Friday, June 14, 2024

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣ: ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳಾನಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ವಿರುದ್ಧ ದ್ವೇಷ ಭಾಷಣ ಆರೋಪ ಹೊರಿಸಿ ಪ್ರಕರಣ ದಾಖಲಿಸಲು ಅಲ್ಲಿನ DMK ಸರಕಾರ ರಾಜ್ಯ ಪೊಲೀಸರಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಸಾಮಾಜಿಕ ಕಾರ್ಯಕರ್ತ ಪಿಯೂಷ್‌ ಮಾನುಷ್‌ ಎನ್ನುವವರು ಮಾಜಿ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಹಾಗೂ ಯೂಟ್ಯೂಬರ್‌ ರಾಜವೇಲ್‌ ನಾಗರಾಜನ್‌ ಎನ್ನುವವರ ವಿರುದ್ಧ ಕ್ರಿಶ್ಚಿಯನ್‌ ಮಿಷನರಿಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಮಾಜದಲ್ಲಿ ದ್ವೇಷವನ್ನು ಹರಡಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಅಣ್ಣಾಮಲೈ ಅವರ ಮಾತುಗಳು ‘ದ್ವೇಷ ಭಾಷಣ’ದ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆನ್ನುವ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಿದೆ ಮತ್ತು ಭಯ ಅಥವಾ ಆತಂಕವನ್ನು ಉಂಟುಮಾಡುವ ಮತ್ತು ಎರಡು ಧರ್ಮಗಳ ನಡುವೆ ದ್ವೇಷ ಅಥವಾ ವೈಷಮ್ಯವನ್ನು ಉಂಟುಮಾಡುವ ಸಾಧ್ಯತೆಗಳೆರಡನ್ನೂ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಿದೆ.

ಸೇಲಂನ ಸಾಮಾಜಿಕ ಕಾರ್ಯಕರ್ತರಾದ ಪಿಯೂಷ್ ಮಾನುಷ್ ಎನ್ನುವವರು ಸೇಲಂ ನಗರ ಪೊಲೀಸ್ ಆಯುಕ್ತರಿಗೆ ಅಣ್ಣಾಮಲೈ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ನೀಡಿರುವುದಾಗಿ ದೂರಿ ಅರ್ಜಿ ಸಲ್ಲಿಸಿದ್ದರು. ಅಣ್ಣಾಮಲೈ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ವಿದೇಶದಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ದ್ವೇಷಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತತು.

ಎರಡು ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಬಿಜೆಪಿ ನಾಯಕ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ ಎನ್ನುವುದು ಪಿಯೂಷ್‌ ಅವರ ವಾದ. ಆದ್ದರಿಂದ ಅಣ್ಣಾಮಲೈ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 505 (3), 120 ಎ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ 156 (3), 200 ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

ಆದರೆ ಪೊಲೀಸರು ದೂರನ್ನು ಕೈಗೆತ್ತಿಕೊಂಡು ಪ್ರಕರಣ ದಾಖಲಿಸಿಕೊಳ್ಳದ ಕಾರಣ ಪಿಯೂಷ್‌ ಕೋರ್ಟ್‌ ಮೆಟ್ಟಿಲು ಏರಿದ್ದರು. ದೂರುದಾರರ ವಾದವನ್ನು ಆಲಿಸಿದ ಕೋರ್ಟ್‌ ಈ ಕುರಿತು ಸರ್ಕಾರದಿಂದ ಅನುಮತಿ ತೆಗೆದುಕೊಳ್ಳುವಂತೆ ಸೂಚಿಸಿತ್ತು. ನಂತರ ಪಿಯೂಷ್‌ ಅವರು ಸೇಲಂ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅವರು ಆ ದೂರನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅರ್ಜಿಯನ್ನು ನೋಡಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವಂತೆ ದ್ವೇಷ ಭಾಷಣದ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿರುವುದರಿಂದಾಗಿ, ನವೆಂಬರ್ 4ರಂದು ಸೇಲಂ ನ್ಯಾಯಾಲಯದಲ್ಲಿ ಈ ಸಂಬಂಧ ಪ್ರಕರಣ ವಿಚಾರಣೆಗೆ ಬರಲಿದೆ.

Related Articles

ಇತ್ತೀಚಿನ ಸುದ್ದಿಗಳು