Saturday, June 21, 2025

ಸತ್ಯ | ನ್ಯಾಯ |ಧರ್ಮ

ಭವಿಷ್ಯ ನುಡಿದ ಗುರು

ಸೆಪ್ಟಂಬರ್‌ 5 ರಂದು ದೇಶಾದ್ಯಂತ ಆಚರಿಸಲಾಗುವ ‘ಶಿಕ್ಷಕರ ದಿನಾಚರಣೆ’ಯ ಈ ಸಂದರ್ಭದಲ್ಲಿ, ಎಸ್ ಎಲ್ ಸಿ ಯಲ್ಲಿ ಕೊನೆಯಾಗಬೇಕಿದ್ದ ತನ್ನ ವಿದ್ಯಾಭ್ಯಾಸ  ಮುಂದುವರಿಯಲು ಹೆತ್ತವರ ಮನವೊಲಿಸಿ ಪ್ರತಿಯೊಂದು ಹಂತವೇರುವಲ್ಲಿ ತಾನು ಓದಿದ  ಹೈಸ್ಕೂಲ್ ಟೀಚರ್ಸ್ ಗಳ ಪಾತ್ರವೇ ದೊಡ್ಡದು ಎಂದು ನೆನಪಿಸಿಕೊಳ್ಳುತ್ತಾರೆ ಮಂಗಳೂರಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕರಾಗಿರುವ ಆಯಿಷಾ ಪೆರ್ನೆ.

ನನ್ನ ಜೀವನದಲ್ಲಿ ಹೈಸ್ಕೂಲ್ ಮೂರು ವರ್ಷ ಮರೆಯಲಾಗದ್ದು ಅಥವಾ ಪ್ರಶ್ನಾತೀತವಾದದ್ದು ಅಂತಾನೇ ಹೇಳಬಹುದು. ಆ ಸಮಯದಲ್ಲಿ ನನ್ನೂರ ಹೈಸ್ಕೂಲ್ ತುಂಬಾ ಫೇಮಸ್ ಆಗಿತ್ತು. ನನ್ನೂರಿನವರಿಗಿಂತಲೂ ಪರ ಊರಿನವರು,  ಎಲ್ಲಿಯತನಕ ಅಂದರೆ ಬಿ.ಸಿ ರೋಡ್, ಅಡ್ಯಾರ್ ಕಡೆಯಿಂದಲೂ ಪೆರ್ನೆ ಹೈಸ್ಕೂಲ್ ಹುಡುಕಿಕೊಂಡು ಬರ್ತಾ ಇದ್ದರು. ಅದಕ್ಕೆ ಕಾರಣ ಅಲ್ಲಿನ ಶಿಕ್ಷಣ.

ಶೀರಾಮಚಂದ್ರ ಪೆರ್ನೆ ಹೈಸ್ಕೂಲ್ ಎಲ್ಲೆಡೆ ಹೆಸರುವಾಸಿಯಾಗಿದ್ದು ಅಲ್ಲಿ ಎಂಟು, ಒಂಬತ್ತು, ಹತ್ತು ಈ ಮೂರು ತರಗತಿಗಳಿಗೂ ಶಿಕ್ಷಕಿಯರು ಇರದೆ ಬರೇ ಶಿಕ್ಷಕರು ಮಾತ್ರ ಇದ್ದರು. ಎಲ್ಲರೂ ನೋಡಲು ಆರಡಿ ಎತ್ತರದ ಕಟ್ಟುಮಸ್ತಾದ, ಆ ವಯಸ್ಸಿನ ಮಕ್ಕಳು ಒಮ್ಮೆ ನೋಡುವಾಗಲೇ ಹೆದರುವಂತಹ ಗಟ್ಟಿಮುಟ್ಟಾದ ಶಿಸ್ತಿನ ಸರ್ ಗಳು. ಅದರಲ್ಲಿ ಒಂದಿಬ್ಬರು ಗಿಡ್ಡಕ್ಕಿದ್ದರೂ ಆ ಎತ್ತರದ ಸರ್ ಗಳಿಗಿಂತ ತುಂಬಾನೇ ಜೋರಿದ್ದರು. ನಗು ಅವರ ಬಳಿ ಸುಳಿಯದಂತೆ ನಗುವಿಗೆ ಅಷ್ಟ ದಿಗ್ಬಂಧನ ಹಾಕಿದಂತೆ ಕಾಣುತ್ತಿದ್ದರು.

ಮಕ್ಕಳ ಹೆತ್ತವರಿಗಂತೂ ಪೆರ್ನೆ ಶಾಲೆ ಒಂಥರಾ ತವರು ಮನೆಯಂತೆ ಖುಷಿ ಕೊಡುವ ತಾಣ. ಆ ಶಾಲೆ  ಶಾಪವಾಗಿ ಕಂಡದ್ದು ಮಕ್ಕಳಿಗೆ ಮಾತ್ರ. ಶಾಲೆಯ ಟೀಚರ್ಸ್ ಗಳ  ಶಿಸ್ತಿನ ಚರಿತ್ರೆ ಪೂರಾ ತಿಳಿದ ಮೇಲೆಯೂ ಬೇರೆ ವಿಧಿಯಿಲ್ಲದೆ ಊರಿನ ಹೆಚ್ಚಿನ ಎಲ್ಲಾ ಮಕ್ಕಳು ಹೆತ್ತವರ ತೀರ್ಮಾನದಂತೆ ಅದೇ ಶಾಲೆಗೆ ಹೋಗಬೇಕಿತ್ತು.  ಅದೆಷ್ಟೇ ಜೋರಿನ ಗುರುಗಳಿದ್ದರೂ ಮಕ್ಕಳು ಮಾತ್ರ  ಅಲ್ಲಿದ್ದ  ಟೀಚರ್ಸ್ ನವರಿಗೆ ಚಂದದ ಅಡ್ಡ ಹೆಸರುಗಳನ್ನಿಟ್ಟಿದ್ದರು. ಅದೂ ನನ್ನ ಮಾವ ಅದೇ ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು. ನಂತರ ಮುಂದಿನ ಪೀಳಿಗೆಗೂ ಮುಂದುವರಿಯುತ್ತಾ ಹೋಯಿತು (ನಾನು ಹೈಸ್ಕೂಲ್ ತಲುಪುವಾಗ ಮಾವನಿಗೆ ಮದುವೆಯಾಗಿ ಎರಡು ಮಕ್ಕಳಿದ್ದರು).

ಒಂದು ಸಂಸ್ಥೆ, ಶಾಲೆ ಪ್ರಸಿದ್ಧಿ ಪಡೆಯಬೇಕಾದರೆ ಅಲ್ಲಿರುವ ಶಿಕ್ಷಕರ ಪಾತ್ರ ಬಹುಮುಖ್ಯವಾದುದು. ಅದಕ್ಕೇನೆ ನಮ್ಮ ಶಾಲೆ ಅಷ್ಟೊಂದು ಫೇಮಸ್ ಆಗಿದ್ದು. ಅಲ್ಲಿದ್ದಿದ್ದು ಶಿಕ್ಷಣದ ವಿಷಯದಲ್ಲಿ ಯಾವುದಕ್ಕೂ ರಾಜಿಯಾಗದ ಗುರುಗಳು. ಹೋಮ್ ವರ್ಕ್ ಯಾಕೆ ಮಾಡಿಲ್ಲ ಅಂತ ಕೇಳಿದರೆ ಸಾಕು ಗಡಗಡ ನಡುಗ್ತಿದ್ರು ಮಕ್ಕಳು. ಅದರಲ್ಲೂ ಗಣಿತ ಟೀಚರ್ ಒಬ್ಬರಿದ್ದರು ಗೋಪಾಲಕೃಷ್ಣ ಸರ್ ಅಂತ. ಅವರ ನಿಜನಾಮ ಗೊತ್ತಿದ್ದವರು ತುಂಬಾ ಕಡಿಮೆ. ಅವರಷ್ಟು ಜೋರಿನ ಟೀಚರ್ ಮತ್ತೆಂದೂ ನಾ ಕಂಡಿಲ್ಲ. ಪೆರ್ನೆ ಶಾಲೆ ಎಂದರೆ ಆ ಸರ್. ಅದೂ ಅವರ ಅಡ್ಡನಾಮದಿಂದ ಗುರುತಿಸಿಕೊಂಡಿತ್ತು. ಅವರ ತರಗತಿಯಲ್ಲಿದ್ದ ಆ ಮೌನ ಇನ್ಯಾವ ತರಗತಿಯಲ್ಲಿ ನಾ‌ ಕಂಡಿಲ್ಲ‌. ಆ ನಿಶ್ಯಬ್ದ ಕೊಠಡಿಯೇ ನಮ್ಮನ್ನು ಕಟ್ಟಿಹಾಕುತ್ತಿತ್ತು. ಸರ್ ಬೋರ್ಡ್ ಕಡೆ ತಿರುಗಿ ಲೆಕ್ಕ ಬರೀತಿದ್ದರೆ ಈ ಕಡೆ ಪೆನ್ನು, ರಬ್ಬರ್ ಬಿತ್ತೆಂದು ಬಗ್ಗಿದರೆ ಆ ಕ್ಷಣವೇ ಜಾದೂ ಮಾಡಿದಂತೆ ಅವರ ಅರಿವಿಗೆ ಬರುತ್ತಿತ್ತು. ಮತ್ತೆ ಅದಕ್ಕೂ ಪನಿಷ್ಮೆಂಟ್. 

ಆದರೆ ಗೋಪಾಲಕೃಷ್ಣ ಸರ್ ಅದೆಷ್ಟೇ ಜೋರಿದ್ದರೂ ನನ್ನ ಪಾಲಿಗೆ ಮಾತ್ರ ಗೋಲ್ಡನ್ ಸರ್ ಆಗಿದ್ದರು. ಅದ್ಯಾಕೋ ಗೊತ್ತಿಲ್ಲ ಅವರ ತರಗತಿಯಲ್ಲಿ ಒಮ್ಮೆಯೂ‌ ಪೆಟ್ಟು ತಿಂದವಳಲ್ಲ. ನನ್ನ ತಪ್ಪಿದ್ದರೂ ನನಗೊಮ್ಮೆಯೂ ಬೈದವರಲ್ಲ. ಹಾಗಂತ ಒಮ್ಮೆಯೂ ಆತ್ಮೀಯತೆಯಿಂದ  ಮಾತಾಡಿಸಿದವರೂ ಅಲ್ಲ. ನನ್ನದೊಂದು ಐದು ಮಂದಿಯ ಗ್ಯಾಂಗ್ ಇತ್ತು. ಏನಾದರೊಂದು ಕಿತಾಪತಿ ಮಾಡ್ತಾ ಬೈಗುಳ ತಿಂತಾ ಇರ್ತಿದ್ವಿ. ಆದರೆ ಈ ಸರ್ ನನಗೆ ಮಾತ್ರ ಬೈತಿರಲಿಲ್ಲ.

ಅದಾಗ ಎಸ್ ಎಸ್ ಎಲ್ ಸಿ ತಲುಪಿದ್ವಿ. ಅದೇ ವರ್ಷ ಹೈಸ್ಕೂಲ್ ಮಕ್ಕಳಿಗೂ ಬಿಸಿಯೂಟ ಪ್ರಾರಂಭಿಸಿದರು. ಅದು ನಮಗೆ ಮೊದಲ ಖುಷಿ ಮತ್ತು ಕೊನೆಯದೂ ಕೂಡಾ. ಎಸ್ ಎಲ್ ಸಿ ಮಕ್ಕಳನ್ನಂತೂ ತುಂಬಾ ಕಟ್ಟುನಿಟ್ಟಾಗಿ ಇಡ್ತಿದ್ದರು. ಎಲ್ಲೂ ಹೋಗುವಂಗಿಲ್ಲ,‌ ಕೂರಂಗಿಲ್ಲ, ನಿಲ್ಲಂಗಿಲ್ಲ ಅದೂ ಇದೂ ಅಂತ ಒಂದಾ ಎರಡಾ ಎಲ್ಲದಕ್ಕೂ ನಿಯಮಗಳು. ಇದರಿಂದ ನಮಗೆ ಉಸಿರಾಡಲೂ ಕಷ್ಟವಾದಂತಹ ಅನುಭವ ಆಗ್ತಿತ್ತು ಹೆಚ್ಚಾಗಿ‌   ನನ್ನ ಟೀಮಿನವರಿಗೆ.

ಒಂದಿನ ಬೆಳಗ್ಗಿನ ಸ್ಟಡಿ ಪಿರಿಯೆಡ್ ನಲ್ಲಿ ಬಿಸಿಯೂಟದ ತಯಾರಿಗೆ ತರಕಾರಿ ಕತ್ತರಿಸ್ತಾ ಅಡುಗೆ ಮನೆಯಲ್ಲಿ ಕೂತಿದ್ವಿ. ನಮ್ಮ ತರಗತಿ ಟೀಚರ್ ಗೋಪಾಲಕೃಷ್ಣ ಸರ್. ಅದೂ ಮೊದಲ ಪಿರಿಯೆಡ್ ಅವರದ್ದೇ ಆಗಿತ್ತು. ಸ್ಟಡಿ ಪಿರಿಯೆಡ್ ನಲ್ಲೂ ತರಗತಿ ತೆಗೆದುಕೊಳ್ಳುವ ಅವರು ಅಂದು ಬೇಗನೇ ಕ್ಲಾಸಿಗೆ ಬಂದಿದ್ದರು. ಎಲ್ಲರೂ ಓದುತ್ತಾ ಕುಳಿತಿರಬೇಕಾದರೆ ನಾವು ಐದು ಮಂದಿ ಕಂಡಿಲ್ಲ. ಅದೂ ನಾನು  ಕ್ಲಾಸಿನ ಲೀಡರ್ ಬೇರೆ. ಜವಾಬ್ದಾರಿಗಳಿಂದ ತಪ್ಪಿಕೊಳ್ಳುವ ನನ್ನ‌ನ್ನು ಅದೇ ಗೋಪಾಲಕೃಷ್ಣ ಸರ್ ಲೀಡರ್ ಮಾಡಿದ್ದು. ಜವಾಬ್ದಾರಿಗಳಿದ್ದರೆ ಸೈಲೆಂಟ್ ಆಗಿರಬೇಕಲ್ವ ಅದು ನನ್ನಿಂದ ಆಗ್ತಿರಲಿಲ್ಲ. ಸರಿ ವಿಷಯಕ್ಕೆ ಬರುವ.. ಅಷ್ಟು ಹೊತ್ತಿಗೆ ಯಾರೋ ಒಬ್ಬಳು ಅಡುಗೆ ಕೋಣೆಯಲ್ಲಿರುವ ವಿಷಯ ಹೇಳಿದಾಗ ಹುಡುಕಿಕೊಂಡು ಬಂದು ಮೊದಲಿದ್ದವರಿಗೆ ನಾಗರಬೆತ್ತದಲ್ಲಿ  ನಾಲ್ಕು ಬಿತ್ತು. ನಾನೇಗೋ ತಪ್ಪಿಸಿ ಕ್ಲಾಸಿಗೆ ಬಂದೆ. ಮೊದಲ ಪಿರಿಯೆಡ್ ಮಾತ್ರ ಉಪದೇಶದಲ್ಲಿಯೇ ಮುಗಿಯಿತು. ಆದರೆ ಇಲ್ಲಿಯೂ ನನ್ನ ಪಾಲಿಗೆ ಒಂದು ಅಚ್ಚರಿ ಕಾದಿತ್ತು. ಆ ನಾಲ್ಕು ಮಂದಿಗೆ ಬೈದ ಸರ್ ನನಗೇನೂ ಅಂದಿಲ್ಲ. ನನ್ನನ್ನು ಕೂತುಕೊಳ್ಳಲು ಹೇಳಿ ಅವರಿಗೆ ಚೆನ್ನಾಗಿ  ಬೈಗುಳದ ಉಪದೇಶ  ಕೊಟ್ಟರು. ಆ ದಿನ ಪೂರಾ ನನಗ್ಯಾಕೆ ಸರ್ ಏನೂ ಅಂದಿಲ್ಲ ಅನ್ನುವುದು ನನ್ನ ಚಿಂತೆಯಾಗಿತ್ತು. ಅದೂ ಅಲ್ಲದೇ ನಾನು ತರಗತಿ ಲೀಡರ್ ಆಗಿದ್ದೆ… ಸರ್ ಯಾಕೆ ಹೀಗೆ ಮಾಡಿದ್ರು ಅನ್ನುವುದು ದೇವರಾಣೆಗೂ ನನಗೆ ತಿಳಿದಿಲ್ಲ. ಅದು  ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ‌ ಉಳಿದಿದೆ. ಆದರೆ ಮತ್ತೆಂದೂ ಆ ಶಾಲೆಯಲ್ಲಿ ಕೊನೆಯ ದಿನಗಳವರೆಗೆ ಅಂತಹ ತಪ್ಪುಗಳು ನನ್ನಿಂದ ಆಗದೆ ಹಾಗೆ ನೋಡಿಕೊಂಡಿದ್ದೆ‌. 

ಅದು ಹೈಸ್ಕೂಲ್ ಜೀವನದ ಕೊನೆಯ ಹಂತಕ್ಕೆ ಬಂದಿದ್ವಿ. ಫೇರ್ ವೆಲ್ ಮುಗಿಸಿ ಎಕ್ಸಾಮ್ ಗೆ ರಜೆ ಸಿಕ್ತು. ಕೊನೆಯ ದಿನದಂದು ಎಂದೂ ಮಾತಾಡದ, ಗರಂ ಆಗಿದ್ದ ಅದೇ ನಮ್ಮ ಶಿಸ್ತಿನ ಗೋಪಾಲಕೃಷ್ಣ ಸರ್ ನನ್ನನ್ನು ಆಫೀಸ್ ರೂಮಿಗೆ ಕರೆಸಿಕೊಂಡರು‌. ಏನೂ ಹೆಚ್ಚಿನ ಆತ್ಮೀಯತೆಯ ಮಾತುಕತೆಯಾಗಿರಲಿಲ್ಲ. ಮುಂದೆ ಏನ್ಮಾಡ್ಬೇಕಂತಿದ್ದೀಯಾ..? ಅಂತ ಅದೇ ಗಂಟು ಮುಖದೊಂದಿಗೆ ಗಡಸು ಧ್ವನಿಯಲ್ಲಿ ಏಕಾಏಕಿ ಕೇಳಿದರು. ಎಂದೂ ಇಲ್ಲದ ಅವರ ಈ ಪ್ರಶ್ನೆಗೆ ಏನೂ ಉತ್ತರಿಸಲಾಗದೆ ಹಾಗೇ ಗರಬಡಿದಂತೆ ನಿಂತುಬಿಟ್ಟಿದ್ದೆ. ಮತ್ತೆ ಅವರೇ ಮಾತು ಮುಂದುವರಿಸಿದರು…”ಒಳ್ಳೆಯ ಭವಿಷ್ಯ ಇದೆ… ಎಂದೂ ಹಿಂಜರಿಯಬೇಡ‌… ನಿನ್ನ ಮುಂದೆ ದೊಡ್ಡ ಜವಾಬ್ದಾರಿಗಳಿವೆ ಮುನ್ನುಗ್ಗು.” ಅಂತ ಒಂದೇ ಸಮನೆ ಹೇಳಿ, ಆಯಿತು.. ಹೊರಡು ಅಂತ ಕಳಿಸಿದ್ದರು. ಆ ಕ್ಷಣಕ್ಕೆ ಇವರು ಯಾಕೆ ಈ ತರ ಹೇಳ್ತಿದ್ದಾರೆ.. ಒಂದು ಥ್ಯಾಂಕ್ಸ್ ಕೂಡಾ ಹೇಳದೇ ಅವರ ಆ ಮಾತುಗಳನ್ನೂ ಅಷ್ಟಾಗಿ ತೆಗೆದುಕೊಳ್ಳದೆ ಅದೇ ಕೊಠಡಿಯಲ್ಲಿ ಬಿಟ್ಟು ಹೊರಬಂದಿದ್ದೆ. 

ಇಂದು ಆ ಸರ್ ಹೇಳಿದ ಮಾತುಗಳು ಪದೇ ಪದೇ ಕಾಡುತ್ತಿರುತ್ತವೆ. ಐದು ಮಂದಿಯಲ್ಲಿ ನನ್ನೊಬ್ಬಳಿಗೆ ಮಾತ್ರ ಉನ್ನತ ಶಿಕ್ಷಣ ಪಡೆಯುವ ಸೌಭಾಗ್ಯ ಸಿಕ್ಕಿದ್ದು. ಸರ್ ಭವಿಷ್ಯ ಹೇಳಿದ್ರಾ ಅಂದು ಅಂತ ಒಮ್ಮೊಮ್ಮೆ ಅನಿಸಿದ್ದಿದೆ. ಗೋಪಾಲಕೃಷ್ಣ ಸರ್ ಭವಿಷ್ಯ ಮಾತ್ರ ಅಲ್ಲ ಎಸ್ ಎಲ್ ಸಿ ಯಲ್ಲಿ ಕೊನೆಯಾಗಬೇಕಿದ್ದ ನನ್ನ ವಿದ್ಯಾಭ್ಯಾಸ  ಮುಂದುವರಿಯಲು ಈ ಹೈಸ್ಕೂಲ್ ಟೀಚರ್ಸ್ ಗಳ ಪಾತ್ರ ತುಂಬಾನೇ ಇದೆ. ಹೆತ್ತವರ ಮನವೊಲಿಸಿ ಶಿಕ್ಷಣದಲ್ಲಿ ಪ್ರತಿಯೊಂದು ಹಂತವೇರಲು ಪ್ರೋತ್ಸಾಹ ನೀಡಿದವರು ಹೈಸ್ಕೂಲ್ ಶಿಕ್ಷಕರು. ಅದರಲ್ಲೂ ಆಗಿನ ಪ್ರಾಂಶುಪಾಲರಾದ ಐತಪ್ಪ ಸೇನವ ಸರ್. 

ತದನಂತರದ ಶೈಕ್ಷಣಿಕ ಜೀವನದಲ್ಲಿ ಬಂದ ಗುರುಗಳು ಹಲವರು. ಈ ದಿನ ನನಗೆ ಒಂದೊಳ್ಳೆಯ ಸ್ಥಾನ ಸಿಕ್ಕಿದೆ ಅಂದರೆ ಅದು ನನ್ನೆಲ್ಲಾ ಶಿಕ್ಷಕರಿಂದ ಸಾಧ್ಯವಾಗಿದ್ದು. ಗುರುಗಳು ಇಲ್ಲದಿದ್ದರೆ ನಾನು ಶೂನ್ಯ. ಈ ಕ್ಷಣಕ್ಕೆ ನನ್ನೆಲ್ಲಾ ಗುರುವರ್ಯರನ್ನು ನೆನೆಸುತ್ತಾ….ಗೌರವಾನ್ವಿತ ಶಿಕ್ಷಕರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.

ಆಯಿಷಾ ಪೆರ್ನೆ,ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕರು, ಮಂಗಳೂರು

ಇದನ್ನೂ ಓದಿ- ಗೌರಿಯಿಲ್ಲದ ಆರು ವರ್ಷಗಳು‌

Related Articles

ಇತ್ತೀಚಿನ ಸುದ್ದಿಗಳು

You cannot copy content of this page