ಉತ್ತರ ಪ್ರದೇಶ: ಶ್ರದ್ಧಾ ಕೊಲೆ ಪ್ರಕರಣದ ಆಘಾತದಿಂದ ರಾಷ್ಟ್ರದ ರಾಜಧಾನಿ ಹೊರಬರುವ ಮೊದಲೇ, ತಾವು ಹೇಳಿದಂತೆ ನಡೆದುಕೊಳ್ಳದ ಕಾರಣ 22 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಕೊಂದು, ಆಕೆಯ ದೇಹವನ್ನು ಸೂಟ್ಕೇಸ್ನಲ್ಲಿ ಹಾಕಿ ಹೆದ್ದಾರಿಯಲ್ಲಿ ಎಸೆದಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಕಳೆದ ವಾರ 22 ವರ್ಷದ ಆಯುಷಿ ಮೃತದೇಹವನ್ನು ಪೊಲೀಸರು ಸೂಟ್ಕೇಸ್ನಲ್ಲಿ ಪತ್ತೆಹಚ್ಚಿದ್ದರು.
ಪೊಲೀಸರು ಶವವನ್ನು ಗುರುತಿಸಲು ಸಾಧ್ಯವಾಗದ ಕಾರಣ, ಅವರು ಮೊಬೈಲ್, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು, ನಂತರ ಯಾವುದೇ ಸುಳಿವು ಸಿಗದ ಕಾರಣ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಿದರು. ನಂತರ ಮಹಿಳೆಯನ್ನು ಗುರುತಿಸಲು ಅವರು ನಗರದಾದ್ಯಂತ ಪೋಸ್ಟರ್ ಗಳನ್ನು ಅಂಟಿಸಿದ್ದರು.
ಪೊಲೀಸರು ಭಾನುವಾರ ಅಪರಿಚಿತ ಕರೆಯಿಂದ ಮಾಹಿತಿ ಪಡೆದಿದ್ದು, ಮೃತಳ ತಾಯಿ ಮತ್ತು ಸಹೋದರರನ್ನು ಪತ್ತೆಹಚ್ಚಿದ್ದಾರೆ. ನಂತರ ಅವರು ಮೃತಳು ಆಯುಷಿ ಎಂದು ಗುರುತಿಸಿದ್ದಾರೆ. ನಂತರ ಅವರನ್ನು ವಿಚಾರಣೆ ನಡೆಸಿದ ಬಳಿಕ ಯುವತಿಯ ತಂದೆ ಕೊಲೆ ಮಾಡಿರುವ ವಿಚಾರ ತಿಳಿದಿದ್ದು, ಸೋಮವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆಯುಷಿಯನ್ನು ಅವರ ತಂದೆ ಗುಂಡಿಕ್ಕಿ ಕೊಂದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸರು, ಆಯುಷಿ ತನ್ನ ಹೆತ್ತವರಿಗೆ ತಿಳಿಸದೆ ಬೇರೆ ಜಾತಿಗೆ ಸೇರಿದ ಛತ್ರಪಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಹೀಗಾಗಿ ಅವಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ಅವಳ ಮದುವೆಯ ಬಗ್ಗೆ ಅವಳ ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅವರ ತಂದೆ ನಿತೀಶ್ ಯಾದವ್ ಆಯುಷಿಯು ಗುಂಡಿಕ್ಕಿ ಕೊಂದು, ದೆಹಲಿಗೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪರವಾನಗಿ ಪಡೆದ ಬಂದೂಕಿನಿಂದ ಮಗಳನ್ನು ಕೊಂದ ನಂತರ, ಶವವನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ, ಸೂಟ್ಕೇಸ್ನಲ್ಲಿ ಹಾಕಿ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಎಸೆದಿದ್ದಾರೆ, ಘಟನೆ ಕುರಿತು ಇನ್ನು ಹೆಚ್ಚಿನ ತಿನಿಖೆ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.