆ ತಮ್ಮ ಮಗನ ವಿವಾಹವನ್ನು ಮಾಡಿದ ಬಹುಜನ ಸಮಾಜವಾದಿ ಪಕ್ಷದ (BSP) ಹಿರಿಯ ನಾಯಕ ಸುರೇಂದ್ರ ಸಾಗರ್ ಅವರನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಪಕ್ಷದಿಂದಲೇ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಬರೇಲಿಯ ಬಿಎಸ್‌ಪಿ ಪ್ರಭಾವಿ ನಾಯಕ ಸುರೇಂದ್ರ ಸಾಗರ್ ಅವರ ಪುತ್ರ ಅಂಕುರ್ ವಿವಾಹ ಎಸ್ಪಿ ಶಾಸಕ ತ್ರಿಭುವನ್ ದತ್ ಅವರ ಪುತ್ರಿ ಕುಸುಮ್ ದತ್ ಜೊತೆಗೆ ನಡೆದಿತ್ತು. ಬಿಎಸ್ಪಿಯ ಬರೇಲಿ ವಿಭಾಗದ ಪ್ರಮುಖ ವ್ಯಕ್ತಿಯಾಗಿರುವ ಸುರೇಂದ್ರ ಸಾಗರ್ ಐದು ಬಾರಿ ರಾಂಪುರದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಸ್ಥಾನವನ್ನು ಅಲಂಕರಿಸಿದ್ದಾರೆ. ಬಿಎಸ್ಪಿಯ ಮಾಜಿ ಶಾಸಕ ತ್ರಿಭುವನ್ ದತ್ ಈಗ ಅಂಬೇಡ್ಕರ್ ನಗರದ ಆಲಾಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಈ ಮದುವೆ ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ತಮ್ಮ ಪಕ್ಷಗಳ ರಾಜಕೀಯ ನಾಯಕರನ್ನೂ ಆಹ್ವಾನಿಸಲಾಗಿತ್ತು. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ದತ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮದುವೆ ಹೆಚ್ಚು ಗಮನ ಸೆಳೆದಿತ್ತು. ಇದನ್ನೇ ಗುರಿಯಾಗಿಸಿದ ಬಿಎಸ್ಪಿ ಪಕ್ಷ ಬರೇಲಿಯ ಬಿಎಸ್‌ಪಿ ಪ್ರಭಾವಿ ನಾಯಕ ಸುರೇಂದ್ರ ಸಾಗರ್ ಅವರ ಉಚ್ಛಾಟನೆಗೆ ಪಕ್ಷವು ಶಿಸ್ತು ಉಲ್ಲಂಘನೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳು’ ಎಂದು ಕಾರಣ ನೀಡಿದೆ.

ಪಕ್ಷ ತನ್ನನ್ನು ಉಚ್ಛಾಟನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸುರೇಂದ್ರ ಸಾಗರ್ ಅವರು, ಪಕ್ಷದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ನಾನು ಯಾವುದೇ ಅಶಿಸ್ತಿನಲ್ಲಿ ತೊಡಗಿಲ್ಲ. ನನ್ನ ಮಗ ಅಂಕುರ್‌ನನ್ನು ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಮಗಳಿಗೆ ಮದುವೆ ಮಾಡಿಕೊಡುವುದು ಮಾತ್ರ ನನ್ನ ಕರ್ತವ್ಯವಾಗಿತ್ತು. ನನ್ನ ಮಗ ಎಸ್ಪಿ ನಾಯಕನ ಕುಟುಂಬದೊಂದಿಗೆ ಮದುವೆಯಾಗಿದ್ದೇ ಏಕೈಕ ತಪ್ಪು ಎಂದು ಹೇಳುವ ಮೂಲಕ ಪಕ್ಷದ ನಿರ್ಧಾರವನ್ನು ಖಂಡಿಸಿದ್ದಾರೆ.

ಸಾಕಷ್ಟು ಚರ್ಚೆಗಳ ನಂತರ, ಮಾಯಾವತಿ ಅವರು ಪಕ್ಷದ ನಾಯಕರು ಮದುವೆಗೆ ಹೋಗುವುದಕ್ಕೆ ನಿರಾಕರಿಸಿದರು ಎಂದು ತಿಳಿದು ಬಂದಿದೆ. ಆದರೆ ಹಲವಾರು ಎಸ್ಪಿ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page