Friday, June 20, 2025

ಸತ್ಯ | ನ್ಯಾಯ |ಧರ್ಮ

ಗ್ರಂಥಾಲಯಕ್ಕೆ ಪುಸ್ತಕ ಖರೀದಿಯಲ್ಲಿ ಅವ್ಯವಹಾರ ; ಕುಲಪತಿಗಳ ಆರೋಪಕ್ಕೆ ಸರ್ಕಾರದ ಪ್ರತಿಕ್ರಿಯೆ ಏನು?

2022-23 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ನಿಧಿಯಲ್ಲಿ ಪುಸ್ತಕಗಳ ಖರೀದಿ ಕುರಿತಂತೆ ಭ್ರಷ್ಟಾಚಾರ ನಡೆದಿದೆ ಎಂದು ‘ದಿ ಫೈಲ್’ ವರದಿ ಮಾಡಿದೆ. ‘ದಿ ಫೈಲ್’ ವರದಿಯಂತೆ, ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆ ನಿಯಮಗಳ ಪಾಲನೆಯಾಗಿಲ್ಲ ಮತ್ತು ದರಪಟ್ಟಿಗಳನ್ನೂ ಪಡೆದಿಲ್ಲ. ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪುಸ್ತಕಗಳ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಾದೇಶವನ್ನೂ ಹೊರಡಿಸಿಲ್ಲ ಎಂದು ಆರೋಪಿಸಲಾಗಿದೆ. 

ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಘಟಕದದ ಸ್ಥಾಯಿ ಸಮಿತಿಯು ಪುಸ್ತಕಗಳ ಖರೀದಿ ಕುರಿತು ಪ್ರಸ್ತಾವನೆ ಮಂಡಿಸಿತ್ತು. ಅದಕ್ಕೆಂದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ನಿಧಿಯಡಿಯಲ್ಲಿ 5 ಲಕ್ಷ ರು ಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ಆದರೆ ಈ ಕುರಿತು ಕಾನೂನು ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧ ವಸ್ತ್ರದ ಅವರು ಕುಲಪತಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ ಎಂದು ವರದಿಯಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ನೇರವಾಗಿ ಸರ್ಕಾರದ ಮೆಟ್ಟಿಲು ಹತ್ತಿದ್ದಾರೆ. ಪ್ರಕರಣದ ಕುರಿತು ವಿಶ್ವವಿದ್ಯಾಲಯದ ಕುಲಸಚಿವರಾದ ಕೆಎಎಸ್ ಅಧಿಕಾರಿ ಅನುರಾಧ ವಸ್ತ್ರದ ಅವರು ಸರ್ಕಾರಕ್ಕೆ 2024ರ ಫೆ.9ರಂದೇ ಪತ್ರ ಬರೆದಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.

ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯಾದ ಐ ಬಿ ಬಿರಾದಾರ ಅವರ ಮೌಖಿಕ ಆದೇಶದ ಮೂಲಕವೇ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಾಗಿತ್ತು. ಪುಸ್ತಕಗಳ ಖರೀದಿ ಸಂಬಂಧದ ಕಡತವನ್ನು ವಿಶ್ವವಿದ್ಯಾಲಯದ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸದೇ ತಮ್ಮ ಬಳಿಯೇ ಇರಿಸಿಕೊಂಡಿದ್ದರು ಎಂದು ಕುಲಸಚಿವೆ ಅನುರಾಧ ವಸ್ತ್ರದ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಪುಸ್ತಕಗಳ ಸಂಗ್ರಹಣೆಗೆ ದರಪಟ್ಟಿ ಆಹ್ವಾನಿಸಿ ನಿಯಮಾನುಸಾರ ಸೂಕ್ತ ಕ್ರಮವಹಿಸಬೇಕು ಎಂದು 2023ರ ಫೆ.23ರಂದು ಕುಲಪತಿಗಳು ಸೂಚಿಸಿದ್ದರು. ಅಲ್ಲದೇ 2023ರ ಮಾರ್ಚ್ 16ರಂದು ಅನುಮೋದಿಸಿದ್ದರು. ಆದರೂ ಕಡತವನ್ನು ಕುಲಪತಿಗಳ ವಿಶೇಷಾಧಿಕಾರಿಗಳಾದ ಐ ಬಿ ಬಿರಾದಾರ ಅವರನ್ನು ಕಡತವನ್ನು ಮೂಲ ಶಾಖೆ ಗ್ರಂಥಾಲಯಕ್ಕೆ ವರ್ಗಾಯಿಸಿರಲಿಲ್ಲ ಎಂದು ಕುಲಸಚಿವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಪ್ರಕಟಣೆ ನೀಡಿರಲಿಲ್ಲ. ಮತ್ತು ತುಲನಾತ್ಮಕ ಪಟ್ಟಿ ತಯಾರಿಸಿರಲಿಲ್ಲ. ಹಾಗೂ ಈ ಪಟ್ಟಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನೂ ಪಡೆದಿರಲಿಲ್ಲ. ಹಾಗೂ ಯಾವುದೇ ಕಾರ್ಯಾದೇಶ ನೀಡದೇ ತಾವೇ ನೇರವಾಗಿ ದರಪಟ್ಟಿ ಆಹ್ವಾನಿಸಿದ್ದರು. ಈ ಮೂಲಕ ಕೆಟಿಪಿಪಿ ಕಾಯ್ದೆ 1999 ಮತ್ತು ನಿಯಮಗಳು 2000 ಮತ್ತು ಸಂಗ್ರಹಣೆ ಕುರಿತಂತೆ ಆರ್ಥಿಕ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಕುಲಸಚಿವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಕುಲಪತಿಗಳ ಈ ಪತ್ರದಿಂದ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಗ್ರಂಥಾಲಯದ ಪುಸ್ತಕಗಳಿಗೆ ಸರಾಸರಿ ಶೇ.25ರಿಂದ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆದರೆ ಬಿರಾದಾರ ಅವರ ಮೌಖಿಕ ಸೂಚನೆ ಮೇರೆಗೆ ಆಗಿರುವ ಈ ಸಂಗ್ರಹಣೆಯಲ್ಲಿ ಕೇವಲ ಶೇ.15ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿರುವುದು ಕಂಡು ಬಂದಿದೆ ಎಂದೂ ಪತ್ರದಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page