Friday, June 14, 2024

ಸತ್ಯ | ನ್ಯಾಯ |ಧರ್ಮ

ಭಾರತ: ಸಂವಿಧಾನದ ಕರಡಿನಲ್ಲಿ ಇಲ್ಲದ ಈ ಪದವು ನಂತರ ಹೇಗೆ ಸೇರಿಕೊಂಡಿತು?

VIJAY SURWADE’S ARCHIVAL COLLECTION NAVAYANA

ಭಾರತದ ಸಂವಿಧಾನವನ್ನು ರಚಿಸುವಾಗ ದೇಶದ ಹೆಸರಿನ ಚರ್ಚೆಗಳಲ್ಲಿ ತೆಗೆದುಕೊಂಡ ಅಂತಿಮ ನಿರ್ಧಾರ ಏನಾಗಿತ್ತು?

ಸಂವಿಧಾನದ ಮೊದಲ ಕರಡಿನಲ್ಲಿ  ‘ಭಾರತ್’  ಎನ್ನುವ ಹೆಸರನ್ನು ಉಲ್ಲೇಖಿಸಲಾಗಿದೆಯೇ? ಆ ಹೆಸರು ಯಾವಾಗ ಸೇರಿಕೊಂಡಿತು?

ಎರಡನೆಯ ಮಹಾಯುದ್ಧದ ಅಂತ್ಯದ ನಂತರ (1945ರಲ್ಲಿ) ಬ್ರಿಟನ್‌ನಲ್ಲಿ ನಡೆದ ಚುನಾವಣೆಗಳಲ್ಲಿ, ಪ್ರಮುಖ ಪಕ್ಷಗಳಾದ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಭರವಸೆಗಳನ್ನು ಸೇರಿಸಿದ್ದವು.

ಲೇಬರ್ ಪಕ್ಷವು ಚುನಾವಣೆಯಲ್ಲಿ ಜಯಗಳಿಸಿತು. 1945ರ ಸೆಪ್ಟೆಂಬರ್ ತಿಂಗಳಿನಲ್ಲಿ,  ಆಗಿನ ಭಾರತದ ವೈಸ್‌ರಾಯ್ ಲಾರ್ಡ್ ವೇವೆಲ್, ಭಾರತಕ್ಕೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡುವ ದಿಕ್ಕಿನಲ್ಲಿ ಮುಂದುವರಿಯಲು ಬ್ರಿಟಿಷ್ ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು.

ಅದರ ನಂತರ, ಕೆಲಸಗಳು ಬಹಳ ವೇಗವಾಗಿ ಮುಂದುವರೆದವು ಮತ್ತು ಅಂತಿಮವಾಗಿ ದೇಶವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜಿಸಲಾಯಿತು ಮತ್ತು  ಆಗಸ್ಟ್ 14-15, 1947ರಂದು ಸ್ವಾತಂತ್ರ್ಯವನ್ನು ಪಡೆಯಿತು. ಇದಾದ ನಂತರ,  ವಿಧಾನಸಭೆಗಳು ಭಾರತದ ಸಂವಿಧಾನ ಸಭೆಯಾದವು. ಈ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿದರು.

ಸಂವಿಧಾನದ ಕರಡು ದಾಖಲೆ

ಸಂವಿಧಾನದ ಮೊದಲ ಕರಡಿನಲ್ಲಿ  ‘ಭಾರತ‘ ಇಲ್ಲ

ಡಾ. ಅಂಬೇಡ್ಕರ್ ಅವರು ನವೆಂಬರ್ 4, 1948ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಕರಡನ್ನು ಮಂಡಿಸಿದರು ಮತ್ತು ಮೊದಲ ಕರಡಿನಲ್ಲಿ ದೇಶದ ಹೆಸರನ್ನು ಉಲ್ಲೇಖಿಸಿದ ಅನುಚ್ಛೇದ 1ರಲ್ಲಿ ‘ಭಾರತ್’ ಎಂಬ ಪದವು ಕಾಣಿಸಿಕೊಂಡಿಲ್ಲ.   

“ಇಂಡಿಯಾ ರಾಜ್ಯಗಳ ಒಕ್ಕೂಟವಾಗಿರುತ್ತದೆ (India Shall be a Union of States)” ಎಂದು ಕರಡು ಹೇಳುತ್ತದೆ.

ಸುಮಾರು ಒಂದು ವರ್ಷದ ನಂತರ, ಸೆಪ್ಟೆಂಬರ್ 17, 1949ರಂದು, ಡಾ. ಅಂಬೇಡ್ಕರ್ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದರು.

“ಇಂಡಿಯಾ ಎಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿರಲಿದೆ (India that is Bharat, Shall be a Union of States)” ಎಂಬ ತಿದ್ದುಪಡಿಯನ್ನು ಇದರಲ್ಲಿ ಪ್ರಸ್ತಾಪಿಸಲಾಯಿತು.

ಆ ದಿನ  ಎಲ್ಲಾ ಸದಸ್ಯರು ‘ರಾಜ್ಯಗಳ ಒಕ್ಕೂಟ’ ಎಂಬ ಪದಗಳ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದರು  ಆದರೆ ಯಾರೂ ‘ಇಂಡಿಯಾ ದಟ್‌ ಈಸ್ ಭಾರತ (India That is Bharat)’ ಬಗ್ಗೆ ಮಾತನಾಡಲಿಲ್ಲ.

ಅದೇ ದಿನ, ಜನಾಭಿಪ್ರಾಯ ಸಂಗ್ರಹವನ್ನು ನಡೆಸಲಾಯಿತು ಮತ್ತು ಅಂಬೇಡ್ಕರ್ ಅವರು ತಂದ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

ಮಧ್ಯಂತರ ಸರ್ಕಾರದ ನಾಯಕರಿಂದ ತಿದ್ದುಪಡಿಯ ಪ್ರಸ್ತಾಪ

ಮರುದಿನ, ಸೆಪ್ಟೆಂಬರ್ 18 ರಂದು, ಮಧ್ಯಪ್ರದೇಶದ ಎಚ್.ವಿ.ಕಾಮತ್ ಅವರು ಭಾರತದ ಹೆಸರನ್ನು ಉಲ್ಲೇಖಿಸಿ ಮೊದಲ ವಿಭಾಗಕ್ಕೆ ಎರಡು ತಿದ್ದುಪಡಿಗಳನ್ನು ತಂದರು.

ಮೊದಲನೆಯದು ದೇಶದ ಹೆಸರು “ಭಾರತ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ, ರಾಜ್ಯಗಳ ಒಕ್ಕೂಟ ಒಕ್ಕೂಟವಾಗಿರುತ್ತದೆ (Bharat or, in the English language, India, shall be a Union of States)”,

ಎರಡನೆಯ ತಿದ್ದುಪಡಿಯು  ‘ಹಿಂದ್ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾವು ರಾಜ್ಯಗಳ ಒಕ್ಕೂಟವಾಗಿರುತ್ತದೆ ((Hind, or, in the English language, India, shall be a Union of States)’ ಎಂದು ಪ್ರಸ್ತಾಪ ಸಲ್ಲಿಸಿದರು.

ಆದರೆ ಸದನದ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್ ಅವರು ಎರಡು ತಿದ್ದುಪಡಿಗಳು ಪರಸ್ಪರ ವಿರುದ್ಧವಾಗಿವೆ ಎಂದು ಹೇಳಿದರು.

“ಭಾರತ ಗಣರಾಜ್ಯದ ಹೆಸರು ಏನಾಗಿರಬೇಕು ಎಂಬುದರ ಬಗ್ಗೆ ಅನೇಕ ಜನರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಭಾರತ್, ಹಿಂದೂಸ್ತಾನ್, ಹಿಂದ್, ಭರತ ಭೂಮಿ, ಭರತ ವರ್ಷ. ಭಾರತಕ್ಕೆ ಹೊಸ ಹೆಸರಿಡಬೇಕು ಎಂದು ಕೆಲವರು ಹೇಳುತ್ತಾರೆ. ಅನೇಕ ಇತಿಹಾಸಕಾರರು ಭಾರತ ಎಂಬ ಹೆಸರಿನ ಮೂಲದ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಆದರೆ ಅದರ ಮೂಲದ ಬಗ್ಗೆ ಒಮ್ಮತಕ್ಕೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ದುಶ್ಯಂತ-ಶಕುಂತಲಾ ಅವರ ಮಗನ ಹೆಸರು ಮತ್ತು ಅವನಿಂದಾಗಿಯೇ ದೇಶಕ್ಕೆ ಭಾರತ ಎಂಬ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಭಾರತವು ವೈದಿಕ ಯುಗದಷ್ಟು ಹಿಂದಿನದು ಎಂದು ಅವರು ಹೇಳುತ್ತಾರೆ” ಎಂದು ಕಾಮತ್ ಆ ದಿನದ ಚರ್ಚೆಯಲ್ಲಿ ಹೇಳಿದರು.

ಕಾಮತ್ ಹೀಗೆ ಮಾತನಾಡುತ್ತಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ತಡೆದು,

“ಇದೆಲ್ಲವೂ ಈಗ ಅಗತ್ಯವೇ? ಇದರ ಅರ್ಥವೇನೆಂದು ನನಗೆ ತಿಳಿಯುತ್ತಿಲ್ಲ, ಮತ್ತು ಅದರ ಬಗ್ಗೆ ಬೇರೆಡೆ ಮಾತನಾಡುವುದು ಒಳ್ಳೆಯದು. ಸ್ನೇಹಿತರು ಭಾರತ ಎನ್ನುವ ಹೆಸರನ್ನು ಒಪ್ಪಿಕೊಂಡಿದ್ದಾರೆ ಮತ್ತು ನಮಗೆ ಬಹಳ ಕಡಿಮೆ ಸಮಯವಿದೆ. “ ಎಂದರು

ಆದರೂ, ದೇಶವನ್ನು ಇಂಡಿಯಾ ದಟ್‌ ಈಸ್‌ ಭಾರತ್ ಎಂದು ಹೆಸರಿಸುವುದು ಸರಿಯಲ್ಲ ಎಂದು ಕಾಮತ್ ಹೇಳಿದರು. ಜಬಲ್ಪುರದ ಸೇಠ್ ಗೋವಿಂದ್ ದಾಸ್ ಇಂಡಿಯಾಕ್ಕೆ ಭಾರತ್ ಎಂದು ಹೆಸರಿಡಬೇಕು ಎಂದು ಸಲಹೆ ನೀಡಿದರು.

“ವೇದಗಳಲ್ಲಿ, ಇಂಡಿಯಾ ಎನ್ನುವ ಹೆಸರಿಲ್ಲ, ಭಾರತ ಎಂಬ ಹೆಸರು ಮಾತ್ರ ಇದೆ. ಭರತ ಎಂಬ ಹೆಸರನ್ನು ಮಹಾಭಾರತ, ವಿಷ್ಣು ಪುರಾಣ ಮತ್ತು ಬ್ರಹ್ಮ ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಶಾಂಗ್ ಜಾಂಗ್ (ಹ್ಯುಯೆನ್ ತ್ಸಾಂಗ್) ಕೂಡ ತನ್ನ ಪುಸ್ತಕದಲ್ಲಿ ಭಾರತವನ್ನು ಉಲ್ಲೇಖಿಸಿದ್ದಾನೆ. ದೇಶಕ್ಕೆ ಭಾರತ್ ಎಂದು ಹೆಸರಿಟ್ಟರೆ, ಅದು ನಮ್ಮ ದೇಶದ ಪ್ರಗತಿಯನ್ನು ತಡೆಯುವುದಿಲ್ಲ” ಎಂದು ದಾಸ್ ಹೇಳಿದರು.

ಚರ್ಚೆಯಲ್ಲಿ ಭಾಗವಹಿಸಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಕಮಲಪತಿ ತ್ರಿಪಾಠಿ ಹೀಗೆ ಹೇಳಿದರು: ‘ಇಂಡಿಯಾ ದಟ್‌ ಈಸ್‌ ಭಾರತ್’ ಬದಲಿಗೆ ‘ಭಾರತ್ ದಟ್ ಈಸ್ ಇಂಡಿಯಾ’ ಬಳಸಬಹುದು ಅಥವಾ  ‘ಭಾರತ್’ ತಿದ್ದುಪಡಿಯನ್ನು ಸ್ವೀಕರಿಸಬಹುದು” ಎಂದು ಅವರು ಹೇಳಿದರು.

ವೇದಗಳು ಮತ್ತು ಪುರಾಣಗಳಲ್ಲಿಯೂ ಭರತ ಎಂಬ ಹೆಸರಿದೆ. ಭಾರತ ಎಂಬ ಹೆಸರನ್ನು ನೀಡಿದರೆ, ಭಾರತವು ಶ್ರೇಷ್ಠ ರಾಷ್ಟ್ರವಾಗುತ್ತದೆ ಮತ್ತು ಜನಸೇವೆ ಮಾಡುತ್ತದೆ ಎಂದು ಅವರು ಹೇಳಿದರು.

ತಾತ್ಕಾಲಿಕ ಸರ್ಕಾರದ ನಾಯಕರು

ತಿದ್ದುಪಡಿ ನಿರ್ಣಯ ಏನಾಯಿತು?

ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಗೋವಿಂದ ವಲ್ಲಭ್ ಪಂತ್ ಕೂಡ ಭಾರತವನ್ನು ಭಾರತ ಅಥವಾ ಭರತ ವರ್ಷ ಎಂದು ಕರೆಯಬೇಕು ಎಂದು ಸಲಹೆ ನೀಡಿದರು.

“ನಾವು ಧಾರ್ಮಿಕ ಚಟುವಟಿಕೆಗಳನ್ನು ಮಾಡುವಾಗ, ಭರತ ವರ್ಷೇ, ಭರತ ಖಂಡೇ ಎಂದು ಹೇಳುವುದಿಲ್ಲವೆ?” ಎಂದು ಕೇಳಿದರು.

‘ಭಾರತ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾವು ರಾಜ್ಯಗಳ   ಒಕ್ಕೂಟವಾಗಿರುತ್ತದೆ’ (Bharat or, in the English language, India, shall be a Union of States)’ ಎನ್ನುವ ಕಾಮತ್ ಅವರು ಮಂಡಿಸಿದ ನಿರ್ಣಯದ ಮೇಲೆ ಸದನದ ಅಧ್ಯಕ್ಷರು ವೋಟಿಂಗ್‌ ಮಾಡಿದರು. ನಿರ್ಣಯದ ಪರವಾಗಿ 38 ಸದಸ್ಯರು ಮತ್ತು ವಿರುದ್ಧವಾಗಿ 51 ಸದಸ್ಯರು ಮತ ಚಲಾಯಿಸಿದರು.  ಹೀಗಾಗಿ, ನಿರ್ಣಯ ಸೋತಿತು. ಅಂದು ಕೊನೆಗೆ ಇಂಡಿಯಾ ದಟ್‌ ಈಸ್‌ ಭಾರತ್‌ ಹೆಸರನ್ನು ಅಂತಿಮಗೊಳಿಸಲಾಯಿತು.

ಭಾರತ ಎನ್ನುವ ಹೆಸರಿಡುವ ಕುರಿತು ಮತ್ತೆ ಚರ್ಚೆಗಳು ನಡೆದಿವೆಯೇ?

ಸಂವಿಧಾನ ರಚನಾ ಸಭೆಯಲ್ಲಿ ಭಾರತದ ಹೆಸರಿನ ಬಗ್ಗೆ ಸಾಂದರ್ಭಿಕ ಚರ್ಚೆಗಳು ನಡೆಯುತ್ತಿದ್ದವು.

ನವೆಂಬರ್ 17, 1949ರಂದು, ಸೇಠ್ ಗೋವಿಂದ್ ದಾಸ್ ಅವರು ಸದನದಲ್ಲಿ ಹೀಗೆ ಹೇಳಿದ್ದರು, “ಈ ಸಂವಿಧಾನವು  ‘ಇಂಡಿಯಾ ದಟ್ ಈಸ್ ಭಾರತ್’ ಅನ್ನು ಒಳಗೊಂಡಿದೆ. ಭಾರತದ ಹೆಸರನ್ನು ಸೇರಿಸಿರುವುದು ಬಹಳ ತೃಪ್ತಿಯ ವಿಷಯವಾಗಿದೆ, ಆದರೆ ಅದನ್ನು ಉಲ್ಲೇಖಿಸಿದ ರೀತಿ ತೃಪ್ತಿಕರವಾಗಿಲ್ಲ, ಇಂಡಿಯಾ ದಟ್‌ ಈಸ್‌ ಭಾರತ್‌ ಎನ್ನುವುದು ವಿಚಿತ್ರ ಹೆಸರು’ ಎಂದು ಸೇಠ್ ಗೋವಿಂದ್ ದಾಸ್ ನವೆಂಬರ್ 17, 1949ರಂದು ಸದನದಲ್ಲಿ ಹೇಳಿದರು.    

ಒಡಿಶಾ ಮೂಲದ ಲಕ್ಷ್ಮೀನಾರಾಯಣ್ ಸಾಹು, “ಮೊದಲು ನಮ್ಮ ದೇಶವನ್ನು ‘ಭಾರತ’ ಎಂದು ಕರೆಯಲಾಗುತ್ತಿತ್ತು ಆದರೆ ನಂತರ ಜಗತ್ತು ಭಾರತವನ್ನು ಅರ್ಥಮಾಡಿಕೊಳ್ಳದ ಕಾರಣ, ಅವರು ಅದನ್ನು ‘ಇಂಡಿಯಾ ದಟ್‌ ಈಸ್‌ ಭಾರತ್’ ಎಂದು ಕರೆದರು” ಎಂದು ಅವರು ಹೇಳಿದರು.

 ನವೆಂಬರ್ 18, 1949ರಂದು, ಗುಜರಾತ್ ನ ಕಾಂತುಭಾಯ್ ದೇಸಾಯಿ ಅವರು ಹೆಸರಿನೊಂದಿಗೆ ಹೆಚ್ಚಿನ ಸಮಸ್ಯೆ ಇಲ್ಲ ಎಂದು ಹೇಳಿದರು.

“ಸಂವಿಧಾನದಲ್ಲಿ ‘ಇಂಡಿಯಾ ದಟ್ ಈಸ್ ಭಾರತ್’ ಹೆಸರನ್ನು ಸೇರಿಸುವುದನ್ನು ನನ್ನ ಅನೇಕ ಸ್ನೇಹಿತರು ಆಕ್ಷೇಪಿಸುತ್ತಿದ್ದಾರೆ. ಅದರಲ್ಲಿ ನನಗೆ ಹೆಚ್ಚು ತೊಂದರೆ ಕಾಣುತ್ತಿಲ್ಲ. ಇಂಡಿಯಾ ಹೆಸರಿನಲ್ಲಿ ಜಗತ್ತು ನಮ್ಮನ್ನು ಗುರುತಿಸುತ್ತದೆ. ಇದನ್ನು ಇಂಡಿಯಾ ಎಂದು ಕರೆಯಲಾಗುತ್ತದೆ ಮತ್ತು ನಾವು ನಮ್ಮನ್ನು ಭಾರತ್ ಎಂದು ಕರೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.

ಅಂಬೇಡ್ಕರ್ ಮೇಲಿನ ಟೀಕೆ

 ನವೆಂಬರ್ 21, 1949 ರಂದು, ಇಂಡಿಯಾ ಹೆಸರಿನಲ್ಲಿ ನಡೆದ ಸಭೆಯಲ್ಲಿ, ಕಾಂಗ್ರೆಸ್ ಪಕ್ಷದ ಸದಸ್ಯ ಅಲ್ಗು ರಾಯ್ ಶಾಸ್ತ್ರಿ ಅದನ್ನು ಟೀಕಿಸಿದರು. 

“ದೇಶದ ಹೆಸರನ್ನು ಯೂನಿಯನ್ ಆಫ್ ಇಂಡಿಯಾ ಎಂದು ಉಲ್ಲೇಖಿಸಲಾಗಿದೆ. ಇದು ನಾವು ಗುಲಾಮ ಮನಸ್ಥಿತಿಯಿಂದ ಹೊರಬಂದಿಲ್ಲವೆನ್ನುವುದನ್ನು ಎಂದು ತೋರಿಸುತ್ತದೆ. ನಮ್ಮ ದೇಶದ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ.  ಈ ಭೂಮಿಗೆ ‘ಇಂಡಿಯಾ ದಟ್‌ ಈಸ್ ಭಾರತ್’  ಎಂಬ ಹೆಸರು ಸರಿಯಾಗಿದೆಯೇ? ಪ್ರಪಂಚದ ಬೇರೆ ಯಾವುದೇ ದೇಶವು ಇಷ್ಟು ಸಂಕೀರ್ಣವಾದ ಹೆಸರನ್ನು ಹೊಂದಿಲ್ಲ, ಇದು ಸರಿಯಾದ ಹೆಸರಲ್ಲ. ಇದಕ್ಕೆ ಸರಿಯಾದ ಹೆಸರನ್ನು ನೀಡಲು ನಾವು ವಿಫಲರಾಗಿದ್ದೇವೆ.

 1949ರ ನವೆಂಬರ್ 24ರಂದು ನಡೆದ ಚರ್ಚೆಯಲ್ಲಿ ಬಿಹಾರದ ಮೊಹಮ್ಮದ್ ತಾಹಿರ್, ಡಾ.ಅಂಬೇಡ್ಕರ್ ಅವರು ಭಾರತಕ್ಕೆ ಗೊಂದಲಮಯ ಹೆಸರು ಇಟ್ಟಿದ್ದಾರೆ ಎಂದು ಹೇಳಿದ್ದರು.

“ನಮ್ಮ ಸಂವಿಧಾನಕ್ಕೆ ನಮ್ಮ ದೇಶದ ಹೆಸರನ್ನು ಹೇಳಲು ಸಾಧ್ಯವಾಗಿಲ್ಲ, ಅದಕ್ಕೆ ಗೊಂದಲದ ಹೆಸರನ್ನು ನೀಡಲಾಗಿದೆ ಮತ್ತು ಅದನ್ನು ಸ್ವೀಕರಿಸಲಾಗಿದೆ. ನಿಮ್ಮ ದೇಶದ ಹೆಸರೇನು ಎಂದು ಯಾರಾದರೂ ಡಾ. ಅಂಬೇಡ್ಕರ್ ಅವರನ್ನು ಕೇಳಿದರೆ, ಅವರು ‘ಭಾರತ್, ಇಂಡಿಯಾ ಅಥವಾ ಹಿಂದೂಸ್ತಾನ್’ ಎಂದು ಹೇಳಬಹುದು. ಯಾರಾದರೂ ನನ್ನನ್ನು ಕೇಳಿದರೆ,  ನಾನು ‘ಇಂಡಿಯಾ ದಟ್‌ ಈಸ್‌ ಭಾರತ್’  ಎಂದು ಹೇಳುತ್ತೇನೆ” ಎಂದು ತಾಹಿರ್ ಹೇಳಿದರು.

ಆದಾಗ್ಯೂ, ಈ ಚರ್ಚೆಗಳು ಹೆಚ್ಚು ಪರಿಣಾಮ ಬೀರಲಿಲ್ಲ. ಅನುಚ್ಛೇದ 1ರ ಪ್ರಕಾರ ಇಂಡಿಯಾ ದಟ್‌ ಈಸ್ ಭಾರತ್, ರಾಜ್ಯಗಳ ಒಕ್ಕೂಟ (Bharat or, in the English language, India, shall be a Union of States)‌ ಆಗಿಯೇ ಉಳಿಯಿತು. 

ಭಾರತದ ಸಂವಿಧಾನವನ್ನು  26 ನವೆಂಬರ್ 1949ರಂದು ಅಂಗೀಕರಿಸಲಾಯಿತು ಮತ್ತು ಜನವರಿ 26, 1950ರಂದು ಜಾರಿಗೆ ತರಲಾಯಿತು.  

(ಬಿಬಿಸಿ)

Related Articles

ಇತ್ತೀಚಿನ ಸುದ್ದಿಗಳು