ಮುಂಬಯಿ: ವಿರೋಧ ಪಕ್ಷಗಳ ಸಭೆಯ ಬೆನ್ನಲ್ಲೇ ಭಾಗವತ್ ದೇಶದ ಹೆಸರನ್ನು ಭಾರತವೆಂದೇ ಕರೆಯಬೇಕು, ಇಂಡಿಯಾ ಎನ್ನಬಾರದು ಎಂದು ಕರೆಕೊಟ್ಟಿದ್ದಾರೆ. ಈಗ ಈ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭಗೊಂಡಿವೆ.
ಅತ್ತ ವಿರೋಧ ಪಕ್ಷಗಳ ಒಕ್ಕೂಟ ತನ್ನ ಮಿತ್ರಕೂಟಕ್ಕೆ INDIA ಎನ್ನುವ ಹೆಸರನ್ನಿಡುತ್ತಿದ್ದಂತೆ ಇತ್ತ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಇಂಡಿಯಾ ಎನ್ನುವ ಹೆಸರಿನ ವಿರುದ್ಧ ಕೆಂಡ ಕಾರಲು ಆರಂಭಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಇತ್ತೀಚೆಗೆ ನರೇಂದ್ರ ಮೋದಿ ಕೂಡಾ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಸ್ಥೆಯ ಹೆಸರಿನಲ್ಲೂ ಇಂಡಿಯಾ ಇದೆ ಎನ್ನುವ ಮೂಲಕ ವಿರೋಧ ಪಕ್ಷಗಳನ್ನು ಕುಟುಕಿದ್ದರು.
ಈಗ ಬಿಜೆಪಿಯ ಮಾತ್ರ ಸಂಸ್ಥೆ RSS ಮುಖ್ಯಸ್ಥ ಮೋಹನ ಭಾಗವತ ಇಂಡಿಯಾ ಎನ್ನುವ ಹೆಸರನ್ನು ಕೈಬಿಟ್ಟು ದೇಶವನ್ನು ಭಾರತ ಎನ್ನುವ ಹೆಸರಿನಿಂದ ಗುರುತಿಸಬೇಕು ಎಂದಿರುವುದು ಕುತೂಹಲ ಕೆರಳಿಸಿದೆ.
ನಿನ್ನೆ ಮುಂಬಯಿಯಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಿ ಸಭೆ ಪೂರೈಸಿದ ನಂತರ RSS ಮುಖ್ಯಸ್ಥರಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹ. ಇದು ಬಿಜೆಪಿ ಮಿತ್ರ ಪಕ್ಷಗಳ ಒಗ್ಗಟ್ಟನ್ನು ಕಂಡು ಅಲುಗಾಡಿರುವುದರ ದ್ಯೋತಕ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.”
ಆಗಿದ್ದೇನು?
ಗುವಾಹಟಿಯಲ್ಲಿ ಸಕಲ್ ಜೈನ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿ, ನಮ್ಮ ದೇಶವನ್ನು ಪ್ರಾಚೀನ ಕಾಲದಿಂದಲೂ ಭಾರತ ಎಂದು ಕರೆಯಲಾಗುತ್ತಿತ್ತು ಹಾಗಾಗಿ ಇಂಡಿಯಾ ಎಂದು ಕರೆಯುವ ಬದಲು ಭಾರತ ಎಂದು ಕರೆಯಬೇಕು ಎಂದು ಒತ್ತಿ ಹೇಳಿದ್ದರು.
“ನಮ್ಮ ದೇಶದ ಹೆಸರು ಪ್ರಾಚೀನ ಕಾಲದಿಂದಲೂ ಭಾರತ. ಯಾವುದೇ ಭಾಷೆಯಿರಲಿ, ಹೆಸರು ಒಂದೇ. ಎಲ್ಲಾ ಕ್ಷೇತ್ರಗಳಲ್ಲಿ ಇಂಡಿಯಾ ಎಂಬ ಪದದ ಬದಲು ಭಾರತ್ ಎಂಬ ಪದವನ್ನು ಬಳಸಬೇಕು. ಭಾರತ್ ಪದ ಬಳಕೆಯಾದಾಗ ಮಾತ್ರ ಬದಲಾವಣೆ ಬರುತ್ತದೆ. ನಮ್ಮ ದೇಶವನ್ನು ಭಾರತ ಎಂದು ಕರೆಯಬೇಕು ಮತ್ತು ಅದನ್ನು ಇತರರಿಗೆ ವಿವರಿಸಬೇಕು” ಎಂದು ಅವರು ಹೇಳಿದರು.