Friday, August 16, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯಲ್ಲಿ ಮೋದಿ-ಶಾ ಯುಗ ಮುಗಿದ ಅಧ್ಯಾಯವೇ?

ಹೊಸದೆಹಲಿ: ‘ಐತಿಹಾಸಿಕ’ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಅವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗಿದೆ. ಆದರೆ ಅವರ ನಾಯಕತ್ವದಲ್ಲಿ ಬಿಜೆಪಿ ಶಕ್ತಿ ಕಳೆದುಕೊಂಡಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮೋದಿ-ಶಾ ಅವರ ಕೇಂದ್ರೀಕೃತ ನೀತಿಗಳು ಪಕ್ಷಕ್ಕೆ ಭಾರೀ ನಷ್ಟವನ್ನು ತಂದಿದೆ ಮತ್ತು ನಾಯಕರು ಪಕ್ಷದಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂದು ಕೆಲವು ಕೇಸರಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಎದುರಾದಾಗಿನಿಂದಲೂ ಚುನಾವಣಾ ಪ್ರಚಾರದ ವೇಳೆ ಉಂಟಾದ ಲೋಪದೋಷಗಳ ಬಗ್ಗೆ ಪಕ್ಷದ ನಾಯಕರು ಈಗ ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯವಾಗಿ, ಯುಪಿ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ರಾಜ್ಯಗಳ ಬಿಜೆಪಿ ನಾಯಕರು ಪಕ್ಷದ ಚುನಾವಣಾ ತಂತ್ರವಾಗಿದ್ದ ‘ಬ್ರಾಂಡ್ ಮೋದಿ’ ಮೂಲವನ್ನು ನೇರವಾಗಿ ಮತ್ತು ಪರೋಕ್ಷವಾಗಿ ದುರ್ಬಲಗೊಳಿಸುವ ನಿರ್ಣಾಯಕ ವಾದಗಳನ್ನು ಮುಂದಿಟ್ಟಿದ್ದಾರೆ.

‘ಇಂಡಿಯಾ’ ಮೈತ್ರಿಯಿಂದ ಪಕ್ಷಕ್ಕೆ ತೀವ್ರ ಪೆಟ್ಟು ಬಿದ್ದಿರುವ ಯುಪಿಯಲ್ಲಿ ಬಿಜೆಪಿ ಪತನಕ್ಕೆ ಇದೇ ವಿಚಾರವೇ ಕಾರಣ ಎನ್ನುತ್ತಿದ್ದಾರೆ ಕೇಸರಿ ಪಕ್ಷದ ಮುಖಂಡರು. ಇಂಡಿಯಾ ಬ್ಲಾಕ್‌ ದೊಡ್ಡ ಮಟ್ಟದಲ್ಲಿ ಗೆದ್ದ ನಂತರ ಪಕ್ಷದ ರಾಜ್ಯ ಮಟ್ಟದ ನಾಯಕರಲ್ಲಿ ಈ ಕುರಿತು ತಳಮಳ ಹೆಚ್ಚಾಗಿದೆ.

ಅದರಲ್ಲೂ ಮೋದಿ-ಶಾ ಜೋಡಿ ಯುಪಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿಗೆ ಸರಿಯಾದ ಸ್ವಾತಂತ್ರ್ಯ ನೀಡಲಿಲ್ಲ ಎನ್ನಲಾಗಿದೆ. ಯೋಗಿ ಬೆಳೆಯದಂತೆ ತಡೆಯಲು ಶಾ ಇಂತಹ ಪ್ರಯತ್ನಗಳನ್ನು ಮಾಡಿದ್ದು, ಯುಪಿಯಲ್ಲಿ ಬಿಜೆಪಿಗೆ ಭಾರೀ ನಷ್ಟ ತಂದಿದೆ ಎಂದು ಅವರದೇ ಪಕ್ಷದವರೇ ಹೇಳುತ್ತಿರುವುದು ಗಮನಾರ್ಹ. ರಾಜ್ಯದಲ್ಲಿ ಮೋದಿ-ಶಾ ಜೋಡಿ ಆಯ್ಕೆ ಮಾಡಿದ ಅಭ್ಯರ್ಥಿಗಳೇ ಹೆಚ್ಚು ಸೋತಿರುವುದನ್ನು ರಾಜ್ಯದ ನಾಯಕರು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಣುತ್ತಿರುವ ಅಸಮಾಧಾನ ಇತರೆಡೆಯೂ ಕಾಣತೊಡಗಿದೆ. ರಾಜಸ್ಥಾನದಲ್ಲಿ ಬಿಜೆಪಿ 2019ರಲ್ಲಿ 25 ಎಂಪಿ ಸ್ಥಾನಗಳನ್ನು ಗೆದ್ದಿತ್ತು ಆದರೆ ಈ ಬಾರಿ 14ಕ್ಕೆ ಕುಸಿದಿದೆ. ಆದರೆ, ಇಲ್ಲಿ ರಾಜ್ಯದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ದುರ್ಬಲ ನಾಯಕತ್ವವನ್ನು ಬಿಜೆಪಿ ನಾಯಕರು ಎತ್ತಿ ತೋರಿಸಿದ್ದಾರೆ. ಅಲ್ಲದೆ, ಮೋದಿ-ಶಾ ಜೋಡಿಯಿಂದ ವಸುಂಧರಾ ರಾಜೇ ದೂರವಾಗಿದ್ದರು ಎಂಬುದನ್ನು ಅವರು ನೆನಪಿಸುತ್ತಾರೆ.

2019ಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ತೀವ್ರವಾಗಿ ಕುಸಿದಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದ ತಮಗೆ ತುಂಬಾ ಅನಾನುಕೂಲವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತ್ತು ದಲಿತರ ಮತಗಳನ್ನು ಕ್ರೋಢೀಕರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಮಹಾರಾಷ್ಟ್ರದಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಫಡ್ನವೀಸ್ ರಾಜೀನಾಮೆ ನೀಡಲು ಮುಂದಾದರು. ಆದರೆ ಪಕ್ಷದ ಕೇಂದ್ರ ನಾಯಕತ್ವ ಮರುಪರಿಶೀಲಿಸುವಂತೆ ಹೇಳಿದ್ದರಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ, ಇಲ್ಲಿನ ಬಿಜೆಪಿಯ ಮಿತ್ರಪಕ್ಷಗಳು ತಮ್ಮ ಆತಂಕ ಮತ್ತು ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿವೆ. ಮತ್ತೊಂದೆಡೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರೊಂದಿಗೆ ಸಂಬಂಧ ಕಡಿದುಕೊಂಡು ಬಂದಿದ್ದ ನಾಯಕರು ಮತ್ತೆ ಹಳೆಯ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗ ಬಿಜೆಪಿಯ ಮಿತ್ರಪಕ್ಷಗಳು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿಲ್ಲ. ಅಪ್ನಾ ದಳದ (ಸೋನೆಲಾಲ್) ಒಬಿಸಿ ನಾಯಕಿ ಅನುಪ್ರಿಯಾ ಪಟೇಲ್ ಅವರು ಯುಪಿ ಸಿಎಂ ಯೋಗಿ ಅವರಿಗೆ ಪತ್ರ ಬರೆದು ದಲಿತರು ಮತ್ತು ಒಬಿಸಿಗಳಿಗೆ ಮೀಸಲಾದ ಸರ್ಕಾರಿ ಉದ್ಯೋಗಗಳನ್ನು ನಿಮ್ಮ ಮೇಲ್ವಿಚಾರಣೆಯಲ್ಲಿ ಸಾಮಾನ್ಯ ವರ್ಗದ ಅರ್ಜಿದಾರರಿಗೆ ಹಂಚಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಪಕ್ಷದ ಅಧ್ಯಕ್ಷರ ಆಯ್ಕೆ ಸಮೀಪಿಸುತ್ತಿರುವ ಈ ಕ್ಷಣದಲ್ಲಿ ಮೋದಿ ಮತ್ತೊಮ್ಮೆ ಪಕ್ಷದಲ್ಲಿ ಮೇಲುಗೈ ಸಾಧಿಸಲು ಯತ್ನಿಸಲಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ಶಿಸ್ತು, ಸಿದ್ದಾಂತಕ್ಕೆ ಬದ್ಧವಾಗಿರುವ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಕೇಸರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಬೇಸರ ಮೂಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page