Wednesday, April 23, 2025

ಸತ್ಯ | ನ್ಯಾಯ |ಧರ್ಮ

ಪಹಲ್ಗಾಮ್ ನ ಅಮಾಯಕರ ನರಮೇಧ ಬಹಳ ಕ್ರೂರ, ಖಂಡನೀಯ – ರವಿಕೃಷ್ಣಾ ರೆಡ್ಡಿ

“..ಪಹಲ್ಗಾಮ್ ನ ದುರಂತವನ್ನು ಯಾರಾದರೂ ಮತ, ದೇಶ, ಸಮುದಾಯದ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರು ಕಠಿಣ ಶಿಕ್ಷೆಗೆ ಮತ್ತು ತೀವ್ರ ತಿರಸ್ಕಾರಕ್ಕೆ ಮಾತ್ರ ಅರ್ಹರು..”

ಭಾರತದಂತಹ ದೇಶದಲ್ಲಿ ಧರಣಿ, ಪ್ರತಿಭಟನೆ, ಸತ್ಯಾಗ್ರಹದಂತಹ ಅಹಿಂಸಾತ್ಮಕ ಹೋರಾಟಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗದ ಯಾವ ರಾಜಕೀಯ, ಸಾಮಾಜಿಕ ಸಮಸ್ಯೆಯೂ ಇಲ್ಲ. ಇಂತಹ ನೇರ, ಸಾತ್ವಿಕ, ಶಾಂತಿಯ ಮಾರ್ಗಗಳನ್ನು ಬಳಸದೆ ನೇರವಾಗಿ ಹಿಂಸೆಗೆ ಇಳಿಯುತ್ತಾರೆ ಎಂದರೆ ಅವರು ಹಿಂಸಾವಿನೋದಿ ರಾಕ್ಷಸರೇ ಹೊರತು ತಾವು ಪ್ರತಿಪಾದಿಸುತ್ತಿರುವ ವಿಚಾರಕ್ಕೂ ಬದ್ಧತೆಯುಳ್ಳ ಪ್ರಾಮಾಣಿಕ ಹೋರಾಟಗಾರರಲ್ಲ ಮತ್ತು ಅವರ ವಿಚಾರ ನ್ಯಾಯಪರವಾದದ್ದಲ್ಲ. ಅಹಿಂಸಾತ್ಮಕ ಹೋರಾಟದ ಬದಲಿಗೆ ಹಿಂಸೆಗೆ ಪ್ರಚೋದಿಸುವ ನಾಯಕರು ಪರಮನೀಚರು ಮತ್ತು ಅವರ ಮಾತು ಕೇಳಿ ಬಂದೂಕು ಹಿಡಿಯುವವರು ಶತಮೂರ್ಖರು, ಹುಚ್ಚರು.

ನಾನು ನನ್ನ ಎರಡು ಪ್ರವಾಸಗಳಲ್ಲಿ ಕಂಡಹಾಗೆ ಬಹುತೇಕ ಕಾಶ್ಮೀರಿಗಳು ತಮ್ಮ ಪಾಡಿಗೆ ತಾವು ಜೀವನ ನಡೆಸಿಕೊಂಡು ಇದ್ದಾರೆ. ಒಟ್ಟಾರೆ ಅಲ್ಲಿಯ ರಾಜಕೀಯ ಸ್ಥಿತಿಯ ಬಗ್ಗೆ ಬಹುತೇಕರಿಗೆ ಅತೃಪ್ತಿ ಇರುವುದು ಎದ್ದು ಕಾಣಿಸಿದರೂ (ಅವರು ಪ್ರವಾಸಿಗರನ್ನು ಇಂಡಿಯನ್ಸ್ ಎನ್ನುವ ಮಾತಿನಲ್ಲಿಯೇ ಅದು ಧ್ವನಿಸುತ್ತದೆ), ಎಲ್ಲಾ ಕಡೆ ಇರುವಂತೆ ಅಲ್ಲಿಯೂ ಬಹುತೇಕರು ಬದುಕು ಕಟ್ಟಿಕೊಳ್ಳುವ ಸಾಹಸದಲ್ಲಿಯೇ ಇದ್ದಾರೆ. ಬಂದೂಕು ಹಿಡಿದಿರುವವರು ಬಹುಶಃ ಸಾವಿರ-ಹತ್ತುಸಾವಿರಕ್ಕೊಬ್ಬರು ಇರಬಹುದು. ಹಾಗಾಗಿಯೇ ಕಳೆದ ಹತ್ತಾರು ವರ್ಷಗಳಿಂದ ಅಲ್ಲಿ ಹಿಂಸಾಚಾರ ಗಣನೀಯವಾಗಿ ಕಡಿಮೆ ಆಗುತ್ತಾ ಬಂದಿದೆ.

ನೆನ್ನೆ ಪಹಲ್ಗಾಮ್’ನಲ್ಲಿ ನಡೆದಿರುವ ಅಮಾಯಕರ ನರಮೇಧ ಬಹಳ ಕ್ರೂರವಾದದ್ದು. ಖಂಡನೀಯವಾದದ್ದು. ಹೇಯ ಕೃತ್ಯ. ಇದನ್ನು ಯಾರಾದರೂ ಮತ, ದೇಶ, ಸಮುದಾಯದ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರು ಕಠಿಣ ಶಿಕ್ಷೆಗೆ ಮತ್ತು ತೀವ್ರ ತಿರಸ್ಕಾರಕ್ಕೆ ಮಾತ್ರ ಅರ್ಹರು.

ನೆನ್ನೆಯ ಕಗ್ಗೊಲೆಗಳಿಗೆ ಭಾರತ ಸರ್ಕಾರ ಸೂಕ್ತ ಉತ್ತರ ನೀಡಬೇಕು. ಇದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಬೇಕು. ಸ್ಥಳೀಯ ಪೊಲೀಸ್ ವ್ಯವಸ್ಥೆ ಮಾತ್ರ ಹೆಚ್ಚಿನ ಸಮಯದಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಅಥವ ದುಷ್ಕೃತ್ಯಗಳನ್ನು ಎಸಗಿದವರನ್ನು ಹಿಡಿಯಲು ಶಕ್ತವಾಗಿರುತ್ತದೆ. ಸ್ಥಳೀಯರಲ್ಲದ ಸೈನಿಕರಿಂದ ನಾವು ಅಸಾಧ್ಯವಾದುದನ್ನು ನಿರೀಕ್ಷಿಸಬಾರದು.

ನೆನ್ನೆ ನಡೆದ ಪ್ರವಾಸಿಗರ ಕಗ್ಗೊಲೆಯನ್ನು ಖಂಡಿಸಿ ಶ್ರೀನಗರವೂ ಸೇರಿದಂತೆ ಕಾಶ್ಮೀರದ ವಿವಿಧೆಡೆಗಳಲ್ಲಿ ಗುಂಪುಗುಂಪಾಗಿ ಮೊಂಬತ್ತಿ ಹಿಡಿದು ಜನಸಾಮಾನ್ಯರು   ವಿರೋಧಿಸಿದ್ದಾರೆ ಎನ್ನುವುದು ಆಶಾದಾಯಕ ಮತ್ತು ಸ್ವಾಗತಾರ್ಹ ಬೆಳವಣಿಗೆ. ಬಹುತೇಕ ಕಾಶ್ಮೀರಿಗಳು ಹಿಂಸೆಯನ್ನು ವಿರೋಧಿಸುತ್ತಾರೆ ಎನ್ನುವುದಕ್ಕೆ ಇವೇ ಸಾಕ್ಷಿ. ಹಾಗಾಗಿ ನಾವು ಇನ್ನಷ್ಟು ಸೂಕ್ಷ್ಮತೆ ಮತ್ತು ಸಂವೇದನೆಯಿಂದ ಕಾಶ್ಮೀರದ ಸಮಸ್ಯೆಯನ್ನು ನೋಡುತ್ತ, ಕಾಶ್ಮೀರಿಗಳನ್ನು ಭಾರತದ ಮುಖ್ಯಧಾರೆಗೆ ಇನ್ನಷ್ಟು ವೇಗವಾಗಿ ಎಳೆದುಕೊಳ್ಳುವ ನಿಟ್ಟಿನಲ್ಲಿ ಮಾತು ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು.

ಎಲ್ಲಿಯೇ ಪ್ರವಾಸ ಹೋಗಲಿ, ಒಂದಿಲ್ಲೊಂದು ಅಪಾಯ ಇದ್ದೇ ಇರುತ್ತದೆ. ಕಾಶ್ಮೀರದಲ್ಲಿ ಸ್ವಲ್ಪ ಹೆಚ್ಚಿನ ಕಿರಿಕಿರಿ ಮತ್ತು ಆತಂಕ ಇರುತ್ತದೆ ಅಷ್ಟೇ. ಅಲ್ಲಿಯ ಪರಿಸ್ಥಿತಿ ಬಹುತೇಕವಾಗಿ ಹತೋಟಿಗೆ ಬಂದಿದೆ ಮತ್ತು ನೆನ್ನೆಯ ದುರ್ಘಟನೆ ಅಪರೂಪಕ್ಕೆ ನಡೆದಿರುವಂತಹದ್ದು. ಹಾಗಾಗಿ ಕಾಶ್ಮೀರ ನೋಡಬಯಸುವ ಪ್ರವಾಸಿಗರು ಅವಕಾಶ ಸಿಕ್ಕಾಗ ಧೈರ್ಯವಾಗಿ ಹೋಗಬೇಕು ಮತ್ತು ಸಾಧ್ಯವಾದರೆ ಅಲ್ಲಿ ವ್ಯಾಪಾರ, ವಹಿವಾಟುಗಳನ್ನು ಆರಂಭಿಸಬೇಕು. ಹಿಂಸೆಗೆ ಬೆದರಿದರೆ ನಾವು ಸೋತಂತೆ.

ಹದಿನೈದು ವರ್ಷದ ಮಗನೊಂದಿಗೆ ಸುಪ್ರಿಯಾ ಮತ್ತು ನಾನು ಸರಿಯಾಗಿ ಹನ್ನೊಂದು ತಿಂಗಳ ಹಿಂದೆ ಕಾಶ್ಮೀರ ಕಣಿವೆಯ ಯಾವ್ಯಾವುದೋ ಮೂಲೆ, ರಸ್ತೆಗಳಲ್ಲಿ ನಮ್ಮ Wagon R ಕಾರಿನಲ್ಲಿ ಸುತ್ತಾಡಿ ಬಂದೆವು. ಎಲ್ಲಾ ಕಡೆಯೂ ಇರುವಂತೆ ಖದೀಮರಿಂದ ಏನಾದರೂ ಮೋಸ, ವಂಚನೆ, ಅಪಾಯ ಆಗಬಹುದೇನೋ ಎನ್ನುವ ಆತಂಕ ಬಿಟ್ಟರೆ ನಮಗೆ ಮತ್ಯಾವ ಹಿಂಸಾಚಾರದ ಆತಂಕ ಇರಲಿಲ್ಲ. ಯಾಕೆಂದರೆ ಅಲ್ಲಿಯ ಜನರ ಮಾತುಕತೆ ಮತ್ತು ವ್ಯಾವಹಾರಿಕ ವಾತಾವರಣ ಅಷ್ಟು ಸಹಜವೂ, ನಿರಾಳವೂ ಆಗಿತ್ತು. ನಮ್ಮನ್ನು ತೀರಾ ದಿಕ್ಕೆಡಿಸಿದ್ದು ಎಂದರೆ ಅಲ್ಲಿಯ ಟ್ರ್ಯಾಫಿಕ್ ಮಾತ್ರ. ಬನಿಹಾಲ್ ರೈಲು ನಿಲ್ದಾಣದ ಬಳಿಯ ಹೆದ್ದಾರಿಯಲ್ಲಿ ನಡುರಾತ್ರಿಯಲ್ಲಿ ಸುಮಾರು ನಾಲ್ಕು ಗಂಟೆ ನಾವು ಟ್ರ್ಯಾಫಿಕ್’ನಲ್ಲಿ ಸಿಲುಕಿದ್ದೆವು. ಸೋನಾಮಾರ್ಗ್’ಗೆ ಹೋಗುವಾಗಲೂ ಅಷ್ಟೇ, ವಿಪರೀತ ಸಂದಣಿ. ಕರ್ನಾಟಕದ ಯಾವ ಪ್ರವಾಸಿ ತಾಣದಲ್ಲಿಯೂ ಕಾಣದ ಜನಸಂದಣಿ ಅಲ್ಲಿಯದು. ಆ ಮಟ್ಟಿಗೆ ದೇಶದ ಜನ ಕಾಶ್ಮೀರದ sporadic ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಧಿಕ್ಕರಿಸಿ ಅಲ್ಲಿಗೆ ಭೇಟಿ ಕೊಡುತ್ತಾರೆ. ಕಳೆದ ವರ್ಷ ಸುಮಾರು 35 ಲಕ್ಷ ಪ್ರವಾಸಿಗರು ಅಲ್ಲಿಗೆ ಭೇಟಿ ಕೊಟ್ಟಿದ್ದರಂತೆ.

ಸರ್ಕಾರ ರಾಜಕೀಯ ಮತ್ತು ಮಿಲಿಟರಿ ಪರಿಹಾರಗಳಿಗೆ ಕೆಲಸ ಮಾಡುತ್ತಿರಲಿ, ಮನಸುಗಳನ್ನು ಕಟ್ಟುವ ಕೆಲಸ ನಾವು ಮಾಡೋಣ.

ದುಷ್ಟರ ಗುಂಡೇಟಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಸೇರಿದಂತೆ ಎಲ್ಲಾ ದುರ್ದೈವಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ದೇಶವಾಸಿಗಳಿಗೆ ಸಂತಾಪಗಳು. ಓಂ ಶಾಂತಿಃ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page