ಮೈಸೂರು: ಚಿನ್ನದ ಸಿಂಹಾಸನ ಮತ್ತು ಅಂಬಾರಿ ಎರಡೂ ಹಿಂದಿನ ಮೈಸೂರು ರಾಜಮನೆತನದ ಖಾಸಗಿ/ವೈಯಕ್ತಿಕ ಆಸ್ತಿಎಂದು ಮೈಸೂರಿನ ಹಿಂದಿನ ರಾಜಮನೆತನದ ಸದಸ್ಯೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಹೊರಡಿಸಿರುವ ಅವರು “ಸಿಂಹಾಸನ ಹಾಗೂ ಅಂಬಾರಿಯ ಮಾಲೀಕತ್ವದ ಕುರಿತು ತಪ್ಪು ಕಲ್ಪನೆಗಳಿವೆ. ಈ ನಿಟ್ಟಿನಲ್ಲಿ ತಾನು ಈ ಪತ್ರಿಕಾ ಪ್ರಕಟಣೆ ಹೊರಡಿಸಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರು, ಮಾಧ್ಯಮಗಳು ಹಾಗೂ ಯೂಟ್ಯೂಬರ್ಗಳು ಈ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ತಪ್ಪು ಮಾಹಿತಿಗಳನ್ನು ಹರಡದಂತೆ ಅವರು ಕೋರಿದ್ದಾರೆ.
ಅಂಬಾರಿ ಹಾಗೂ ಸಿಂಹಾಸನದ ಮಾಲಿಕತ್ವ, ಅವುಗಳ ಪಾಲನೆ, ಬಳಕೆ ಮತ್ತು ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಮತ್ತು ಅದು ಮುಂದುವರಿಯುತ್ತದೆ. ಮತ್ತು ಇದಕ್ಕೆ ವಿರುದ್ಧವಾಗಿ ಯಾವುದೇ ರೀತಿಯ ಹಕ್ಕು ಸ್ಥಾಪನೆ ಅಥವಾ ಹೇಳಿಕೆಗಳು ಆಧಾರರಹಿತವಾಗಿವೆ ಮತ್ತು ಸತ್ಯಗಳ ತಪ್ಪು ನಿರೂಪಣೆಯಾಗಿದೆ” ಎಂದು ಪ್ರಮೋದಾದೇವಿ ಒತ್ತಿ ಹೇಳಿದ್ದಾರೆ.
ವ್ಯಾಪಾರ ಹಾಗೂ ಉತ್ಪಾದನಾ ಸಮುದಾಯದಲ್ಲಿ ಕೆಲವರು ಪ್ರಚಾರದ ಸಲುವಾಗಿ ಅಂಬಾರಿಯ ಚಿತ್ರವನ್ನು ತಮ್ಮ ಉತ್ಪನ್ನಗಳ ಮೇಲೆ ಬಳಸುತ್ತಿದ್ದಾರೆ. ಆದರೆ ಅಂಬಾರಿ ಮತ್ತು ಸಿಂಹಾಸನವು ಅಪಾರ ಮಹತ್ವ ಮತ್ತು ಗೌರವವನ್ನು ಹೊಂದಿವೆ. ಆದ್ದರಿಂದ, ಈ ವಸ್ತುಗಳು ಯಾವುದೇ ರೀತಿಯ ಜಾಹೀರಾತು ಅಥವಾ ಪ್ರಚಾರ ಕಾರ್ಯಗಳಿಗೆ ಬಳಸಬಾರದು” ಎಂದು ಪ್ರಮೋದಾದೇವಿ ಆಗ್ರಹಿಸಿದ್ದಾರೆ.