ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ ಇಂದಿನಿಂದ ಎರಡು ದಿನಗಳ ಕಾಲ ಮುಂಬೈ ಮತ್ತು ದೆಹಲಿಯಲ್ಲಿ ನಡೆಯುತ್ತಿದೆ. ಸಭೆಯಲ್ಲಿ ಭಯೋತ್ಪಾಧನೆ ಮತ್ತು ಅದರ ಬಗ್ಗೆ ಎಚ್ಚರಿಕೆಯ ಬಗ್ಗೆ ಚರ್ಚೆ ನಡೆಸಿದ್ದು, ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದ್ದು ಸಂತ್ರಸ್ತರ ನೋವನ್ನು ಕೇಳಬೇಕಾಗಿದೆ. ಅವರಿಗಾದ ನಷ್ಟಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮುಂಬೈ ಘಟನೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಲಾಗಿದೆ. ಆದರೆ, ರೂವಾರಿಯನ್ನು ಕರೆತರಲು ಇನ್ನೂ ಸಾಧ್ಯವಾಗದೆ ಸಂಪೂರ್ಣ ನ್ಯಾಯ ಇನ್ನೂ ಸಿಕ್ಕಿಲ್ಲʼ ಎಂದು ಹೇಳಿದರು.
ʼಭಯೋತ್ಪಾದನಾ ಸಂಘಟನೆಗಳಿಗೆ ಹಣ ಹಾಗೂ ಸಂಪನ್ಮೂಲ ಅಗತ್ಯವಾಗಿದ್ದು, ಅದಕ್ಕಾಗಿ ಅವು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿವೆ. ಹಣಸಂಗ್ರಹಕ್ಕಾಗಿ ನಾನಾ ರೀತಿಯ ಧೋರಣೆಗಳೊಂದಿಗೆ ಕೆಲಸ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಭಯೋತ್ಪಾದಕ ಕೃತ್ಯಗಳು ಇಂದು ಬಹುಆಯಾಮಗಳು ಪಡೆದುಕೊಂಡಿದ್ದು ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆʼ ಎಂದು ಹೇಳಿದರು.