Tuesday, December 9, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯಾ..? : ಕೃಷ್ಣ ಬೈರೇಗೌಡ ಟೀಕೆ

• ನಿಯಮದಂತೆ ಪ್ರಶ್ನೋತ್ತರ ಅವಧಿಗೆ ಒತ್ತಾಯ
• ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಸಹಮತ

ಬೆಳಗಾವಿ ಡಿಸೆಂಬರ್ 09 : ಆಡಳಿತ ಪಕ್ಷವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಬಿಜೆಪಿಗರ ಪಾಲಿಗೆ ಸಮಸ್ಯೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಟೀಕಿಸಿದರು.

ಮಂಗಳವಾರ ಸುವರ್ಣಸೌಧದ ವಿಧಾನಸಭೆ ಕಲಾಪದಲ್ಲಿ ಮೊದಲು ನಿಗದಿಯಂತೆ ಪ್ರಶ್ನೋತ್ತರ ಅವಧಿ ಆರಂಭವಾಗಬೇಕಿತ್ತು. ಆದರೆ, ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಶಾಸಕರಾದ ಅಶ್ವತ್ಥ ನಾರಾಯಣ ಅವರು ಪ್ರಶ್ನೋತ್ತರ ಅವಧಿಗೆ ಮುನ್ನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ನಿಲುವಳಿ ಮಂಡಿಸಿದರು.

ಈ ವೇಳೆ ವಿರೋಧ ಪಕ್ಷದ ನಾಯಕರ ವರ್ತನೆಯನ್ನು ಬಹಿರಂಗವಾಗಿ ಖಂಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯಾಗಿದೆ. ಅದೇ ಕಾರಣಕ್ಕೆ ಪ್ರಶ್ನೋತ್ತರ ಅವಧಿಗೆ ಮುನ್ನವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎನ್ನುತ್ತಿದ್ದಾರೆ. ಆದರೆ, ನಿಯಮದ ಪ್ರಕಾರ ಪ್ರಶ್ನೋತ್ತರ ಅವಧಿಗೆ ಮುನ್ನ ಯಾವುದೇ ಚರ್ಚೆ ಮಾಡಲು ಅವಕಾಶ ಇಲ್ಲ. ಪ್ರಶ್ನೋತ್ತರ ಅವಧಿಯ ನಂತರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರವೇ ಸಲಹೆ ನೀಡಿದೆ. ಆದರೂ, ಇದರಲ್ಲಿ ವಿರೋಧ ಪಕ್ಷದ ತಕರಾರು ಏಕೆ?” ಎಂದು ಟೀಕಾಪ್ರಹಾರ ನಡೆಸಿದರು.

ಈ ವೇಳೆ ಸದನದ ಈ ಹಿಂದಿನ ಇತಿಹಾಸವನ್ನೂ ಮೆಲುಕು ಹಾಕಿದ ಅವರು,” ಬಿಜೆಪಿ ನಾಯಕರಲ್ಲಿ ಸೆಲೆಕ್ಟೀವ್ ಜ್ಞಾಪಕ ಶಕ್ತಿ ಅಧಿಕವಾಗಿದೆ. ಈ ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗ ವಿಶ್ವೇಶ್ವರ ಹೆಗಡೆ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ʼಪ್ರಶ್ನೋತ್ತರದ ಅವಧಿ ವೇಳೆ ಯಾವುದೇ ವಿಚಾರಗಳ ಬಗ್ಗೆ ಚರ್ಚೆ ಬೇಡʼ ಎಂದು ಅವರೇ ಹೇಳಿದ್ದರು. ಆದರೆ, ಇಂದು ಬಿಜೆಪಿ ನಾಯಕರೇ ಈ ನಿಯಮವನ್ನು ಗಾಳಿಗೆ ತೂರುತ್ತಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಉಚ್ಛಾಟಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, “ಕೆಲವರು ಪ್ರತಿಷ್ಠೆಗಾಗಿ ಪ್ರಶ್ನೋತ್ತರ ಅವಧಿ ಮುಂದೆ ಹಾಕುವುದು ಸರಿ ಇಲ್ಲ. ಪ್ರತಿಯೊಬ್ಬ  ಶಾಸಕರಿಗೂ ಅವರವರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೇ ಮಹತ್ವದ ಪ್ರಶ್ನೆ ಇರುತ್ತೆದೆ. ನಾನೂ ಸಹ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸ್ಟಾರ್ ಗುರುತಿನ ಪ್ರಶ್ನೆ ಕೇಳಿದ್ದೇನೆ. ಇಂತಹ ಸಂದರ್ಭದಲ್ಲಿ ಪ್ರಶ್ನೋತ್ತರ ಅವಧಿಯನ್ನು ಮುಂದೂಡುವುದು ಸರಿಯಲ್ಲ. ಪ್ರಶ್ನೋತ್ತರ ಅವಧಿಯ ನಂತರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ” ಎಂದು ಸಲಹೆ ನೀಡಿದರು.

ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ ಮಾತನಾಡಿ, “ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ನಮ್ಮ ಸಹಮತ ಇದೆ. ಈ ಚರ್ಚೆಯನ್ನು ಈಗಾಗಲೇ ಇಂದಿನ ಅಜೆಂಡಾಗೂ ಸೇರಿಸಿಯಾಗಿದೆ. ಪ್ರಶ್ನೋತ್ತರ ಅವಧಿಗೆ ಮುನ್ನ ಈ ಚರ್ಚೆ ಆರಂಭಿಸಲು ನಮ್ಮದೇನು ತಕರಾರು ಇಲ್ಲ. ಆ ನಿರ್ಧಾರ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟದ್ದು” ಎಂದು ವಿಪಕ್ಷ ನಾಯಕರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದರು.

ಅಂತಿಮವಾಗಿ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಪ್ರಶ್ನೋತ್ತರ ಅವಧಿಗೆ ಮನ್ನಣೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page