ಉಡುಪಿ: ಉಡುಪಿ ನೇತ್ರ ಜ್ಯೋತಿ ಕಾಲೇಜಿನ ವಿಷಯಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಕಾಂಗ್ರೆಸ್ ಬಿಜೆಪಿ ನಡುವಿನ ಜಗಳ ತಾರಕಕೇರುತ್ತಿದ್ದು, ಇಂದು ಉಡುಪಿ ಕಾಂಗ್ರೆಸ್ ನಾಯಕ ರಮೇಶ್ ಕಾಂಚನ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ನಗರದಲ್ಲಿ ಮಣಿಪುರ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ “ಯಶ್ಪಾಲ್ ಸುವರ್ಣ ಮತ್ತು ಬಿಜೆಪಿಯವರಿಗೆ ಪೊಲೀಸ್ ತನಿಖೆಯಲ್ಲಿ ನಂಬಿಕೆಯಿಲ್ಲದೆ ಹೋದರೆ ಅವರು ಕಲ್ಲಡ್ಕ ಪ್ರಭಾಕರ ಭಟ್ಟರಿಂದ ತನಿಖೆ ಮಾಡಿಸಲಿ” ಎಂದು ಕಿಡಿಕಾರಿದರು.
ಕಾಂಗ್ರೆಸ್ಸಿನ ಪ್ರಮುಖ ನಾಯಕರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜಕೀಯಕ್ಕಾಗಿ ಸಣ್ಣ ಮಕ್ಕಳ ಭವಿಷ್ಯವನ್ನು ಬಲಿ ಕೊಡಲು ನಿಂತಿದೆ ಎಂದರು.
ಈಗಾಗಲೇ ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ಸತ್ಯಾಸತ್ಯತೆ ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿಗೆ ಬಂದಿದ್ದಾರೆ, ಪೊಲೀಸ್ ತನಿಖೆಯೂ ನಡೆಯುತ್ತಿದೆ. ನಿಮಗೆ ತನಿಖೆ ಮೇಲೆ ಅಪನಂಬಿಕೆ ಇದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ಟರಿಂದಲೇ ಮಾಡಿಸಿ ಎಂದು ವಾಗ್ದಾಳಿ ನಡೆಸಿದರು.