Friday, June 20, 2025

ಸತ್ಯ | ನ್ಯಾಯ |ಧರ್ಮ

ಗುಲ್ಜಾರರ “ಕೌಫ್” ಮತ್ತು ಲಂಕೇಶರ “ದಾಳಿ”

ಒಂದೊಂದು ದಶಕಗಳನ್ನು ಒಂದೆರಡು ಪದಗಳಲ್ಲಿ ವಿವರಿಸಿಬಿಡಬಹುದು ಎಂಬುದೊಂದು ಅಚ್ಚರಿ. 1930ರ ದಶಕವನ್ನು ಆರ್ಥಿಕ ಮುಗ್ಗಟ್ಟು ಎಂದು, 1940 ರ ದಶಕವನ್ನು ನರಮೇಧವೆಂದು, 1960 ದಶಕವನ್ನು (ಕೆನೆಡಿ ಮತ್ತು ಮಾರ್ಟಿನ್ ಲೂಥೆರ್ ಕಿಂಗ್) ಹತ್ಯೆಯ ಕರಾಳ ಕಾಲವೆಂದು ಹೆಸರಿಸಿಬಿಡಬಹುದು. 2000 ದಶಕವನ್ನು ಭಯೋತ್ಪಾದನೆಯ ದಿನಗಳೆಂದರೆ ಯಾರು ನಿರಾಕರಿಸಲಾರರು. ಅದೇ ರೀತಿಯಲ್ಲಿ 1990 ರ ದಶಕವನ್ನು ಭಾರತೀಯರು ಉದಾರೀಕರಣ ಮತ್ತು ಜಾಗತೀಕರಣಕ್ಕಾಗಿ ನೆನಪಿಸಿಕೊಂಡರೆ, ತೊಂಬತ್ತರ ದಶಕವನ್ನು ಕೆಲವು ಪದಗಳಲ್ಲಿ ವಿವರಿಸಿ ಎಂದು ಒತ್ತಾಯಿಸಿದರೆ ನಾನು ಭೀತಿ ಎಂಬ ಪದವನ್ನಷ್ಟೇ ಬಳಸಬಯಸುತ್ತೇನೆ.
ಆ ದಿನಗಳಲ್ಲಿ ಮನೆ ಮನಗಳಲ್ಲಿ ಭೀತಿ ಆವರಿಸಿತ್ತು. ಅಪ್ಪನ ಡ್ಯೂಟಿ ಮಲೆಮಹದೇಶ್ವರ ಬೆಟ್ಟದಲ್ಲಿ. ಅಲ್ಲಿಗೆ ಅವರನ್ನು ನಿಯೋಜಿಸಲಾಗಿತ್ತು. ಹರಿಕೃಷ್ಣ, ಶಕೀಲ್ ಅಹಮದ್ ಅವರನ್ನು ವೀರಪ್ಪನ ಕೊಂದ ದಿನಗಳವು. ಈಗಿನಂತೆ ಕೂತ ಕಡೆಯಿಂದಲೇ ಸಂಪರ್ಕಿಸಬಹುದಾದ ಯಾವುದೇ ಮಾರ್ಗಗಳಿಲ್ಲದ ಕಾಲವದು. ಅಪ್ಪ ಬದುಕಿದ್ದಾರೋ ಅಥವಾ ಹೆಣವಾಗಿ ಮನೆಗೆ ಬರುವರೋ ಎಂಬ ಆತಂಕ ನಮ್ಮನ್ನು ದಿನವಿಡೀ ಕುಗ್ಗಿಸುತಿತ್ತು. ಶಾಲೆಯಲ್ಲಿ “ಅಪ್ಪ ವೀರಪ್ಪನ್ ಹಿಡಿಯಲು ಹೋಗಿದ್ದಾರೆ” ಎಂದು ಗರ್ವದಿಂದ ಬೀಗುತ್ತಿದ್ದ ನಾನು, ದುಃಸ್ವಪ್ನಗಳಿಂದ ಬೆಚ್ಚಿ ಬಿದ್ದು ಹಾಸಿಗೆ ಒದ್ದೆಯಾದದ್ದು ಇದೆ.
ಆಗಸ್ಟ್ 1992 ರ ವೀರಪನ್ ಹತ್ಯಾಕಾಂಡದಿಂದ ತತ್ತರಿಸಿ ಹೋಗಿದ್ದ ಅಪ್ಪ ಕೆಲಸ ಮಾಡುತ್ತಿದ್ದ ಇಲಾಖೆಗೆ ಮತ್ತೊಂದು ಅತಿ ದೊಡ್ಡ ಸವಾಲು ಎದುರಾಗಿತ್ತು. ಡಿಸೆಂಬರ್ 6, 1992. ಇಡೀ ದೇಶವೇ ಪ್ರಕ್ಷುಬ್ದಗೊಂಡಿತ್ತು. ಸಾಮರಸ್ಯ ಸಂಪೂರ್ಣ ಮಾಯವಾಗಿ ಎಲ್ಲೆಡೆ ಅನುಮಾನ, ಆತಂಕ ಚಳಿಗಾಲದ ಮುಂಜಾನೆಯ ಮಂಜಿನಂತೆ ಹರಡಿತ್ತು. ಅಪ್ಪನ ನಿಯೋಜನೆ ರದ್ದುಗೊಳಿಸಿ ವಾಪಸ್ ನಗರಕ್ಕೆ ಕರೆಸಿಕೊಳ್ಳಲಾಯಿತು. ಅಪ್ಪ ಮನೆಯಲ್ಲಿ ಸದಾ ಆನ್ ಇಟ್ಟಿರುತ್ತಿದ್ದ ವಾಕಿಟಾಕಿ ನಮಗೆ ಕರಾಳ ದಿನಗಳ ನಿರಂತರ ವರದಿ ಒಪ್ಪಿಸುತ್ತಿತ್ತು. ಎಲ್ಲೆಡೆ ಕರ್ಫ್ಯೂ, ಗೋಲಿಬಾರ್ ನೆಡೆಯುತ್ತಿದ್ದ ದಿನಗಳಲ್ಲಿ, ಅಪ್ಪ ಬಾಣಲಿಯಿಂದ ಬೆಂಕಿಗೆ ಹಾರಿದ್ದರು.
ಭಯ, ಭೀತಿ ಮನುಷ್ಯನಿಗೆ ಹೊಸದೇನಲ್ಲ. ಅನಾದಿ ಕಾಲದಿಂದಲೂ ಮನುಷ್ಯ ಭೀತಿಯಿಂದಲೇ ಬದುಕುತ್ತಿದ್ದಾನೆ. ಕ್ರೂರ ಮೃಗಗಳ, ಬರ, ಪ್ರವಾಹ , ದಾಳಿಯ , ಅನ್ಯರ , ರೋಗರುಜಿನುಗಳ, ಸಾವಿನ ಭಯ ಮನುಷ್ಯನನ್ನು ಸದಾ ಕಾಡಿದೆ. ಆದರೆ ಈ ಎಲ್ಲಾ ಭಯ, ಭೀತಿಗಳು ಅವನ ಸಾಹಸಿ ಪ್ರವೃತ್ತಿಯನ್ನು ಇತ್ತೀಚಿನವರೆಗೆ ಕಿಂಚಿತ್ತೂ ಕಡಿಮೆ ಮಾಡಿರಲಿಲ್ಲ. ಭಯ ನೆರಳಂತೆ ಅವರನ್ನು ಹಿಂಬಾಲಿಸಿದರೂ, ಭಯವನ್ನು ಹಿಮ್ಮೆಟ್ಟಿಸಿ ಸಾಹಸ ಮಾಡುತ್ತಲೇ ಸಾಗಿದ್ದ.
ಆಧುನಿಕತೆಯ ಉದಯವಾದ ನಂತರದ ದಿನಗಳಲ್ಲಿ ಮಾನವ ರೋಗರುಜಿನುಗಳಿಗೆ ಸುಲಭವಾಗಿ ಶರಣಾಗದೆ ಬದುಕಲು ಲಸಿಕೆಗಳನ್ನು ಕಂಡು ಹಿಡಿದ, ಕ್ರೂರ ಮೃಗಗಳಿಂದ ದೂರ ಪಟ್ಟಣಗಳನ್ನು ಕಟ್ಟಿಕೊಂಡ, ಪ್ರವಾಹವನ್ನು ಪಳಗಿಸಿದ, ಬರವನ್ನು ಹತ್ತಿಕ್ಕಿದ, ಆದರೆ ಅಂದುಕೊಂಡಂತೆ ಭಯ, ಭೀತಿ ಕುಗ್ಗಿಸಿಕೊಳ್ಳಲು ಆಗಲಿಲ್ಲ. ಇದಕ್ಕೆ ಕಾರಣಗಳೇನೆಂದು ಯೋಚಿಸಿದರೆ ಈಗಿನ ದಿನಗಳಲ್ಲಿ ಬಲಿಷ್ಠ ವ್ಯಕ್ತಿಗಳು, ಸಂಘಟನೆಗಳು, ಪ್ರಭುತ್ವ, ಭಯವನ್ನು ಹುಟ್ಟಿಹಾಕಿ ಅದನ್ನು ನಿರಂತರ ಕಾಯ್ದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದರಿಂದ ಜನ ಆಕ್ರಮಣಗಳಿಗೆ ಹೆದರುತ್ತಾರೆ, ಎಂದೂ ಘಟಿಸದ ದುರಂತಗಳ ನೆನೆದು ದಿಗಿಲಾಗುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಮನಸ್ಥಿತಿಗೆ ಆಂಗ್ಲ ಭಾಷೆಯಲ್ಲಿ ಪ್ಯಾರಾನೋಯ ಎಂದು ಕರೆಯುತ್ತೇವೆ. ಆಧುನಿಕ ಜಗತ್ತಿನ ಸಮಾಜ ನಿಸ್ಸಂಶಯವಾಗಿ ಪ್ಯಾರಾನಾಯ್ಡ್ (ಭಯ ಗ್ರಸ್ತ) ಸಮಾಜ.
ಪ್ಯಾರಾನೋಯ ಎಂದರೆ ಅನುಚಿತ ಅನುಮಾನ, ಭಯ, ಭಯ ತೊಲಗಿಸಲು ಮಾಡುವ ಲೆಕ್ಕಾಚಾರವಿಲ್ಲದ ಕೆಲಸಗಳು, ಭ್ರಮೆ, ವಿಚಿತ್ರ ಅಸೂಯೆ, ಅಸಾಧಾರಣ ಕೋಪ, ಸದಾ ಅಪಾಯ ಮತ್ತು ಕ್ರೌರ್ಯಕ್ಕಾಗಿ ಕಾಯುವುದು, ಎದೆಯಾಳದ ಗೊಂದಲ. ಪ್ಯಾರಾನೋಯ ಅನ್ನೋದೊಂದು ಕೊನೆಯಿಲ್ಲದ ಕಂದಕ. ಇಂತಹ ಅಸಹಜ ಸ್ಥಿತಿಯಲ್ಲಿರುವ ಸಮಾಜದ ಆಲೋಚನಾ ಕ್ರಮ ಹೀಗಿರುತ್ತದೆ? ಭಯಗ್ರಸ್ತ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಣ್ಣ ಕತೆಗಳ ಉದಾಹರಣೆ ಬಳಸಿಕೊಳ್ಳುವುದು ಸೂಕ್ತ.

ಗುಲ್ಜಾರರ “ಕೌಫ್” ಮತ್ತು ಪಿ ಲಂಕೇಶರ ” ದಾಳಿ.”


ಕೌಫ್ (ಭಯ) ಟ್ರೈನಿನ ಬೋಗಿಯೊಳಗೆ ನಡೆಯುವ ಕತೆ. ಕೋಮುಗಲಭೆ, ಕಗ್ಗೊಲೆ, ಕರ್ಫ್ಯೂಗಳಿಂದ ನೆಮ್ಮದಿ ಕಳೆದುಕೊಂಡ ಬಾಂಬೆ ನಗರದ ಕತೆ. ಕರ್ಫ್ಯೂ ಸಡಿಲಗೊಂಡಾಗ ಕೆಡಿಗೇಡಿಗಳು ಹೊರಬಂದು ಇರಿದು, ಅಂಗಡಿಗಳಿಗೆ ಬೆಂಕಿ ಹಚ್ಚಿ ಮಾಯವಾಗುತ್ತಿದ್ದ ದಿನಗಳಲ್ಲಿ ವಾತಾವರಣ ಸುಧಾರಿಸಿದೆ ಎಂದು ಜಗತ್ತಿಗೆ ಸಾರಲು ಬಾಂಬೆಯ ಜೀವನಾಡಿಯಲ್ಲಿ ನೆತ್ತರಿನಂತೆ ಹರಿವ ರೈಲುಗಳನ್ನು ಚಲಿಸಲು ಸರ್ಕಾರ ಅನುಮತಿಯಿತ್ತ ಕಾಲವದು.
ಬರಿದಾದ ಪ್ಲಾಟ್ಫಾರ್ಮ್, ರೈಲು ಬರುವ ವೇಳೆ ಪ್ರಕಟಿಸುತ್ತಿದ್ದ ಹೊಳಪಿನ ದೀಪಗಳ ಅಂಧೇರಿ ಸ್ಟೇಷನ್ ಅದು. ಕಥಾ ನಾಯಕ ಯಾಸಿನ್ ಅಳುಕಿನಿಂದಲೇ ರೈಲನ್ನು ಏರುತ್ತಾನೆ. ಒಂದೊಂದು ಬೋಗಿಯಲ್ಲಿ ನಾಲ್ಕೈದು ಹಿಂದೂಗಳೇ ಗುಂಪು ಗುಂಪಾಗಿ ಇರುವುದನ್ನು ಕಂಡು ಯಾಸಿನ್ ಖಾಲಿ ಬೋಗಿಯನ್ನು ಮಿಂಚಿನ ವೇಗದಲ್ಲಿ ಏರಿ ಮೊಲೆಯಲ್ಲಿ ಕುಳಿತುಕೊಳ್ಳುತ್ತಾನೆ.
ಆದರೆ ಅದೇ ಬೋಗಿಯೊಳಕ್ಕೆ ಮತ್ತೊಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ. ಯಾಸಿನ್ ಆ ಕ್ಷಣವೇ ಪ್ಯಾರಾನೋಯಕ್ಕೆ ಒಳಗಾಗುತ್ತಾನೆ. ಅವನು ಕೆಲಸ ಮಾಡುತ್ತಿದ್ದ ಸಾಕಿನಕ ಬೇಕರಿ ಬೆಂಕಿಗೆ ಆಹುತಿಯಾಗಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತದ್ದು, ಹಿಂಸೆ ಕಗ್ಗೊಲೆಗಳನ್ನು ತಡೆಯಲು ಸೇನೆಯ ಆಗಮನವಾಗಿದ್ದು, ಭಯಭೀತನಾಗಿ ಸಣ್ಣ ಗಲ್ಲಿಗಳಲ್ಲಿ ಓಡಿದ್ದು, ಪರಿಚಯಸ್ಥ ಭಾವು ಎಂಬ ಹಿಂದೂ ತನ್ನ ಜೋಪಡಿಗೆ ಎಳೆದೊಯ್ದು ಅವನನ್ನು ಬದುಕಿಸಿದ್ದು ಯಾಸಿನ್ ಕಣ್ಮುಂದೆ ಹಾದು ಹೋಗುತ್ತದೆ.
ಯಾಸಿನ್ ತನ್ನ ಮನೆಗೆ ಹೋಗಿ ಐದು ದಿನಗಳೇ ಆಗಿ ಹೋಗಿರುತ್ತದೆ. ಟ್ರೈನ್ ಏರಿದ ಆತನಿಗೆ ಅಚಾನಕ್ಕಾಗಿ ಬೋಗಿಯೊಳಕ್ಕೆ ಬಂದ ಅಪರಿಚಿತನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಆತ ಹಿಂದೂವೇ ಇರಬೇಕು, ನನ್ನನು ಕೊಲ್ಲಲೆಂದೇ ರೈಲು ಏರಿದ್ದಾನೆ, ಜೇಬನಲ್ಲಿ ಚಾಕುವೇ ಇರಬೇಕು, ಆತ ನನ್ನ ಹೊಟ್ಟೆಯನ್ನು ಸೀಳಬಹುದು, ಕತ್ತು ಕೊಯ್ಯಬಹುದು ಎಂದು ಊಹೆ ಮಾಡುತ್ತಾನೆ, ನನ್ನನ್ನು ಕೊಲೆಗೈಯ್ಯಲೆಂದೇ ಬಾಗಿಲುಗಳನ್ನು ಮುಚ್ಚುತ್ತಿದ್ದಾನೆ ಎಂಬ ಸಂದೇಹ ಅವನಲ್ಲಿ ಮೂಡುತ್ತದೆ.
“ನಾನೊಬ್ಬ ಮರಾಠ. ನಾನು ಪ್ರತಿದಿನ ಮಾಂಸ ತಿನ್ನುವುದಿಲ್ಲ. ನಿನಗೆ ಬೇಕೆಂದರೆ ಹುಡುಕಿ ತರುವೆ” ಎಂದು ಜೋಪಡಿಯಲ್ಲಿ ಭಾವೂ ಹೇಳಿದ್ದು ಮತ್ತೊಂದೆಡೆ ನೆನಪಾಗುತ್ತದೆ, ನನ್ನನ್ನು ಹುಡುಕಿಕೊಂಡು ಫಾತಿಮಾ ಬಂದರೆ ಅವಳ ಗತಿಯೇನು ಎಂದು ಅರಿತು ಯಾಸಿನ್ ಮೈ ನಡುಗಿ ಹೋಗುತ್ತದೆ.
ಅಷ್ಟರೊಳಗೆ ರೈಲು ಜೋಗೇಶ್ವರಿ ದಾಟಿ ಭಹೇಂದರ್ ಸೇತುವೆ ಮೇಲೆ ಬಂದು ನಿಲ್ಲುತ್ತದೆ. ಸೇತುವೆ ಕೆಳಗೆ ಸಮುದ್ರದ ಅಲೆಗಳ ಸದ್ದು. ಆ ಅಲೆಗಳು ಹೊತ್ತು ತರುತ್ತಿದ್ದ ನೂರಾರು ಕೊಳೆತ ಹೆಣಗಳನ್ನು ಪೊಲೀಸರು ಹೊರತೆಗೆಯುವುದಕ್ಕೆ ಹರಸಾಹಸ ಪಡುತ್ತಿದ್ದುದು ಯಾಸೀನನಿಗೆ ವಿಚಲಿತನನ್ನಾಗಿ ಮಾಡುತ್ತದೆ.
ಬೋಗಿಯಲ್ಲಿದ್ದ ಅಪರಿಚಿತ ವ್ಯಕ್ತಿ ತೆರೆದಿದ್ದ ಏಕೈಕ ಬಾಗಿಲನ್ನು ಮುಚ್ಚಲು ಮುಂದಾದಾಗ ಯಾಸಿನ್ ತನ್ನೆಲ್ಲಾ ಬಲ ಬಳಸಿ ಅವನನ್ನು ಸೇತುವೆ ಕೆಳಗೆ ತಳ್ಳುತ್ತಾನೆ. ಆದರೆ ಆ ವ್ಯಕ್ತಿ ಬೀಳುವಾಗ “ಯಾ ಅಲ್ಲಾ” ಎಂದು ಕೂಗುತ್ತಾ ಕತ್ತಲಲ್ಲಿ ಮಾಯವಾಗುತ್ತಾನೆ.
ಆತ ಮುಸಲ್ಮಾನನೇ? ಭಯದ ನೇಣುಕುಣಿಕೆಯಿಂದ ಆ ಕ್ಷಣಕ್ಕೆ ಮುಕ್ತಿ ಪಡೆದ ಯಾಸಿನನಿಗೆ ಆ ಪ್ರಶ್ನೆ ಅಷ್ಟಾಗಿ ಕಾಡುವುದಿಲ್ಲ. ಸಾವಿನ ಬಾಯಿಂದ ತಪ್ಪಿಸಿಕೊಂಡೆ ಎಂದು ನಿಟ್ಟುಸಿರು ಬಿಡುತ್ತಾನೆ. ” ತಕ್ಷಣಕ್ಕೆ ನಾನೊಬ್ಬ ಮುಸಲ್ಮಾನನೆಂದು ಸಾಬೀತು ಪಡಿಸಿಕೊಳ್ಳಲ್ಲು ನನ್ನ ಬಳಿ ಯಾವ ಪುರಾವೆಗಳು ಇರಲಿಲ್ಲವೆಂದು ಫಾತಿಮಾಳಿಗೆ ಸಮಜಾಯಿಸಿ ನೀಡುತ್ತಾ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾನೆ!
ಕತೆಯುದ್ದಕ್ಕೂ ಯಾಸೀನನಾ ಆಲೋಚನೆಗಳು ಹಿಂದಿನ ಕಾಲಕ್ಕೂ ಮತ್ತು ಮುಂದಿನ ಭವಿಷ್ಯಕ್ಕೂ ಚಲಿಸುತ್ತಲೇ ಇದ್ದರು, ಕತೆ ರೈಲಿನ ಬೋಗಿಯಲ್ಲಿ ಘಟಿಸುತ್ತದೆ. ಬೋಗಿ ಯಾಸಿನಿನ ಮೆದುಳಿನಂತೆ ಒಂದು ಸೀಮಿತ ಭಯಗ್ರಸ್ತ ಸ್ಥಳದ ರೂಪಕವಾಗುತ್ತದೆ.. ಅವನ ಅನುಮಾನಗಳು ಹೆಚ್ಚಾದಂತೆ ಒಂದೊಂದೇ ಬಾಗಿಲು ಮುಚ್ಚಿಕೊಳ್ಳುತ್ತಾ ಆತ ತೀವ್ರ ಆತಂಕಕ್ಕೆ ಒಳಗಾಗಿ ಆಕ್ರಮಣಕಾರಿಯಾಗುತ್ತಾನೆ, ಒಳಿತು, ಕೆಡುಕಿನ ರೇಖೆ ಮಾಯವಾಗಿ ಕೊಲೆ ಮಾಡುತ್ತಾನೆ. ಕೊನೆಗೆ ಮಾಡಿದ ಅಪರಾಧವನ್ನೂ ಕೂಡ ವಿಚಿತ್ರ ತರ್ಕದಿಂದ ಸಮರ್ಥಿಸಿಕೊಳ್ಳುತ್ತಾನೆ.
ಲಂಕೇಶ ದಾಳಿ, 1990ರಲ್ಲಿ ಪ್ರಕಟವಾದ “ಕಲ್ಲು ಕರಗುವ ಸಮಯ” ಕಥಾ ಸಂಕಲನದ್ದು. (“ದಾಳಿ” ಓದುವಾಗ ನನಗೆ ಥಟ್ಟನೆ ನೆನಪಾಗಿದ್ದು ನೊಬೆಲ್ ಪುರಸ್ಕೃತ ಲೇಖಕ ಜೆ ಎಂ ಕಟ್ಝೀ 1980ರಲ್ಲಿ ಬರೆದ “ವೈಟಿಂಗ್ ಫ಼ಾರ್ ದ ಬಾರ್ಬೇರಿಯನ್” ಎಂಬ ಕಾದಂಬರಿ.) ಮುಸ್ಲಿಂ ರಜಾಕಾರರ ದಾಳಿಯ ನಿರೀಕ್ಷೆಯಲ್ಲಿರುವ ಭಯಗ್ರಸ್ತ ಸಮಾಜವೊಂದು ಹೇಗೆ ವರ್ತಿಸುತ್ತದೆ, ದಾಳಿಗಾಗಿ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಕಾಯುತ್ತಾ, ಮತ್ತದೇ ಕಾಯುವ ಕಾಯಕವನ್ನು ಪುನಾರಾವರ್ತಿಸುತ್ತಾ, ಕಾಯುವ ಪ್ರಕ್ಷುಬ್ಧತೆಗೆ ಸಿಲುಕಿ ವಿಸ್ಮೃತಿಗೆ ಒಳಗಾಗುವ ಮುದವೀಡು ಗ್ರಾಮದ ಕತೆಯಿದು.
ಕತೆಯಲ್ಲಿ ಜನರ ನರಗಳನ್ನು ಭಯ ಆವರಿಸಿರುವುದನ್ನ ಕಾಣುತ್ತೇವೆ. ಎಲ್ಲೆಡೆ ಅಸ್ಥಿರತೆ, ಅಸಹಜ ಘಟನೆಗಳ, ಅನುಮಾನದ, ದಾಳಿ ಮತ್ತು ಲೂಟಿಗೆ ಹೆದರಿ ತಮ್ಮ ಮನೆಯ ಒಡವೆಗಳನ್ನು ಹೂತಿಟ್ಟು ಹಳ್ಳಿಯ ಅಲ್ಪಸಂಖ್ಯಾತರ ಮೇಲೆ ಕಳುವಿನ ಆರೋಪ ಹೊರಿಸುವ, ಸಾವಿನ ಹೆದರಿಕೆಗೆ ಬಿಳಿಚಿ ಹೋದ ಮುಖಗಳ, ಅತ್ಯಾಚಾರದ ಆತಂಕಕ್ಕೆ ಸುಟ್ಟು ಕಾರಕಲಾಗದ ಚಹರೆಗಳ, ಶತ್ರುಗಳಾರು, ಮಿತ್ರರಾರೆಂದು ಗುರುತಿಸಲಾಗದಂತಹ ಮನಸ್ಥಿತಿಯ, ಶಸ್ತ್ರಾಸ್ತಗಳ ಶೇಖರಣೆಯ, ಯುದ್ಧ ತಾಲೀಮಿನ, ದಾಳಿಕಾರರು ಬಾರದಿದ್ದಾಗ ಪಕ್ಕದ ಗಿಣೀಕೆರೆ, ಸೀತಾಪುರದ ಜನರಲ್ಲಿ ಹುಟ್ಟುವ ಹೊಟ್ಟೆಕಿಚ್ಚಿನ ಕತೆ- ದಾಳಿ.
ಮೊದಮೊದಲು ದಾಳಿಯ ಅಂಚಿಕೆಯಲ್ಲಿ ಐದು ಮನೆಯಲ್ಲಿ ಮತ್ತು ಹುಡೇವುಗಳಲ್ಲಿ ಒಟ್ಟಿಗೆ ಗಸ್ತು ಕಾಯುವವರಲ್ಲಿ ಹೆಣ್ಣು ಗಂಡಿನ ಯೋಚನೆಯಾಗಲಿ, ವ್ಯಭಿಚಾರದ ಆಸೆಯಾಗಲಿ ಮೂಡದಿದ್ದರೂ ಕ್ರಮೇಣ ದಾಳಿಗಾಗಿ ಕಾಯುವ ಭಯಗ್ರಸ್ತ ಹಳ್ಳಿಯ ಜನ ನೀತಿ, ಅನೀತಿಯ ನಡುವಿನ ಗೆರೆ ಗುರುತಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಊರಲ್ಲಿ ಹೆಂಡ, ಸಾರಾಯಿ ಹೇರಳವಾಗಿ ಸಿಗುತ್ತದೆ, ಹೆಂಗಸರು ಕೂಡ ಕುಡಿದು ಮೈ ಮರೆಯುತ್ತಿದ್ದಾರೆ ಎಂಬ ಗುಬಲು ಏಳುತ್ತದೆ. ಐದು ಮನೆಗಳಿಂದ, ಹುಡೇವುಗಳಿಂದ ಮೋಜಿನ ಕತೆಗಳು ಹೊರಹೊಮ್ಮತೊಡುಗುತ್ತದೆ.
“ನಾನು ಸತ್ತೋಗ್ತೀನಿ ಮಲ್ಲಿ, ನಾನು ಸತ್ತೋಗ್ತೀನಿ” ನನ್ನಿಂದ ಕಾಯಾಕಾಗಲ್ಲ ಆ ಕಳ್ಳರಿಗಾಗಿ ಇನ್ನು ಕಾಯಾಕ್ಕಾಗಲ್ಲ” ಎಂದು ಬಸವಣ್ಣನಂತಹ ಗಂಡಸು ಕೂಡ ಅಳುವಂತಹ ಸ್ಥಿತಿಗೆ ಹಳ್ಳಿ ಹೋದಾಗ, ಕೊನೆಗೊಂದು ದಿನ ಕಪ್ಪುಬಟ್ಟೆಯ ಮುಖದ ದಾಳಿಕಾರರು ಹಳ್ಳಿಯ ಮೇಲೆ ದಾಳಿ ಮಾಡುತ್ತಾರೆ. ದೋಚುತ್ತಾರೆ. ಕುದುರೆಗಳ ಕೆನೆತ, ಬಂದೂಕಿನ ಸದ್ದು, ನೆಲಕ್ಕೊರಗಿದ ಶರೀರ, ಹರಿವ ನೆತ್ತರು ಎಲ್ಲೆಡೆ.
ಸಲೀಮ್ ಎಂಬ ಗಾಯಗೊಂಡ ದಾಳಿಕೋರನೊಬ್ಬ ಮಲ್ಲಿಯ ಮನೆಗೆ ನುಸುಳಿ ಅವಳ ಪಾದವಿಡಿಯುತ್ತಾನೆ. ಸಲೀಮನ ವಿಶಾಲವಾದ ಕಣ್ಣುಗಳಲ್ಲಿ ಘೋರ ತಪ್ಪು ಮಾಡಿದ ಪಶ್ಚಾತಾಪ. ಅಚ್ಚರಿಯಂಬಂತೆ ಆ ಕ್ಷಣಕ್ಕೆ ಮಲ್ಲಿಯ ಮನಸ್ಸಿನ ಭಯದ ಜಾಗವನ್ನು ಕಾಮ ಆವರಿಸುತ್ತದೆ. ಮಲ್ಲಿ ಮತ್ತು ರಕ್ತ ಒಸರುತ್ತಿದ್ದ ಸಲೀಮ್ ಒಂದಾಗುತ್ತಾರೆ!
ಮುಂದಿನ ದಿನ ಸಲೀಮ್ ಬಂಧನಕ್ಕೊಳಗಾಗುತ್ತಾನೆ, ಆತನನ್ನು ಆಂಜನೇಯ ಗುಡಿಯ ಎದುರಿನ ಕಂಬಕ್ಕೆ ಬಿಗಿದು ಸುಟ್ಟುಬಿಡಬೇಕೆಂಬ ತೀರ್ಮಾನಕ್ಕೆ ಹಳ್ಳಿ ಬರುತ್ತದೆ. ಹಳ್ಳಿಯ ಬುಡೇನ್ ಸಾಹೇಬರು, ಹಕೀಮ್ ಆತನಿಗೆ ಬೆಂಕಿಯಿಡುತ್ತಾರೆ. ಮಲ್ಲಿ ಯಾವುದೇ ಆಕ್ಷಪಣೆ ವ್ಯಕ್ತಪಡಿಸದೆ ಕಣ್ಣೀರಿಡುತ್ತಾಳೆ!
ಈ ಎರಡೂ ಕತೆಗಳಲ್ಲಿ ಬಳಕೆಯಾಗಿರುವ ಕೀ ವರ್ಡ್ಸ್ (Key words) ಪಟ್ಟಿ ಮಾಡಿದರೆ ನಮಗೆ ನಾವು ಬದುಕುತ್ತಿರುವ ಸಮಾಜದ ವಿವರಣೆ ಸಿಗುತ್ತದೆ. ನಾವೆಲ್ಲ ಭಯಗ್ರಸ್ತ ಸಮಾಜದಲ್ಲಿಯೇ ಬದುಕುತ್ತಿದ್ದೇವೆ ಎಂಬುದರಲ್ಲಿ ಯಾವ ಅನುಮಾನವಿಲ್ಲ. ನಮ್ಮ ಪ್ರತಿ ನಿರ್ಧಾರದ ಹಿಂದೆಯೂ ಭಯದ ಕೈವಾಡವಿದೆ. ಭಯಭೀತನಾದವನ ನಿರ್ಧಾರಗಳು ವಿವೇಕರಹಿತವಾಗಿರುತ್ತವೆ, ಅಪಾಯ ಮತ್ತು ಕ್ರೌರ್ಯಕ್ಕಾಗಿ ಆತ ಕಾಯುತ್ತಾನೆ, ಅನ್ಯರನ್ನು ಕಂಡು ಅನುಮಾನಿಸುತ್ತಾನೆ, ಅವರನ್ನು ರಾಕ್ಷಸರೆಂದು ದೂರುತ್ತಾನೆ, ಅವರ ವಿಷಯಗಳಲ್ಲಿ ಭಾವನಾಶೂನ್ಯನಾಗುತ್ತಾನೆ!
ಇಂತಹ ಭಯಗ್ರಸ್ತ ತಲುಪಿದ ಸಮಾಜಗಳಲ್ಲಿ ಕುರುಡು ಅನುಯಾಯಿಗಳ ಸಂಖ್ಯೆ ಅಧಿಕವಾಗುತ್ತದೆ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲವಾಗುತ್ತದೆ, ದ್ರುವೀಕರಣ ಸುಲಭವಾಗುತ್ತದೆ, ಅಮಾನವೀಯ ಕಾಯ್ದೆಗಳು ಜನರ ಸಮ್ಮತಿ ಪಡೆಯುತ್ತವೆ, ದೇಶದ ಸುರಕ್ಷತೆಯ ಹೆಸರಲ್ಲಿ ಎಲ್ಲರ ಮೇಲೆ ನಿಗರಾಣಿಯಿಡುವುದು ಸಹಜವೆಂದಾಗುತ್ತದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಣ್ಣಿಗೆ ರಾಚುವಂತಹ ಸತ್ಯವನ್ನು ಕಡೆಗಣಿಸಿ ಸುಳ್ಳನ್ನು ಸಮರ್ಥಿಸಿಕೊಳ್ಳುತ್ತಾರೆ…
ಹೀಗೆ ಸರ್ವಾಧಿಕಾರಿ ಅಧಿಕಾರದ ಆಸೆ ಚಿಗುರೊಡೆಯುತ್ತದೆ, ಆತನ ಹಾದಿ ಸುಗಮವಾಗುತ್ತದೆ. ಅಧಿಕಾರದ ಗದ್ದುಗೆ ಏರಿ ಆತ ನೆಲೆಯೂರುತ್ತಾನೆ.

-‌ ಹರೀಶ್‌ ಗಂಗಾಧರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page