Tuesday, June 18, 2024

ಸತ್ಯ | ನ್ಯಾಯ |ಧರ್ಮ

ಹೈದರಾಬಾದ್-ಕರ್ನಾಟಕದ ವಿಮೋಚನೆ

ಸೆಪ್ಟೆಂಬರ್ 17, 1948 ಭಾರತದ ಇತಿಹಾಸದಲ್ಲಿ ಮಹತ್ವದ ದಿನ. ಇದನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ. ಹೈದರಾಬಾದ್ ಕರ್ನಾಟಕ ರಾಜ್ಯದ ಬೀದರ್, ಗುಲ್ಬರ್ಗಾ ಮತ್ತು ರಾಯಚೂರು ಹಾಗೂ ಈಶಾನ್ಯ ಜಿಲ್ಲೆಗಳ ಬಹು ದೊಡ್ಡ ಭಾಗಗಳನ್ನು ಒಳಗೊಂಡಿತ್ತು.

1947 ಆಗಸ್ಟ್‌ 15ರಂದು ಭಾರತ ಸ್ವತಂತ್ರವಾಯಿತು. ಆದರೆ ಆಗ ಭಾರತದಲ್ಲಿ ಇನ್ನು ಅನೇಕ ಸಂಸ್ಥಾನಗಳು ಇದ್ದವು. ಎಲ್ಲಾ ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗಿರಲಿಲ್ಲ. ಅದೇ ಸಮಯದಲ್ಲಿ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದೊಡನೆ ವಿಲೀನವಾಗಲು ಬಯಸದೆ, ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿ , “ಡೆಕ್ಕನ್ ರೇಡಿಯೋ” (ಅಥವಾ “ನಿಜಾಮ್ ರೇಡಿಯೋ”) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡನು.

ನಿಜಾಮ ಮೀರ್ ಉಸ್ಮಾನ್ ಅಲಿ
ಸರ್ದಾರ್‌ ವಲ್ಲಭಭಾಯಿ ಪಾಟೇಲ್

ನಿಜಾಮನು ತನ್ನ ಆಡಳಿತವನ್ನು, ಬಲವಂತದಿಂದ ಭಾರತ ಸರಕಾರದ ಪೋಲೀಸ ಕಾರ್ಯಾಚರಣೆ ನಡೆಸುವವರೆಗೂ ಭಾರತಕ್ಕೆ ಸೇರಲು ನಿರಾಕರಿಸಿದನು. 1948 ಸಪ್ಟಂಬರ 12ರಂದು ಪ್ರಧಾನಿ ನೆಹರೂ ಸಂಪುಟ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ರಕ್ಷಣಾ ಮಂತ್ರಿ ಬಲದೇವ ಸಿಂಗ. ಗೋಪಾಲಸ್ವಾಮಿ ಅಯ್ಯಂಗಾರ, ಜನರಲ್ ಬುಕರ್, ಜನರಲ್ ಕರಿಯಪ್ಪ ಮತ್ತು ಏರ್ ಮಾರ್ಶಲ್ ಎಲ್ಮ್‍ಹರ್ಸ್ಟ್ ಉಪಸ್ಥಿತರಿದ್ದರು. ಜನರಲ್ ಬುಕರ್ ಹೈದರಾಬಾದದ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವುದೇ ಆದರೆ, ತಾವು ರಾಜೀನಾಮೆ ಕೊಡುವದಾಗಿ ಘೋಷಿಸಿದರು. ಚಿಂತಾಕ್ರಾಂತರಾದ ನೆಹರೂ ಅತ್ತಿತ್ತ ನೋಡತೊಡಗಿದಾಗ, ಸರದಾರ ವಲ್ಲಭಭಾಯಿ ಪಟೇಲ ಮರುನುಡಿದರು: “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು; ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು!” ಎಂದರು.

ಸರದಾರ್‌ ವಲಭಭಾಯಿ ಪಟೇಲರ ಆದೇಶದಂತೆ ಸಪ್ಟಂಬರ್ 13 ರಂದು ಭಾರತೀಯ ಸೇನೆಯು ಹೈದರಾಬಾದಿನ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತು. ಸಪ್ಟಂಬರ 18ರಂದು, ಸಂಜೆ 4 ಗಂಟೆಗೆ ಭಾರತೀಯ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್ ಎದ್ರೂಸ್ ಶರಣಾಗತನಾದ. ನಿಜಾಮ ಹಾಗು ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆಯಿತು.

ಮೊದಲ ಕೆಲದಿನಗಳ ಮಟ್ಟಿಗೆ ಚೌಧರಿ ಸೈನಿಕ ಆಡಳಿತಗಾರರಾಗಿದ್ದರು. ಆನಂತರ ಕೆ.ಎಮ್.ಮುನ್ಶಿ ಅವರು ರಾಜ್ಯಪಾಲರೆಂದು ನೇಮಿಸಲ್ಪಟ್ಟರು. ಹೈದರಾಬಾದ್ ಸಂಸ್ಥಾನವು ಪ್ರಜೆಗಳ ಅಪೇಕ್ಷೆಯಂತೆ ಭಾರತಕ್ಕೆ ಮರಳಿತು. ನಿಜಾಮರ ವಿರುದ್ಧದ ‘ಪೊಲೀಸ್ ಕ್ರಮ’ದ ನಂತರ, ಹೈದರಾಬಾದ್ ಪ್ರಾಂತ್ಯ ಮತ್ತು ಅದರ ನಾಗರಿಕರು 17 ಸೆಪ್ಟೆಂಬರ್ 1948 ರಂದು ಸ್ವತಂತ್ರರಾದರು. ಈ ದಿನವನ್ನು ಕರ್ನಾಟಕ ಸರ್ಕಾರವು ಹೈದರಾಬಾದ್-ಕರ್ನಾಟಕ ವಿಮೋಚನಾ‌ (ಕಲ್ಯಾಣ-ಕರ್ನಾಟಕ ವಿಮೋಚನಾ) ದಿನವೆಂದು ಆಚರಿಸುತ್ತದೆ.

ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ-ಕರ್ನಾಟಕ ವಿಮೋಚನಾ ದಿನ ಎಂದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದೆ. ಭಾರತದ ವಿಭಜನೆ ಮತ್ತು ಹೈದರಾಬಾದ್ ರಾಜ್ಯದಲ್ಲಿನ ದಂಗೆಗಳ ನಂತರ 1948 ರಲ್ಲಿ ಭಾರತವು ಹೈದರಾಬಾದ್ ಅನ್ನು ಸ್ವಾಧೀನಪಡಿಸಿಕೊಂಡದ್ದನ್ನು ಈ ದಿನದ ವಿಶೇಷ ಆಚರಣೆ.

17 ಸೆಪ್ಟೆಂಬರ್ 1948 ಹೈದರಾಬಾದ್ ಕರ್ನಾಟಕ ರಾಜ್ಯವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಿದ್ದರಿಂದ ಈ ದಿನ ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿದೆ. ಇಲ್ಲಿಂದ ಚಳುವಳಿಯ ಐತಿಹಾಸಿಕ ಹಿನ್ನೆಲೆಯು ಭಾರತೀಯ ಇತಿಹಾಸದಲ್ಲಿ ಹೊಸದೊಂದು ಯುಗ ಪ್ರಾರಂಭವಾಗುವಂತೆ ಮಾಡಿದೆ…

ಬರಹ: ಅಜರುದ್ದೀನ್‌ ಎ ಮರಿಯಮ್ಮನಹಳ್ಳಿ

Related Articles

ಇತ್ತೀಚಿನ ಸುದ್ದಿಗಳು