ತಿರುವನಂತಪುರಂ: ಏಪ್ರಿಲ್ನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಇದರ ಭಾಗವಾಗಿ ಸಿಪಿಐ(ಎಂ) ಮಾಜಿ ನಾಯಕ ವಿ.ಆರ್. ರಾಮಕೃಷ್ಣನ್ ಮತ್ತು ಎಡರಂಗದ ಪರವಾಗಿ ದೂರದರ್ಶನ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಪ್ರಮುಖ ಎಡಪಂಥೀಯ ಬೆಂಬಲಿಗ ರೆಜಿ ಲುಕೋಸ್ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಲುಕೋಸ್ ಅವರಿಗೆ ಪಕ್ಷದ ಸದಸ್ಯತ್ವ ನೀಡಿ ಸ್ವಾಗತಿಸಿದರು.
ಸುಮಾರು 35 ವರ್ಷಗಳಿಂದ ಎಡಪಂಥೀಯ ಸಿದ್ಧಾಂತವನ್ನು ಬೆಂಬಲಿಸುತ್ತಾ ಬಂದಿದ್ದ ರೆಜಿ ಲುಕೋಸ್, ಸಿಪಿಐ(ಎಂ) ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ “ಕೋಮು ವಿಭಜನೆ” ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ತಮಗೆ ನೋವುಂಟು ಮಾಡಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಿಜೆಪಿಯ ಅಭಿವೃದ್ಧಿ ರಾಜಕಾರಣದಿಂದ ಪ್ರಭಾವಿತನಾಗಿ ನಾನು ಸಿಪಿಐ(ಎಂ) ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇನೆ ಮತ್ತು ಇನ್ನು ಮುಂದೆ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿಯ ಮಾಜಿ ಸಿಪಿಐ(ಎಂ) ನಾಯಕ ರಾಮಕೃಷ್ಣನ್ ಅವರು ಮಾತನಾಡಿ, ತಾವು ಪಕ್ಷಕ್ಕಾಗಿ ಶ್ರಮಿಸಿದ್ದರೂ ತಮ್ಮನ್ನು ಏಕೆ ಹೊರಹಾಕಲಾಯಿತು ಎಂಬುದು ಇಂದಿಗೂ ತಿಳಿದಿಲ್ಲ. ಹಿಂದೆ ಯಾರೂ ಕಮ್ಯುನಿಸ್ಟರನ್ನು ಕಳ್ಳರು ಎಂದು ಕರೆಯುತ್ತಿರಲಿಲ್ಲ, ಆದರೆ ಇಂದು ಜನರು ಹಾಗೆ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪಕ್ಷಾಂತರಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಬಂದರು ಸಚಿವ ಮತ್ತು ಹಿರಿಯ ಸಿಪಿಐ(ಎಂ) ನಾಯಕ ವಿ.ಎನ್. ವಾಸವನ್ ಅವರು, “ಬೇಲಿಯ ಆಚೆಗಿನ ಹುಲ್ಲು ಹಸಿರಾಗಿ ಕಾಣುತ್ತದೆ” ಎಂದು ನಂಬಿ ಅನೇಕರು ಪಕ್ಷ ಬದಲಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಯಾವುದೇ ಪಕ್ಷದಲ್ಲಿ ಕೆಲಸ ಮಾಡಲು ಸ್ವತಂತ್ರರು, ಆದರೆ ಲುಕೋಸ್ ಅವರು ಈ ಹಿಂದೆ ಬಿಜೆಪಿಯ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಈಗ ತಿದ್ದಿಕೊಳ್ಳಬೇಕಾಗುತ್ತದೆ ಎಂದು ಅವರು ಟೀಕಿಸಿದರು.
ಇಂತಹ ಪಕ್ಷಾಂತರಗಳಿಂದ ಎಡರಂಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಮುಂಬರುವ ಚುನಾವಣೆಯ ಗುರಿಯೊಂದಿಗೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ವಾಸವನ್ ತಿಳಿಸಿದ್ದಾರೆ.
