Sunday, June 22, 2025

ಸತ್ಯ | ನ್ಯಾಯ |ಧರ್ಮ

ಹೋರಾಟದ ಚೈತನ್ಯ ಮಂಡ್ಯದ ರತ್ನಮ್ಮ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಏಳನೇ ಸರಣಿಯಲ್ಲಿ ಹೋರಾಟದ ಚೈತನ್ಯ ಮಂಡ್ಯದ ರತ್ನಮ್ಮನವರ ಹೋರಾಟದ ಝಲಕ್‌ ʼಗಾಟುʼವಿನ ಪ್ರತಿಭಾ ಅವರಿಂದ ಇಲ್ಲಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ರತ್ನಮ್ಮ ಕೃಷಿ ಕುಟುಂಬದಲ್ಲಿ ನಾಲ್ವರು ಸಹೋದರಿ, ನಾಲ್ವರು ಸಹೋದರರೊಂದಿಗೆ ಹುಟ್ಟಿದವರು. 14 ವರ್ಷದವರಿರುವಾಗ ರೈತ ಚಳವಳಿ ಕಾವೇರಿತ್ತು. ತಮ್ಮೂರಿಗೂ ಬಂದ ಚಳುವಳಿಯ ಭಾಗವಾಗಿ ಪ್ರತಿಭಟನೆ, ಬೀದಿ ನಾಟಕ ಮುಂತಾದ ಚಟುವಟಿಕೆಗಳನ್ನು ರತ್ನಮ್ಮ ನಡೆಸಿದರು. ತಮ್ಮ 18ನೇ ವಯಸ್ಸಿಗೇ ಶಿವಣ್ಣ ಅವರನ್ನು ಮದುವೆಯಾದರು. ಗಂಡ ದುಡಿದು ಸಂಪಾದನೆ ಮಾಡಿ ಸಂಸಾರ ನಡೆಸದೆ ಬೇಜವಾಬ್ದಾರಿ ತೋರಿಸುತ್ತ ಕಿರುಕುಳ ನೀಡತೊಡಗಿದಾಗ ದಿಟ್ಟವಾಗಿ ಎರಡು ಮಕ್ಕಳೊಡನೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿದರು.

ಅಲ್ಲಿ ಹೋದಮೇಲೆ ತಿಳಿಯಿತು, ದುಃಖ ತನ್ನೊಬ್ಬಳದೇ ಅಲ್ಲ; ಒಬ್ಬೊಬ್ಬರದು ಒಂದೊಂದು ಕತೆ ಎಂದು. 2004ರಿಂದ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರನ್ನು ಸಂಘಟಿಸುತ್ತಾ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಮತ್ತು ಗಾರ್ಮೆಂಟ್ಸ್ ಅಂಡ್ ಟೆಕ್ಸ್ಠೈಲ್‌ ವರ್ಕರ್ಸ್ ಯೂನಿಯನ್ (ಗಾಟು)ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಗಾರ್ಮೆಂಟ್ಸ್ ಮಹಿಳೆಯರು ಕೇವಲ ಕೆಲಸದ ಸ್ಥಳದಲ್ಲಿ ಮಾತ್ರವೇ ಸಮಸ್ಯೆ ಎದುರಿಸದೆ, ಸಮಾಜದಲ್ಲಿ ಕುಟುಂಬದಲ್ಲಿಯೂ ಹಿಂಸೆ ದೌರ್ಜನ್ಯ ಎದುರಿಸುತ್ತಿದ್ದಾರೆ. ಇದರ ವಿರುದ್ಧ ರತ್ನಮ್ಮ ಅವರು ಅವಿರತವಾಗಿ ದುಡಿಯುತ್ತಿದ್ದಾರೆ. ಕೌಟುಂಬಿಕ ದೌರ್ಜನ್ಯಗಳಾದಾಗ ಮಹಿಳಾ ಕಾರ್ಮಿಕರಿಗೆ ಸಲಹೆ, ಕಾನೂನು ನೆರವು ಒದಗಿಸುವುದು, ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅವರೊಂದಿಗಿರುವುದು, ಇತರ ಮಹಿಳಾ ಸಂಘಟನೆಗಳ ನೆರವಿನಿಂದ ರಾಜೀ ಸಂಧಾನಗಳನ್ನು ಏರ್ಪಡಿಸುವುದು, ಇಷ್ಟೇ ಅಲ್ಲದೆ ಮಹಿಳಾ ಕಾರ್ಮಿಕರ ಆರೋಗ್ಯ, ಶಿಕ್ಷಣ, ಅವರ ಮಕ್ಕಳ ಶಿಕ್ಷಣ, ಮುಂತಾದುವುಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳಾದ ವಿಧವಾ ವೇತನ ಮುಂತಾದುವುಗಳನ್ನು ಮಹಿಳಾ ಕಾರ್ಮಿಕರಿಗೆ ದೊರಕಿಸಲು ನೆರವಾಗುತ್ತಿದ್ದಾರೆ.

ಇವೆಲ್ಲದರ ಜೊತೆಗೆ ಗಾರ್ಮೆಂಟ್ಸ್ ಮಹಿಳೆಯರ ಕನಿಷ್ಠ ವೇತನ ಹೋರಾಟ, ಪಿ.ಎಫ್. ಹೋರಾಟ, ಇ.ಎಸ್.ಐ. ಸೌಲಭ್ಯ ಹಾಗೂ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.

ರತ್ನಮ್ಮ ಅವರಿಗೆ ಕೆಂಪೇಗೌಡ ಪ್ರಶಸ್ತಿ, ಜೊತೆಗೆ ಸ್ವರಾಜ್ ನೆಟ್‍ವರ್ಕ್ ನೀಡುವ ‘ನೆಲತಾಯಿ’ ಪ್ರಶಸ್ತಿಗಳೂ ಸಂದಿವೆ. ಈಗಲೂ  ಹೋರಾಟದ ಚೈತನ್ಯವನ್ನು ಜೀವಂತವಾಗಿಟ್ಟುಕೊಂಡಿರುವ ದಿಟ್ಟೆ, ಪ್ರಾಂಜಲ ಮನದ ರತ್ನಮ್ಮ `ನಮ್ಮ ಅಕ್ಕ, ನಮ್ಮ ಹಿರಿಮೆ’ಯಾಗಿದ್ದಾರೆ.

ಪ್ರತಿಭಾ ಆರ್‌

ಗಾರ್ಮೆಂಟ್ಸ್ ಅಂಡ್ ಟೆಕ್ಸ್ಠೈಲ್‌ ನೌಕರರ ಸಂಘ

Related Articles

ಇತ್ತೀಚಿನ ಸುದ್ದಿಗಳು

You cannot copy content of this page