ನೆತನ್ಯಾಹು ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ: ಇಸ್ರೇಲ್-ಇರಾನ್ ಯುದ್ಧ ಭೀತಿ ತೀವ್ರ

ಟೆಹ್ರಾನ್/ಜೆರುಸಲೆಮ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ. ತನ್ನ ಪರಮ ಶತ್ರು ದೇಶಗಳ ಮೇಲೆ ಇರಾನ್ ಈಗ ನೇರ ಪ್ರತೀಕಾರದ ದಾಳಿಗಳನ್ನು ಆರಂಭಿಸಿದೆ.

ಇಸ್ರೇಲ್ ಪ್ರಧಾನಿಯೇ ಇರಾನ್ ಗುರಿ

ಇಂದು (ಮಾರ್ಚ್ 2, 2026) ಇರಾನ್‌ನ ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನು ಗುರಿಯಾಗಿಸಿಕೊಂಡು ‘ಖೈಬರ್’ ಕ್ಷಿಪಣಿಗಳ ಮೂಲಕ ಭೀಕರ ದಾಳಿ ನಡೆಸಿದೆ. ನೆತನ್ಯಾಹು ಅವರ ಕಚೇರಿ ಮತ್ತು ಇಸ್ರೇಲ್ ವಾಯುಪಡೆಯ ಕಮಾಂಡರ್ ಟೋಮರ್ ಬಾರ್ ಅವರ ನಿವಾಸದ ಮೇಲೆ ಈ ದಾಳಿ ನಡೆದಿದೆ ಎಂದು ಐಆರ್‌ಜಿಸಿ ಘೋಷಿಸಿದೆ. ದಾಳಿಯ ಸಮಯದಲ್ಲಿ ನೆತನ್ಯಾಹು ಅವರು ಎಲ್ಲಿಯಿದ್ದರು ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ, ಇಸ್ರೇಲ್‌ನ ಕೆಲವು ಪ್ರಮುಖ ಸೇನಾ ಕಮಾಂಡರ್‌ಗಳು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಸ್ರೇಲ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಒಮನ್ ಮೇಲಿನ ದಾಳಿ: ಇರಾನ್ ಸ್ಪಷ್ಟನೆ

ಈ ಯುದ್ಧದ ನಡುವೆ ಅರಬ್ ದೇಶಗಳ ಮೇಲೂ ಇರಾನ್ ದಾಳಿ ನಡೆಸುತ್ತಿದ್ದು, ಒಮನ್‌ನ ಡುಕ್ಮ್ (Duqm) ವಾಣಿಜ್ಯ ಬಂದರನ್ನು ಎರಡು ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು. ಈ ದಾಳಿಯಲ್ಲಿ ಕಾರ್ಮಿಕರ ವಸತಿ ಪ್ರದೇಶಕ್ಕೆ ಹಾನಿಯಾಗಿದ್ದು, ಒಬ್ಬ ವಿದೇಶಿ ಕಾರ್ಮಿಕ ಗಾಯಗೊಂಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, “ನಮ್ಮ ಗುರಿ ಒಮನ್ ಆಗಿರಲಿಲ್ಲ. ನಮ್ಮ ಸೈನಿಕರಿಗೆ ಕೇವಲ ಶತ್ರು ದೇಶಗಳನ್ನು ಗುರಿಯಾಗಿಸಲು ಸೂಚಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅಥವಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಾಗ ಈ ತಪ್ಪು ನಡೆದಿದೆ,” ಎಂದು ಸಮರ್ಥಿಸಿಕೊಂಡಿದ್ದಾರೆ.

ಇಸ್ರೇಲ್ ತಿರುಗೇಟು: ಇರಾನ್ ಗುಪ್ತಚರ ಅಧಿಕಾರಿಗಳ ಹತ್ಯೆ

ಮತ್ತೊಂದೆಡೆ ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF), ಇರಾನ್‌ನ ಗುಪ್ತಚರ ವ್ಯವಸ್ಥೆಗೆ ಭಾರಿ ಹೊಡೆತ ನೀಡಿದೆ. ಇರಾನ್‌ನ ಗುಪ್ತಚರ ಇಲಾಖೆಯ ಉಪ ಸಚಿವ ಸೈಯದ್ ಯಾಹ್ಯಾ ಹಮೀದಿ ಮತ್ತು ಗುಪ್ತಚರ ಮುಖ್ಯಸ್ಥ ಜಲಾಲ್ ಪೋರ್ ಹುಸೇನ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಘೋಷಿಸಿದೆ.

ಭಾರತೀಯ ಸಿಬ್ಬಂದಿ ಸಾವು

ಇದೇ ವೇಳೆ ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಮೆರೈನ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಒಮನ್ ಸರ್ಕಾರ ಖಚಿತಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಈ ಅನಿಶ್ಚಿತತೆಯಿಂದಾಗಿ ಭಾರತದ ಆರ್ಥಿಕತೆ ಮತ್ತು ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.


Related Articles

ಇತ್ತೀಚಿನ ಸುದ್ದಿಗಳು