ಕುದಿಯುತ್ತಿರುವ ಮಧ್ಯಪ್ರಾಚ್ಯ: ಕುವೈತ್ ಮೇಲೆ ಇರಾನ್ ದಾಳಿ, ಭಾರತೀಯ ಕಾರ್ಮಿಕ ಸಾವು

ಕುವೈತ್ ಸಿಟಿ: ಕುವೈತ್‌ನ ಪ್ರಮುಖ ವಿದ್ಯುತ್ ಮತ್ತು ನೀರು ಶುದ್ಧೀಕರಣ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ದಾಳಿಯಿಂದಾಗಿ ಘಟಕದ ಸರ್ವಿಸ್ ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡಿದೆ ಎಂದು ಕುವೈತ್‌ನ ವಿದ್ಯುತ್ ಮತ್ತು ನೀರು ಸಚಿವಾಲಯವನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಘಟನೆಯು ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯ ವಲಸಿಗರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮತ್ತೊಂದೆಡೆ, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್‌ನ ತಬ್ರಿಜ್‌ನಲ್ಲಿರುವ ಪೆಟ್ರೋಕೆಮಿಕಲ್ ಪ್ಲಾಂಟ್ ಮೇಲೆ ಭಾರಿ ದಾಳಿ ನಡೆಸಿವೆ. ಈ ಪ್ರತಿ ದಾಳಿಯಿಂದಾಗಿ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇರಾನ್ ಸಹ ದಕ್ಷಿಣ ಇಸ್ರೇಲ್‌ನ ಕೈಗಾರಿಕಾ ವಲಯವನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಉಡಾಯಿಸಿದ್ದು, ಅಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾಗಿ ಅಪಾಯಕಾರಿ ರಾಸಾಯನಿಕಗಳು ಸೋರಿಕೆಯಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಂಘರ್ಷವು ಇಡೀ ಗಲ್ಫ್ ವಲಯಕ್ಕೆ ವ್ಯಾಪಿಸುತ್ತಿದ್ದು, ತಮ್ಮ ವೈಮಾನಿಕ ವಲಯಕ್ಕೆ ಪ್ರವೇಶಿಸಿದ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಹಲವು ರಾಷ್ಟ್ರಗಳು ಘೋಷಿಸಿವೆ. ದಕ್ಷಿಣ ಲೆಬನಾನ್‌ನಲ್ಲಿ ನಡೆದ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕ ಪಡೆಯ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪಾಕಿಸ್ತಾನ, ಈಜಿಪ್ಟ್, ಟರ್ಕಿ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ಇಸ್ಲಾಮಾಬಾದ್‌ನಲ್ಲಿ ತುರ್ತು ಸಭೆ ನಡೆಸಿದ್ದು, ಶಾಂತಿ ಸ್ಥಾಪನೆಗೆ ಜಾಗತಿಕ ಮಟ್ಟದಲ್ಲಿ ಪ್ರಯತ್ನ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು