Friday, June 14, 2024

ಸತ್ಯ | ನ್ಯಾಯ |ಧರ್ಮ

ಹಾಸನ: ಕಾಡಾನೆ ದಾಳಿ, ಯುವಕ ಸಾವು

ಸಕಲೇಶಪುರ: ಕಾಡಾನೆಯ ದಾಳಿಗೀಡಾಗಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಿಂದ ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತಾಗಿ ಪರಿಶೀಲನೆ ನಡೆಸಿ. ಸಾವನ್ನಪ್ಪಿರುವ ವ್ಯಕ್ತಿ, ಮನು (34) ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಕಾಡಾನೆ ದಾಳಿಯಿಂದ ಈ ಯುವಕನೂ ಸೇರಿದಂತೆ, ಈ ಪ್ರದೇಶದಲ್ಲಿ ಇದುವರೆಗೆ ಒಟ್ಟು 76 ಜನರು ಬಲಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಕುರುಡಾಗಿರುವುದರ ವಿರುದ್ಧ ಜನರು ಕೆಂಡ ಕಾರುತ್ತಿದ್ದಾರೆ. ಕಾಡಾನೆ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಹಿಡಿಯಬೇಕೆಂದು ಆಗ್ರಹಿಸುತ್ತಿದ್ದಾರೆ.

ಘಟನೆಯನ್ನು ಉಲ್ಲೇಖಿಸಿ ಸ್ಥಳೀಯ ಶಾಸಕ ಎಚ್‌. ಕೆ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ತಾಲ್ಲೂಕಿನಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಇದು ದುರಾದೃಷ್ಟಕರ ಸಂಗತಿ, ನಾವು ಆನೆ ದಾಳಿ ಕುರಿತು ಬಹಳಷ್ಟು ಹೋರಾಟ ಮಾಡಿದ್ದರು ಕೂಡ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ, ಹೀಗಾಗಿ ದಾಳಿ ಮುಂದುವರೆದಿದೆ ಎಂದು ತಿಳಿಸಿದರು. ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ ಅವರು ಅಲ್ಲಿಂದಲೇ ಸುದ್ದಿ ತಿಳಿದಾಕ್ಷಣ ಪ್ರತಿಕ್ರಿಯಿಸಿದ್ದಾರೆ.

ಘಟನೆಯ ಕುರಿತು ಉಸ್ತುವಾರಿ ಸಚಿವರ ಬಳಿ ಈಗಾಗಲೇ ಕರೆ ಮಾಡಿ, ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳುವುದರೊಂದಿಗೆ, ಮೃತನ ಕುಟುಂಬಕ್ಕೆ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು