ಮೈಸೂರು: ದಿನಾಂಕ 10-09-2023ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಕ್ಫ್ ಎಸ್ಟೇಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಟಿಪ್ಪು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ನಿಷೇದಾಜ್ಞೆ ವಿಧಿಸಿ ದಿನಾಂಕ 09-11-2023ರಂದು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ದಂಡಾದಿಕಾರಿ ಮತ್ತು ತಹಶಿಲ್ದಾರರಾದ ಪರಶುರಾಮ ಸತ್ತಿಗೇರಿಯವರು ಹೊರಡಿಸಿರುವ ಆದೇಶದಂತೆ ಶುಕ್ರವಾರ CRPC ಕಲಂ 144 ಅನ್ವಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವಂತಿಲ್ಲ; ಪ್ರತಿಭಟನೆ, ಮೆರವಣಿಗೆ, ಬ್ಯಾನರ್, ಬಂಟಿಂಗ್ಸ್, ಮೈಕ್, ಪಟಾಕಿ ಯಾವುದಕ್ಕೂ ಅವಕಾಶವಿಲ್ಲ, ಡಿಜೆ ಹಾಕುವಂತಿಲ್ಲ, ರಸ್ತೆ ರಡೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ಹಿಂದೆ ನವೆಂಬರ್ 11ರಂದು ರಾಜ್ಯ ಸರ್ಕಾರವೇ ಟಿಪ್ಪು ಜಯಂತಿ ಆಚರಿಸುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಲಾಗಿತ್ತು. ಈ ನಡುವೆ ಟಿಪ್ಪು ಹುಟ್ಟಿದ ದಿನಾಂಕವು ಡಿಸೆಂಬರ್ 1 ಎಂದು ಸಂಶೋಧಕರು ಪತ್ತೆ ಮಾಡಿದ್ದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯ ದಿನವೂ ಬದಲಾಗಿದೆ. ಆದರೆ ಈ ಸಲ ಸರ್ಕಾರವು ಟಿಪ್ಪು ಜಯಂತಿ ಆಚರಿಸುವ ಸೂಚನೆ ಇಲ್ಲ. ಕೆಲವು ಖಾಸಗಿ ಸಂಘ ಸಂಸ್ಥೆಗಳು ಹಲವಾರು ವರ್ಷಗಳಿಂದ ಟಿಪ್ಪು ಜಯಂತಿ ಮತ್ತು ಟಿಪ್ಪು ಹುತಾತ್ಮ ದಿನಾಚರಣೆ ನಡೆಸುತ್ತಾ ಬಂದಿದ್ದಾರೆ. ಕೆಲವರು ನವೆಂವರ್ 10ಕ್ಕೆ ಆಚರಿಸುತ್ತಾರೆ. ಈ ಸಲ ಮಂಡ್ಯ-ಮೈಸೂರು ಸಮಾನ ಮನಸ್ಕರ ವೇದಿಕೆ ವತಿಯಿಂದ ಡಿಸೆಂಬರ್ 1 ರಂದು ಶ್ರೀರಂಗಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಟಿಪ್ಪು ಜಯಂತಿ ಹಮ್ಮಿಕೊಂಡಿದೆ. ಆದರೆ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಇಂತಹ ಖಾಸಗಿ ಟಿಪ್ಪು ಜಯಂತಿ ಆಚರಣೆಗೂ ತಡೆಯೊಡ್ಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದ ಹೋರಾಟ ಮಾಡಿ, ಬ್ರಿಟಿಷರ ಎದೆ ನಡುಗಿಸಿದ್ದ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ ಅವರ ಹಿರಿಮೆ ಲೋಕಕ್ಕೇ ತಿಳಿದ ಸಂಗತಿ. ಇಂತಹ ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಯಾರೇ ಆಚರಿಸಿದರೂ ಸೂಕ್ತ ರಕ್ಷಣೆ ನೀಡಬೇಕಾಗಿರುವ ಸರ್ಕಾರವೇ ಟಿಪ್ಪು ಜಯಂತಿಯ ಮೇಲೆ ನಿಷೇಧ ಹೇರಿರುವುದು ಎಷ್ಟು ಸರಿ ಎಂಬ ಚರ್ಚೆಗೆ ಈ ಆದೇಶ ಕಾರಣವಾಗಿದೆ.
ಇದನ್ನೂ ಓದಿ: