ಗುಜರಾತ್: ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ರಾವ್ರವರು ಗುಜರಾತ್ ಚುನಾವಣೆಯಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದು, ಸೂರತ್ ಜಿಲ್ಲೆಯ ಕತಾರ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಗುಜರಾತ್ ಎಎಪಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಪರ ಭಾಸ್ಕರ್ ರಾವ್ ಮತಯಾಚನೆ ಮಾಡಿದರು.
ಪ್ರಚಾರದ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ʼದೆಹಲಿ ಹಾಗೂ ಪಂಜಾಬ್ ನಂತರ ಇದೀಗ ಗುಜರಾತ್ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿಯು ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸುವ ಬದಲು, ಇಲ್ಲಿನ ಸಣ್ಣಪುಟ್ಟ ಯೋಜನೆಗಳಿಗೆ ದೇಶಾದ್ಯಂತ ಸುಳ್ಳು ಪ್ರಚಾರ ಪಡೆಯುವುದಕ್ಕೆ ಆದ್ಯತೆ ನೀಡಿದೆ. ಗುಜರಾತ್ ಮಾಡೆಲ್ ಎಂಬುದು ಕಳಪೆ ಮಾಡೆಲ್ ಎಂಬುದು ಜನರಿಗೆ ಅರ್ಥವಾಗುತ್ತಿದ್ದು, ಗುಣಮಟ್ಟದ ಮೂಲಸೌಕರ್ಯಗಳಿಗಾಗಿ ಅವರು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ಹಣಬಲ ಹಾಗೂ ತೋಳ್ಬಲದ ನಡುವೆಯೂ ಆಮ್ ಆದ್ಮಿ ಪಾರ್ಟಿಗೆ ಜನಬೆಂಬಲವು ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ವಿವಿಧ ಮಾಧ್ಯಮಗಳ ಇತ್ತೀಚಿನ ಸಮೀಕ್ಷೆಗಳು ಕೂಡ ಇದನ್ನು ದೃಢಪಡಿಸಿವೆʼ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಆಮ್ ಆದ್ಮಿ ಪಾರ್ಟಿಯ ವಲಯ ಉಸ್ತುವಾರಿ ವಿಜಯ್ ಶಾಸ್ತ್ರಿಮಠ್ ಹಾಗೂ ಪಕ್ಷದ ಮುಖಂಡರಾದ ನಿತ್ಯಾನಂದ ಸಾಹುರವರು ಭಾಸ್ಕರ್ ರಾವ್ ಜೊತೆಗಿದ್ದರು.