ಮೈಸೂರು : ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ದೇವನೂರು ಮಹದೇವ್, ಟೌನ್ಶಿಪ್ ವಿರುದ್ಧದ ಹೋರಾಟಕ್ಕೆ ಜೆನ್ ಜಿಗಳು (Gen Z) ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಶೇ.80ರಷ್ಟು ಭೂಮಿಯನ್ನು ರೈತರು ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳುತ್ತಿದೆ. ಆದರೆ ಈ ರೀತಿಯ ಸರ್ಕಾರದ ಧೋರಣೆ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. ಸಮಾಜದ ಎಲ್ಲರೂ ಭೂಮಿ ಕೊಡುತ್ತೇವೆ ಎಂದರೆ ಸರ್ಕಾರ ತೆಗೆದುಕೊಳ್ಳಲು ಸಾಧ್ಯವೇ? ಭೂಮಿಯನ್ನು ತೆಗೆದುಕೊಂಡ ಬಳಿಕ ಸರ್ಕಾರ ಅದನ್ನು ಯಾವ ರೀತಿ ನಿಭಾಯಿಸುತ್ತದೆ?” ಎಂದು ದೇವನೂರು ಮಹದೇವ್ ಪ್ರಶ್ನಿಸಿದರು.
ಭೂಮಿ ನೀಡಿದ ಜನರು ಕೊನೆಗೆ ಸ್ಲಂಗಳಿಗೆ ಹೋಗಿ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರಗಳು ಜನರ ಬದುಕಿನ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು. ಯಾವುದೇ ಕಾರಣಕ್ಕೂ ಬಿಡದಿ ಟೌನ್ಶಿಪ್ ಮಾಡಬಾರದು ಎಂದು ಒತ್ತಾಯಿಸಿದ ದೇವನೂರು ಮಹದೇವ್, ಈ ವಿಚಾರದಲ್ಲಿ ಜನರು, ವಿಶೇಷವಾಗಿ ಜೆನ್ ಜಿಗಳು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
