Home ರಾಜಕೀಯ ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ: ನಿಖಿಲ್‌ ಕುಮಾರಸ್ವಾಮಿ

ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ: ನಿಖಿಲ್‌ ಕುಮಾರಸ್ವಾಮಿ

0

ಬೆಂಗಳೂರು: ಕಾಂಗ್ರೆಸ್‌ ಪಂಚ ಗ್ಯಾರಂಟಿಗೆ ದಿನಾಂಕ ಘೋಷಣೆ ಮಾಡಿ. ನಾಲ್ಕೈದು ತಿಂಗಳಾದರೂ ಹಣವೇ ಬಂದಿಲ್ಲ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್‌ ಆಗಿ ಹಣ ಜಮೆಯಾಗುತ್ತಿದೆ. ವಿಳಂಬ ಸಾಕು, ಕಾರಣ ಬೇಡ, ಕಟಾ ಕಟ್‌ ಹಣ ವರ್ಗಾಯಿಸಿ ಎಂದು ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ರೂಪಿಸುವಲ್ಲಿ ನಿರತರಾಗಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ 3-4 ತಿಂಗಳು ಕಾಯಬೇಕಾಗಿದೆ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ “ಮ್ಯಾಜಿಕ್‌” ಆಗಿ ಹಣ ಜಮೆಯಾಗುತ್ತದೆ ಎಂದು ನಿಖಿಲ್‌ ಕಿಡಿಕಾರಿದರು.

ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಗ್ಯಾರಂಟಿ ಕ್ಯಾಲೆಂಡರ್‌ ಬಿಡುಗಡೆ ಮಾಡಿ, ಹಣ ಜಮಾ ಮಾಡುವ ದಿನಾಂಕವನ್ನು ನಿಗದಿ ಮಾಡಿ, ಸಮಯಕ್ಕೆ ಸರಿಯಾಗಿ ಡಿಬಿಟಿ ವರ್ಗಾವಣೆ ಖಚಿತಪಡಿಸಬೇಕೆಂದು ನಿಖಿಲ್‌ ಕುಮಾರಸ್ವಾಮಿ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕಾಂಗ್ರೆಸ್‌ ಪಕ್ಷವು ಗೃಹಲಕ್ಷ್ಮಿ ಮತ್ತು ಯುವನಿಧಿ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿತ್ತು. ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಬಣ್ಣದ ಮಾತುಗಳನ್ನು ಹೇಳಿತ್ತು. ಆದರೆ, ಪ್ರತಿ ಬಾರಿಯೂ ತಾಂತ್ರಿಕ ಸಮಸ್ಯೆಯ ನೆಪ ಒಡ್ಡುವುದು ಹಾಸ್ಯಾಸ್ಪದ ಎಂದಿದ್ದಾರೆ.

You cannot copy content of this page

Exit mobile version