Thursday, June 19, 2025

ಸತ್ಯ | ನ್ಯಾಯ |ಧರ್ಮ

ಬ್ರಾಹ್ಮಣ್ಯ ಅನ್ನೋದು ಕೇವಲ ಬ್ರಾಹ್ಮಣರ ಟ್ರೇಡ್ ಮಾರ್ಕ್‌ ಆಗಿದೆಯೇ?

ಅಬ್ರಾಹ್ಮಣ ಜಾತಿಗಳಲ್ಲಿ, ಶೂದ್ರ, ದಲಿತವರ್ಗಗಳಲ್ಲೂ ಕೂಡ ಬ್ರಾಹ್ಮಣರನ್ನೂ ಮೀರಿ ಕಂದಾಚಾರ, ತಾರತಮ್ಯ ಆಚರಿಸುವ ಮನಸ್ಥಿತಿಗಳು ಸಾಕಷ್ಟು ಆಗಾಗ ಕಾಣಸಿಗುತ್ತವೆ. ಬೆಂಡಿಗೇರಿ, ಬದನವಾಳು, ಖೈರ್ಲಾಂಜಿಯಂತ ಕುಪ್ರಸಿದ್ಧ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣಗಳು ಅಸಲಿಗೆ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದವುಗಳೇ ಅಲ್ಲ _ ಶಂಕರ್ ಸೂರ್ನಳ್ಳಿ.

ಇತ್ತೀಚೆಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಕೆಲವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಎರಡೂ ಒಂದೇ ಬೇರೇನಲ್ಲ ಅಂದರೆ ಮತ್ತೆ ಕೆಲವರು ಬ್ರಾಹ್ಮಣ್ಯದ ವಿಡಂಬನೆಯನ್ನು ಬ್ರಾಹ್ಮಣ ಸಮಾಜದ ವಿಡಂಬನೆ ಎಂದೆನ್ನಲಾಗದು, ಬ್ರಾಹ್ಮಣ ಎನ್ನೋದೇ ಬೇರೆ ಬ್ರಾಹ್ಮಣ್ಯವೇ ಬೇರೆ ಎಂದೆನ್ನುತ್ತಾರೆ. ಒಂದು ರೀತಿಯಲ್ಲಿ ನೋಡುವುದಾದರೆ ಇಲ್ಲಿ ಎರಡನೇ ವಾದವೇ ಒಪ್ಪಲು ಯೋಗ್ಯ ಎನಿಸುತ್ತದೆ. ಸಾಮಾಜಿಕ ಸುಧಾರಣೆಯ ಇತಿಹಾಸವನ್ನು ಹೀಗೇ ಸುಮ್ಮನೆ ಅವಲೋಕಿಸಿದರೆ ಬ್ರಾಹ್ಮಣ ಸಮುದಾಯದ ಅನೇಕ ಸಮಾಜ ಸುಧಾರಕರನ್ನು ಕಾಣಬಹುದು. ಸ್ಥಳೀಯವಾಗಿ ಗಮನಿಸಿದರೂ ಮಂಗಳೂರಿನ  ಕುದ್ಮುಲ್ ರಂಗರಾಯರಂತವರು ಇಡೀ ಬ್ರಾಹ್ಮಣ ಸಮುದಾಯವನ್ನೇ ದಲಿತರ ಉದ್ಧಾರದ ಹೆಸರಲ್ಲಿ ಎದುರು ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಕಂಡ ಕಂಡಲ್ಲಿ ಅವರನ್ನು ಅವಮಾನಿಸಲಾಗುತ್ತಿತ್ತಲ್ಲದೇ ಅವರ ಮಕ್ಕಳ ಮದುವೆ ಸಂಬಂಧಗಳಿಗೂ ಇದು ಮುಂದೆ ತೊಡಕಾಗಿ ಬಂತು. ಇವತ್ತಿಗೂ ಸಂಪ್ರದಾಯವಾದಿಗಳನ್ನು ಎದುರು ಹಾಕಿಕೊಂಡು ಜೀವ ಭಯವನ್ನೂ ಲೆಕ್ಕಿಸದೇ ಸಾಮಾಜಿಕ ಸಾಮರಸ್ಯಕ್ಕಾಗಿ ಹೋರಾಡುವ ಅನೇಕ ಬ್ರಾಹ್ಮಣ ಸಮುದಾಯದ ವ್ಯಕ್ತಿತ್ತ್ವಗಳನ್ನು ನಮ್ಮಗಳ ನಡುವೆಯೇ ಕಾಣಬಹುದು.

ಇದನ್ನೇ (ಬ್ರಾಹ್ಮಣ್ಯ ಅನ್ನೋದು ಕೇವಲ ಬ್ರಾಹ್ಮಣರ ಟ್ರೇಡ್ ಮಾರ್ಕ್ ಅಲ್ಲವೆಂದು) ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ, ಅಬ್ರಾಹ್ಮಣ ಜಾತಿಗಳಲ್ಲಿ, ಶೂದ್ರ, ದಲಿತವರ್ಗಗಳಲ್ಲೂ ಕೂಡ ಬ್ರಾಹ್ಮಣರನ್ನೂ ಮೀರಿ ಕಂದಾಚಾರ, ತಾರತಮ್ಯ ಆಚರಿಸುವ ಮನಸ್ಥಿತಿಗಳು ಸಾಕಷ್ಟು ಆಗಾಗ ಕಾಣಸಿಗುತ್ತವೆ. ಬೆಂಡಿಗೇರಿ, ಬದನವಾಳು, ಖೈರ್ಲಾಂಜಿಯಂತ ಕುಪ್ರಸಿದ್ಧ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣಗಳು ಅಸಲಿಗೆ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದವುಗಳೇ ಅಲ್ಲ. ಅಂದರೆ ಅದು ಬ್ರಾಹ್ಮಣೇತರರದ್ದು. ಅಸ್ಪೃಶ್ಯರು, ಮಹಿಳೆಯರೇ ಮೊದಲಾದ ಶೋಷಿತ ಸಮುದಾಯಕ್ಕಾಗಿ ಪ್ರಾಮಾಣಿಕವಾಗಿ ಸ್ಪಂದಿಸಿದ ಅನೇಕ ಬ್ರಾಹ್ಮಣ ಸಮುದಾಯದಿಂದ
ಬಂದ ಜೀವಗಳಿವೆ. ಆದರೆ ಸಾರಾಸಗಟಾಗಿ ಎಲ್ಲರೂ ಅಲ್ಲದಿದ್ದರೂ ಕೂಡ ಬ್ರಾಹ್ಮಣ ಸಮುದಾಯದ ಕೆಲ ಜಿಗುಟು ಕಂದಾಚಾರದ ಸ್ವಾರ್ಥಿ ಮನಸ್ಸುಗಳು ಬ್ರಾಹ್ಮಣ್ಯವನ್ನು ಆವತ್ತಿನಿಂದ ಇವತ್ತಿನವರೆಗೆ ಕಾಪಿಟ್ಟು ಪೋಷಿಸಿಕೊಂಡು ಬರುತ್ತಿವೆ ಎನ್ನುವುದನ್ನು ಮಾತ್ರ ಯಾವತ್ತೂ ಅಲ್ಲಗಳೆಯುವಂತಿಲ್ಲ. ತೀರಾ ಮೊನ್ನೆ ಮೊನ್ನೆ ನಡೆದಂತಹ ಮೂರು ಘಟನೆಗಳನ್ನು ಈ ಬ್ರಾಹ್ಮಣ್ಯದ ದರ್ಪತನ ಮತ್ತು ಶ್ರೇಷ್ಠತೆಯ ಅಮಲುಗಳಿಗೆ ಪ್ರತಿಯಾಗಿ ಉದಾಹರಿಸಬಹುದು.

ಮೊದಲನೆಯದಾಗಿ ಬ್ರಾಹ್ಮಣ್ಯದ ನಂಜನ್ನು ಹೊದ್ದಂತಹ ಪತ್ರಕರ್ತನೊಬ್ಬ ದೇಶದ ಅತ್ಯುನ್ನತ ಸ್ಥಾನದಲ್ಲಿರುವಂತಹ ರಾಷ್ಟ್ರಪತಿಗಳ ಬಗ್ಗೆ ಅವರು ಬುಡಕಟ್ಟು ಹಿನ್ನೆಲೆಯಿಂದ ಬಂದಂತಹ ಮಹಿಳೆ ಎನ್ನುವ ಪೂರ್ವಗ್ರಹದ ಕೊಳಕು ಮನಸನಿಟ್ಟುಕೊಂಡು ಆಡಿದಂತಹ ಅವಹೇಳನಕಾರಿ ಮಾತುಗಳು. ಈ ಮನುಷ್ಯ ರಾಷ್ಟ್ರಪತಿಗಳ ಮೈಬಣ್ಣದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ಅನಂತರ ಅದನ್ನು ಸಮರ್ಥಿಸಿಕೊಳ್ಳುವ ದಾರ್ಷ್ಟ್ಯತನಕ್ಕೂ ಇಳಿದಿರುವುದು ಆತನ ಬ್ರಾಹ್ಮಣ್ಯದ ನಂಜಿನ ಗ್ರಾಫ್ ನ ಮಿತಿ ಎಂತದೆಂಬುದನ್ನ ಇಲ್ಲಿ ತೋರಿಸುತ್ತದೆ. (25 ವರ್ಷಗಳ ಹಿಂದೆ ದಲಿತ ಸಮುದಾಯದ ಕೆ ಆರ್ ನಾರಾಯಣನ್ ರವರು ರಾಷ್ಟ್ರಪತಿಯಾಗಿದ್ದಾಗ ಕನ್ನಡ ವಾರಪತ್ರಿಕೆಯ ಸಂಪಾದಕೀಯ ಒಂದರಲ್ಲಿ ’’ಹರಿಜನ ಬ್ರಾಹ್ಮಣ”ಎಂದು ಅವರನ್ನು “ಹೊಗಳಿ” ಬರೆದಿತ್ತು. ಅದರಲ್ಲಿ ಗುಲ್ವಾಡಿ ಸೀಮೆಯ ಸಂಪಾದಕ ಮಹಾಶಯರು ಹೇಳಹೊರಟದ್ದೇನೆಂದರೆ ಅವರು ಹರಿಜನರಾಗಿದ್ದರೂ ಕೂಡ ಬ್ರಾಹ್ಮಣರ ಶ್ರೇಷ್ಟ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು ಎಂದು. ಬಳಿಕ ಆ ಕುರಿತಂತೆ ಆಕ್ಷೇಪಗಳು ಬಂದಾಗ ಅದನ್ನವರು ಈ ಮನುಷ್ಯನಂತೆ ಸಮರ್ಥಿಸಲು ಮಾತ್ರ ಹೋಗಲಿಲ್ಲ ಎಂಬುದು ಸಮಾಧಾನ)

ಇನ್ನೊಂದು, ಕಾರ್ಕಳದಲ್ಲಿ ಹೊಸತಾಗಿ ಎದ್ದು ನಿಲ್ಲಿಸಲ್ಪಟ್ಟ ಪರಶುರಾಮ ಥೀಮ್ ಪಾರ್ಕ್ ನ ಕತೆ. ವಾಸ್ತವದಲ್ಲಿ ಇದು ಥೀಮ್ ಪಾರ್ಕೋ ಇಲ್ಲಾ ಕರಾವಳಿಗರಿಗಾಗಿ ಮಾಡಿದಂತ ಶೇಮ್ ಪಾರ್ಕೋ ಕಾಲವೇ ಹೇಳಬೇಕಷ್ಟೆ. ಕರಾವಳಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದೆ ಅನಾವಶ್ಯಕವಾಗಿ ತುರುಕಲ್ಪಟ್ಟಂತಹ ಪರುಶುರಾಮನ ಅಡಿಯಾಳಾಗಿರುವಂತೆ ಇಲ್ಲಿನ ದೈವಗಳ ಚಿತ್ರಣಗಳು ಇವೆ. ಒಂದು ಬಗೆಯಲ್ಲಿ ನೋಡಿದರೆ ಅವರು ಮಾಡಿದ್ದು ಸರಿಯಾಗೇ ಇದೆ. ಇತ್ತೀಚೆಗಿನ ದಿನಗಳಲ್ಲಿ ಕರಾವಳಿಯ ಮಂದಿ ಇಲ್ಲಿನ ಪ್ರಸಿದ್ಧ ವೈದಿಕ ದೇವರುಗಳಿಗಿಂತಲೂ ದೈವಗಳ ಬಗ್ಗೆಯೇ ಹೆಚ್ಚೆಚ್ಚು ಒಲವನ್ನು ತೋರುತ್ತಿದ್ದಾರೆ. ಇನ್ನು ಕಾಂತಾರ ಚಲನಚಿತ್ರ ಬಂದ ಮೇಲಂತೂ ಕೇಳೋದೇ ಬೇಡ. ದೇವರುಗಳೆಲ್ಲ ಇಲ್ಲಿ ಎರಡನೇ ದರ್ಜೆಗಿಳಿದು ಬಿಟ್ಟು ವೈದಿಕ ಸಮುದಾಯ ಕಣ್ ಕಣ್ ಬಿಡುವಂತಾಗಿ ಹೋಗಿದೆ. ಪಂಜುರ್ಲಿಯನ್ನು ವರಾಹ ರೂಪಂ.. ಎಂದು ಎಷ್ಟೇ ವೈದಿಕ ದಶಾವತಾರಕ್ಕೆ ಕಸಿಕಟ್ಟ ಹೋದರೂ ಕೂಡ ಕತೆ, ಆಚರಣೆ ಎಲ್ಲದರಲ್ಲೂ ಭಿನ್ನವಾಗಿ ತೋರೋ ದೈವಗಳ ಇನ್ನಿಲ್ಲದ ವಿಜೃಂಭಣೆಗಳೆಲ್ಲ ಕೆಲ ವಿಪ್ರ ಸಮುದಾಯಕ್ಕೆ ತಡೆಯಲಾರದ ಪೆಟ್ಟಾಗಿ ಪರಿಣಮಿಸಿದೆಯಂತೆ! ಅಂತಹ ಸಂದರ್ಭದಲ್ಲಿ ಕರಾವಳಿಗರ ತಲೆಹೊಕ್ಕಿ ಕೂತ ಪರಶುರಾಮನ ಹೆಸರಲ್ಲೇ ದೈವಗಳನ್ನು ಆತನ ಅಡಿಯಾಳಾಗಿ ಚಿತ್ರಿಸಿ ವಿಕೃತ ಸಂತೋಷವನ್ನು ಕಾಣುವ ಇಂಥ ಐಡಿಯಾ ಯಾರಿಗೋ ಹೊಳೆದಿರಬೇಕು ಅನ್ನಿಸುತ್ತೆ ಪಾಪ.

ಇನ್ನೊಂದು ಬೆಂಗಳೂರಿನ ಕಾಲೇಜೊಂದರಲ್ಲಿ ಓಟು ಹಾಕೋ ಪ್ರಾಯದ ವಿದ್ಯಾರ್ಥಿಗಳು ನಡೆಸಿದ ಅಂಬೇಡ್ಕರ್ ಅವಹೇಳನದ ಸ್ಕಿಟ್. ಜೈನ್ ವಿ.ವಿ ಆಡಳಿತ ಮಂಡಳಿಯಲ್ಲಿ ಹೊಕ್ಕಿ ಕೂತ ಬ್ರಾಹ್ಮಣ್ಯದ ಮನಸುಗಳಿಗೆ ಇದೊಂದು ಕೊಳಕು ಅಭಿರುಚಿ ಎಂದು ಕಾಣಿಸದೇ ಇರದಿದ್ದುದು ನಿಜಕ್ಕೂ ಆಶ್ಚರ್ಯದ ಸಂಗತಿ. ಮಕ್ಕಳ ಭವಿಷ್ಯವನ್ನು ರೂಪಿಸುವ ಒಂದು ವಿದ್ಯಾ ಸಂಸ್ಥೆಯಲ್ಲಿ ದೇಶದ ಮಹಾನ್ ಚೇತನವೊಂದನ್ನು ಹೀನಾಯವಾಗಿ ಅಣಕಿಸುವ (ಅಣಕಿಸುವಾಗ ಸಿಳ್ಳೆ ಕೇಕೆಗಳು ಬೇರೆ) ನಾಟಕಕ್ಕೆ ಅನುಮತಿ ನೀಡಿದ ಮನಸುಗಳ ಹಿಂದಿರುವುದೂ ಕೂಡ ಇದೇ ಬ್ರಾಹ್ಮಣ್ಯವೇ.. ಹೌದು, ಅಂಬೇಡ್ಕರ್ ಪ್ರಶ್ನಾತೀತರೇನಲ್ಲ. ಅವರು ಕೊಲೆ, ಮೋಸ, ವಂಚನೆಗಳಂತವನ್ನು ಮಾಡಿದ್ದಲ್ಲಿ ಅಂತವಕ್ಕೆ ಅವರು ಉತ್ತರದಾಯಿಯೇ ಹೌದು. ಆದರೆ, ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಶೋಷಣೆಗೊಳಗಾದ ವರ್ಗದಿಂದ ಬಂದು ಸಾಮಾಜಿಕ ಸುಧಾರಣೆಗಾಗಿ ಹಗಲಿರುಳೂ ಶ್ರಮಿಸಿದಂತ ಜೀವಕ್ಕೆ ತಮ್ಮ ಪೂರ್ವಗ್ರಹ ಪೀಡಿತ ಮನಸ್ಸಿನಿಂದ ಇನ್ನೂ ಕೂಡ ಅವಹೇಳನಕ್ಕಿಳಿದರೆ ಮತ್ತು ಅದನ್ನು ಇಂತವುಗಳ ಮೂಲಕ ಸಾರ್ವತ್ರಿಕವಾಗಿ ಸಮರ್ಥಿಸ ಹೊರಟರೆ ಇನ್ನು ಶೋಷಿತರ ದನಿಗೆಲ್ಲಿ ಬೆಲೆಯಿದ್ದೀತು..?


ಶಂಕರ್ ಸೂರ್ನಳ್ಳಿ.

ಲೇಖಕರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page