Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಜಾಬ್ ಪ್ರಕರಣ | ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶಪಾಲ ಸುವರ್ಣರ ಮೇಲೆ ಪರಿಣಾಮ ಬೀರಬಹುದೇ?  

ಉಡುಪಿ, ಎಪ್ರಿಲ್‌ 13 : ಕಾಪು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಯ ಯಶಪಾಲ ಸುವರ್ಣ ಅವರಿಗೆ ಉಡುಪಿಯಲ್ಲಿ ಟಿಕೆಟ್ ನೀಡಲಾಗಿದೆ. ಅದರ ಬೆನ್ನಿಗೇ ಬಂಡಾಯ, ಪಕ್ಷೇತರ ಇತ್ಯಾದಿ ಸುದ್ದಿ ಮಾಡಿಸಿದ್ದ ರಘುಪತಿ ಭಟ್ಟರು ಅಂತಿಮವಾಗಿ ಕಣ್ಣೀರಲ್ಲಿ ಕೈತೊಳೆದುಕೊಂಡು ಸುಮ್ಮನಾಗಿದ್ದಾರೆ. 

ಇತ್ತ ಯಶಪಾಲ ಪಾಳಯದಲ್ಲಿ ಪಟಾಕಿ ಸಂಭ್ರಮ ನಡೆಯುತ್ತಿರುವಾಗ, ಪ್ರಗತಿಪರ ಬಳಗ ಮತ್ತೆ ಹಿಜಾಬು, ಆದಿ ಉಡುಪಿ ಬೆತ್ತಲೆ ಪ್ರಕರಣ ಹಾಗೂ ಯಶಪಾಲ ಅಧ್ಯಕ್ಷರಾಗಿರುವ ಮಹಾಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣಗಳನ್ನು ಮುನ್ನೆಲೆಗೆ ತರುತ್ತಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್‌ಗಳು ಮೊಗವೀರ ಅಭ್ಯರ್ಥಿಗಳ ಪಾಲಾಗಿರುವುದು ವಿಶೇಷವೆನಿಸದಿದ್ದರೂ, ಟಿಕೇಟು ಪಡೆದ ಇಬ್ಬರೂ ಅಭ್ಯರ್ಥಿಗಳ ಪರ ಮೊಗವೀರ ಉದ್ಯಮಿ ಜಿ. ಶಂಕರ್ ಟವೆಲ್ ಹಾಸಿದ್ದ ವಿಷಯ ಇದೀಗ ಗುಟ್ಟಾಗಿ ಉಳಿದಿಲ್ಲ.

ಸುಮಾರು ಒಂದೂಕಾಲು ವರ್ಷ ಹಿಂದಿನ ಹಿಜಾಬ್ ಪ್ರಕರಣವನ್ನು ಮೆಲುಕು ಹಾಕಿದರೆ, ಯಶಪಾಲ ಸುವರ್ಣ ಹಾಗೂ ಶಾಸಕ ರಘುಪತಿ ಭಟ್ ‘ನಾ ಮುಂದು- ತಾ ಮುಂದು’ ಎಂಬಂತೆ ಹೇಳಿಕೆಗಳ ಮೇಲೆ ಹೇಳಿಕೆ ನೀಡಿ ಸ್ಥಳೀಯ- ರಾಜ್ಯ- ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಿಂಚಲು ಸ್ಪರ್ಧೆಯಲ್ಲಿದ್ದರು. ಅಂತಹಾ ದೊಡ್ಡ ಸಾರ್ವಜನಿಕ ಜವಾಬ್ದಾರಿಗಳಿಲ್ಲದ್ದ ಯಶಪಾಲ ಒಂದು ಪ್ರಚೋದನಾಕಾರಿ ಹೇಳಿಕೆ ನೀಡುವಾಗ, ಜವಾಬ್ದಾರಿ ಸ್ಥಾನದಲ್ಲಿದ್ದ ಭಟ್ಟರು ಯಶಪಾಲ ಮಿಂಚುತ್ತಿರುವುದನ್ನು ನೋಡಿ ನಾನೇನು ಕಡಿಮೆ ಇಲ್ಲ ಎಂಬಂತೆ ಸ್ಪರ್ಧೆಗಿಳಿದಿದ್ದರು. ವಿಷಯ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕವೇ ಇಬ್ಬರೂ ವಿಶ್ರಮಿಸಿದ್ದು. 

ಹಿಂದುತ್ವದ ಅಮಲಿನಲ್ಲಿರುವ ಯಶಪಾಲ ಸುವರ್ಣಗೆ ಇಂದಿಗೂ ಆ ಬಗ್ಗೆ ಪಶ್ಚಾತ್ತಾಪವಿಲ್ಲ. ಭಟ್ಟರಿಗೆ ಬೇರೆ ಉಪಾಯವಿಲ್ಲ ಎಂಬಂತಾಗಿದೆ. ಇದೀಗ ಆ ಕೆಲವು ಕ್ರಿಮಿನಲ್ ಪ್ರಕರಣಗಳೇ ಯಶಪಾಲ ಸುವರ್ಣ ಅವರ ಚುನಾವಣೆಯ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ಆ ಪ್ರಕರಣಗಳ ಬಾಧಿತರಲ್ಲಿ (aggrieved) ಎಷ್ಟು ರೋಷ ಇದೆ, ತಕ್ಕ ಪಾಠ ಕಲಿಸಲು ಎಷ್ಟು ಒಗ್ಗಟ್ಟಾಗಬಲ್ಲರು ಎಂಬುದೂ ಅಷ್ಟೇ ಮಹತ್ವದ್ದಾಗಿದೆ.  ಆದರೆ, ಸಚ್ಚಾರಿತ್ರ್ಯದ ಕಾಂಗ್ರೆಸ್ ಅಭ್ಯರ್ಥಿ ಆ ಪ್ರಕರಣಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲು ಯಶಸ್ವಿಯಾಗುತ್ತಾರೆ ಎಂಬುದನ್ನೂ ಕಾದು ನೋಡಬೇಕಿದೆ. 

ಟಿಕೆಟ್ ತಪ್ಪಿದ ರಘುಪತಿ ಭಟ್ಟರ ಅಂತಿಮ ನಿಲುವು, ಬಿಜೆಪಿಯಲ್ಲಿರುವ ಇನ್ನೋರ್ವ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಸ್ಟ್ಯಾಂಡ್ ಏನು ಎಂಬುದು ಇಲ್ಲಿ ನಿರ್ಣಾಯಕವಾಗಲಿವೆ.

ಇನ್ನು, ಕೊನೆ ಕ್ಷಣದವರೆಗೂ ಕಾಪು ಕ್ಷೇತ್ರದ ಟಿಕೆಟ್‌ಗೇ ಕಣ್ಣಿಟ್ಟಿದ್ದ ಯಶಪಾಲ ಸುವರ್ಣಗೆ ಬ್ರಹ್ಮಾವರ ವಲಯದಲ್ಲಿ ವೈಯಕ್ತಿಕ ವರ್ಚಸ್ಸು ಇಲ್ಲದಿರುವುದರಿಂದ ಅಲ್ಲಿ ನೇರವಾಗಿ ಪಕ್ಷ/ಸಂಘಟನೆಯ ನಾಯಕರು, ಕಾರ್ಯಕರ್ತರನ್ನು ಅವಲಂಬಿಸಬೇಕಾಗಿದೆ. ಆದರೆ ಬ್ರಹ್ಮಾವರದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿಯ ಬಿರ್ತಿ ರಾಜೇಶ್ ಶೆಟ್ಟಿ ನೇತೃತ್ವದ ಜಯಪ್ರಕಾಶ್ ಹೆಗ್ಡೆ ಬಣದವರಿಗೆ ಯಶಪಾಲ ಸುವರ್ಣಗೆ ಟಿಕೆಟ್ ಸಿಕ್ಕಿರುವುದು ನುಂಗಲಾರದ ತುತ್ತಿನಂತಾಗಿದೆ. ಉಡುಪಿಯಂತಹ ಬುದ್ಧಿವಂತರ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ಘನತೆ, ಗಾಂಭೀರ್ಯವಿರುವ ಅಭ್ಯರ್ಥಿಯ ನಿರೀಕ್ಷೆಯಲ್ಲಿದ್ದ ಹಲವಾರು ಬಿಜೆಪಿಯ ‘ಸಜ್ಜನ’ರಿಗೆ ಟಿಕೆಟ್ ಹಂಚಿಕೆ (ಅ)ನ್ಯಾಯವನ್ನು  ಅರಗಿಸಿಕೊಳ್ಳಲಾಗುತ್ತಿಲ್ಲವಂತೆ.

ದಿನೇಶ್‌ ಕಿಣಿ

ಪತ್ರಕರ್ತರು‌

Related Articles

ಇತ್ತೀಚಿನ ಸುದ್ದಿಗಳು