Monday, June 30, 2025

ಸತ್ಯ | ನ್ಯಾಯ |ಧರ್ಮ

ಮುಂದುವರೆದ ಉಗ್ರರ ಅಟ್ಟಹಾಸ ; ನಾಲ್ಕು ಸೈನಿಕರು ಹುತಾತ್ಮ, ಐವರಿಗೆ ಗಂಭೀರ ಗಾಯ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ತೀವ್ರ ಗುಂಡಿನ ದಾಳಿಯಲ್ಲಿ ಓರ್ವ ಸೇನಾಧಿಕಾರಿ, ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದೇಸಾ ಅರಣ್ಯ ಪ್ರದೇಶದ ಧರಿ ಗೋಟೆ ಉರರಬಾಗಿಯಲ್ಲಿ ರಾತ್ರಿ 7.45 ರ ಸುಮಾರಿಗೆ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಜೆಕೆ ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ರಿಯಾಸಿ ಜಿಲ್ಲೆಯ ಭಯೋತ್ಪಾದಕರ ಅಡಗುತಾಣದಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. 30 ಸುತ್ತುಗಳ ಎಕೆ-47, ಎಕೆ-47 ರೈಫಲ್‌ನ ಒಂದು ಮ್ಯಾಗಜೀನ್ ಮತ್ತು ಒಂದು ಎಚ್‌ಇ-36 ಹ್ಯಾಂಡ್ ಗ್ರೆನೇಡ್ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 35 ದಿನಗಳಲ್ಲಿ ದೋಡಾ ಪ್ರದೇಶದಲ್ಲಿ ಇದು ನಾಲ್ಕನೇ ಎನ್‌ಕೌಂಟರ್ ಆಗಿದೆ. ಜೂನ್ 9 ರಂದು ಶಿವಖೋಡಿ ಭಕ್ತರ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. 9 ಜನರು ಸಾವನ್ನಪ್ಪಿದರು, 41 ಜನರು ಗಾಯಗೊಂಡರು. ಜೂನ್ 11ರಂದು ಕಥುವಾ ಗ್ರಾಮಕ್ಕೆ ಉಗ್ರರು ಪ್ರವೇಶಿಸಿದ್ದರು. ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಯೋಧ ಹುತಾತ್ಮರಾಗಿದ್ದರು.
ಜೂನ್ 11 ರಂದು ದೋಡಾದಲ್ಲಿ ಎರಡು ಭಯೋತ್ಪಾದಕ ದಾಳಿಗಳು. ಕೆಲವು ಯೋಧರು ಗಾಯಗೊಂಡಿದ್ದಾರೆ. ಉಗ್ರರು ಪರಾರಿಯಾಗಿದ್ದರು
ಜುಲೈ 8 ರಂದು ಕಥುವಾದ ಬದ್ನೋಟಾದಲ್ಲಿ ಭದ್ರತಾ ಪಡೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಐವರು ಯೋಧರು ಬಲಿ, ಐವರು ಗಾಯಗೊಂಡಿದ್ದಾರೆ.
ಜುಲೈ 10 ರಂದು ಉಧಮ್‌ಪುರದ ಬಸಂತ್‌ಗಢ ಪ್ರದೇಶದಲ್ಲಿ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page