Tuesday, June 18, 2024

ಸತ್ಯ | ನ್ಯಾಯ |ಧರ್ಮ

ಆರ್ ಎಸ್ ಎಸ್ ಸಂಘಟನೆಗೆ ಶಾಕ್ ನೀಡಿದ ಕೇರಳ ಹೈಕೋರ್ಟ್: ದೇವಸ್ಥಾನದಲ್ಲಿ ಆಯುಧ ತರಬೇತಿಗೆ ನಿಷೇಧ

RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (RSS) ಶಾಕ್ ನೀಡಿದ ಕೇರಳ ಹೈಕೋರ್ಟ್. ತಿರುವನಂತಪುರಂ ಜಿಲ್ಲೆಯ ಶರ್ಕರಾ ದೇವಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಆರ್‌ಎಸ್‌ಎಸ್‌ ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ತಡೆಯಲು ಆದೇಶ ನೀಡುವಂತೆ ಕೋರಿ ಇಬ್ಬರು ಭಕ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.

ಶರ್ಕರಾ ದೇವಿ ದೇವಸ್ಥಾನವು ಟ್ರಾವೆಂಕೋರ್ ಬೋರ್ಡ್ ಅಡಿಯಲ್ಲಿದೆ. ಟ್ರಾವೆಂಕೋರ್‌ ದೇವಸ್ಥಾನಂ ಮಂಡಳಿಯು ಈ ಹಿಂದೆ ನೀಡಿದ್ದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ, ಮಂಡಳಿಯು ನಡೆಸುವ ದೇಗುಲಗಳಲ್ಲಿ ಆರ್‌ಎಸ್‌ಎಸ್ ನಡೆಸುವ ಸಾಮೂಹಿಕ ವ್ಯಾಯಾಮಗಳನ್ನು ನಿಷೇಧಿಸಿದೆ.

“ತಿರುವಾಂಕೂರು ದೇವಸ್ಥಾನ ಮಂಡಳಿಯ ನಿರ್ವಹಣೆಯಲ್ಲಿರುವ ದೇವಾಲಯದ ಆವರಣದಲ್ಲಿ ಯಾವುದೇ ಸಾಮೂಹಿಕ ಡ್ರಿಲ್ ಅಥವಾ ಶಸ್ತ್ರಾಸ್ತ್ರ ಅಭ್ಯಾಸವನ್ನು ಅನುಮತಿಸಲಾಗುವುದಿಲ್ಲ. ಚಿರೈನ್ಕೀಜು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಡಳಿತಾಧಿಕಾರಿಗೆ ಅಗತ್ಯ ಸಹಾಯವನ್ನು ನೀಡಬೇಕು. ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,’’ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಶಾಖೆಗಳು ಆಯೋಜಿಸುವ ಸಾಮೂಹಿಕ ಡ್ರಿಲ್‌ಗಳನ್ನು ನಿಷೇಧಿಸುವ ಮೇ 18ರ ಆದೇಶವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇರಳದ ದೇವಾಲಯಗಳನ್ನು ನಿರ್ವಹಿಸುವ ಟ್ರಾವೆಂಕೋರ್ ಬೋರ್ಡ್ ಸುತ್ತೋಲೆ ಹೊರಡಿಸಿದೆ. 2021ರ ಆದೇಶವನ್ನು ನಿರಾಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ಥಾನಂ ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.

2016ರಲ್ಲಿ, ದೇವಾಲಯದ ಸಂಕೀರ್ಣಗಳಲ್ಲಿ ಆರ್‌ಎಸ್‌ಎಸ್‌ ಯಾವುದೇ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನೀಡದಂತೆ ನಿಷೇಧಿಸಿ ಮಂಡಳಿಯು ಸುತ್ತೋಲೆ ಹೊರಡಿಸಿತ್ತು. ನಂತರ, ಮಂಡಳಿಯು ಮಾರ್ಚ್ 30, 2021ರಂದು ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. 2016ರಲ್ಲಿ ಅಂದಿನ ಧಾರ್ಮಿಕ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳದ ದೇವಾಲಯಗಳನ್ನು ಆಯುಧ ಕೇಂದ್ರವನ್ನಾಗಿ ಮಾಡಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಎಂದು ಸರ್ಕಾರಕ್ಕೆ ದೂರು ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು