ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ದೇಹ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಶಿವರಾಮ ಭಟ್ ಎಂಬಾತನ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೋರ್ವರು ದೀಪಾವಳಿ ಹಬ್ಬಕ್ಕಾಗಿ ತನ್ನ ಮನೆಗೆ ಬಂದಿದ್ದರು. ನವೆಂಬರ್ 2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯೊಂದರಲ್ಲಿ ಪಾಲ್ಗೊಳ್ಳಲು ತನ್ನ ಮನೆಯವರ ಜೊತೆಗೆ ಭೋಜನಾ ಶಾಲೆಯತ್ತ ಹೋಗಿದ್ದರು.
ಭೋಜನಾ ಶಾಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಿದ್ದ ಆರೋಪಿ ಶಿವರಾಮ ಭಟ್ ಎಂಬಾತ ಆಕೆಯ ಎದೆ ಭಾಗಕ್ಕೆ ಕೈ ಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದಾನೆ.
ಸುಬ್ರಹ್ಮಣ್ಯದಲ್ಲಿ ಫೋಟೋಕಾಪಿ ಅಂಗಡಿ ಹೊಂದಿರುವ ಈತ ದೇವಾಲಯದ ಸುತ್ತಮುತ್ತ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಯುವತಿಯ ದೂರನ್ನು ಪರಿಶೀಲಿಸಿ ಸುಬ್ರಹ್ಮಣ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ( BNS ACT -75,352 ಕಾಲಂ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ