Saturday, June 15, 2024

ಸತ್ಯ | ನ್ಯಾಯ |ಧರ್ಮ

ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದರೆ?: ಜಾಲತಾಣದಲ್ಲಿ ಹರಿದಾಡುತ್ತಿರುವ ರಾಜಿನಾಮೆ ಪತ್ರದ ಅಸಲಿಯತ್ತೇನು?

ಚಿಕ್ಕಬಳ್ಳಾಪುರ:  ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಬರೆದಿರುವರೆನ್ನಲಾದ ರಾಜಿನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಮ್ಮ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಡಾ.ಕೆ.ಸುಧಾಕರ್ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಸಾಕಷ್ಟು ಟ್ರೋಲ್‌ ಆಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಈಗ ರಾಜಿನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ ಎರಡು ದಿನಗಳಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು ‘ಪ್ರದೀಪ್ ರಾಜೀನಾಮೆ ಯಾವಾಗ’ ಎಂದು ಪ್ರಶ್ನಿಸುಗತ್ತಲೇ ಇದ್ದರು. ಇದರ ಬೆನ್ನಲ್ಲೆ ಈಗ ರಾಜಿನಾಮೆ ಪತ್ರ ಹರಿದಾಡುತ್ತಿದೆ.

ಪತ್ರದಲ್ಲಿ ಏನಿದೆ: ʼಬಾಲ್ಯದಿಂದಲೂ ಪುಣ್ಯಕೋಟಿ ಕಥೆಯನ್ನು ಆದರ್ಶವಾಗಿಸಿಕೊಂಡು ‘ಕೊಟ್ಟ ಮಾತು–ಇಟ್ಟ ಹೆಜ್ಜೆ ತಪ್ಪಬಾರದು’ ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತ ಬಂದವನು ನಾನು. ನಾನು ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದೆ. ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಆಡಿದ ಮಾತಿಗೆ ಬದ್ಧನಾಗಿ ಸ್ವ ಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆʼಎಂದು ಪತ್ರದಲ್ಲಿ ಬರೆಯಲಾಗಿದೆ. ಈಶ್ವರ್‌ ಅವರ ಭಾಷಣದ ತುಣುಕಗಳನ್ನು ಇಟ್ಟುಕೊಂಡು ಪತ್ರ ಬರೆಯಲಾಗಿದೆ.

ಪ್ರದೀಪ್ ಈಶ್ವರ್ ಅಯ್ಯರ್ ಪಿ.ಇ, ಶಾಸಕರು, ಕರ್ನಾಟಕ ವಿಧಾನಸಭೆ ಎನ್ನುವ ಲೆಟರ್‌ ಹೆಡ್‌ ನಲ್ಲಿರುವ ಈ ರಾಜೀನಾಮೆ ಪತ್ರವು ಅಸಲಿಯೊ ನಕಲಿಯೊ ಎನ್ನುವ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗಳು ಸಹ ನಡೆಯುತ್ತಿವೆ. ‘ಇದು ನಕಲಿ ರಾಜೀನಾಮೆ ಪತ್ರ’ ಎಂದು ಶಾಸಕ ಆಪ್ತ ಸಹಾಯಕರು ‘ಎಂಎಲ್‌ಇ ಮಿಡಿಯಾ ಗ್ರೂಪ್‌’ನಲ್ಲಿ ಸಮಜಾಯಿಸಿ ನೀಡಿರುವುದರಿಂದ ಪ್ರದೀಪ್‌ ಅವರ ಅನುಯಾಯಿಗಳು ನಿರಾಳರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು