Friday, April 11, 2025

ಸತ್ಯ | ನ್ಯಾಯ |ಧರ್ಮ

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.ಪದ್ಮಪಾಣಿ ಲಲಿತಕಲಾ ಅಕಾಡೆಮಿಯು ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೋವಿಂದಸ್ವಾಮಿ ಗುಂಡಾಪುರ ಅವರ ಗುಡಿಸಲಜ್ಯೋತಿ- ಪದಪಯಣ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಕುವೆಂಪು, ಅಂಬೇಡ್ಕರ್‌ ಅವರಂಥವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದೇವೆ.’ ನಾವು ಬಸವ ಜಯಂತಿ ಆಚರಿಸುತ್ತೇವೆ. ಆದರೆ ಇತರರು ಅಂಬೇಡ್ಕರ್‌ ಜಯಂತಿ ಆಚರಿಸುತ್ತಾರಾ?’ ಎಂದು ಕೇಳುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬುದ್ಧ-ಬಸವ- ಅಂಬೇಡ್ಕರ್‌ ಸೇರಿಸಿ ಜಯಂತಿ ಮಾಡಿ ಎಂದು ನೇರವಾಗಿ ಹೇಳಿದ್ದೇನೆ. ಈ ರೀತಿಯಾದಾಗ ಮಾತ್ರ ಸಾಂಸ್ಕೃತಿಕ ನಾಯಕರು ಎಲ್ಲರನ್ನು ಒಳಗೊಳ್ಳುತ್ತಾರೆ. ಅವರ ಶಕ್ತಿಯೂ ವೃದ್ಧಿಸುತ್ತದೆ ಎಂದರು.ಸಿದ್ದಲಿಂಗಯ್ಯ ಅವರ ಕವನಗಳನ್ನು ಈಗಿನ ಗೋವಿಂದಸ್ವಾಮಿ ಗುಂಡಾಪುರ ಅವರ ಕವನಗಳನ್ನು ಗಮನಿಸಿದಾಗ ದಲಿತರ ಕಾವ್ಯದ ನಡೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹನಸೋಗೆ ಸೋಮಶೇಖರ್‌, ಸೋಸಲೆ ಗಂಗಾಧರ್‌ ಅವರು ತಮ್ಮ ಭಿನ್ನನಡೆಯಿಂದ ದಲಿತ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ್ದಾರೆ ಎನ್ನಬಹುದು. ನಾಲ್ಕು ಗೋಡೆಗಳ ನಡುವೆ ಹೇಳುವ ಕವಿತೆಗಳಿಗಿಂತ ಸಮಾಜಕ್ಕೆ ಪಾಠ ಹೇಳುವ ಕವಿತೆಗಳು ಹೊರಬರಲು ಬಿವಿಎಸ್‌ ಪ್ರಭಾವ ಕಾರಣ ಎನ್ನಬಹುದು ಎಂದರು.

ಗುಡಿಸಲಜ್ಯೋತಿ ಕೃತಿ ಬಿಡುಗಡೆ ಮುನ್ನವೇ ಇಲ್ಲಿನ ಕವಿತೆಗಳು ಆಸ್ಫೋಟವಾಗಿವೆ. ಗುಡಿಸಲ ಜ್ಯೋತಿ ಕವನವಂತೂ ಮನೆ ಮಾತಾಗಿದೆ. ಮೊದಲು ಗೋವಿಂದಸ್ವಾಮಿ ಅವರ ಕವನ ಸಂಕಲನ ನೋಡಿದಾಗ ಕೆಸರುಗದ್ದೆಯಲ್ಲಿ ಓಡಿದ ಅನುಭವವಾಗಿತ್ತು. ಆದರೆ ಗುಡಿಸಲ ಜ್ಯೋತಿಯಲ್ಲಿ ಸೇರ್ಪಡೆಯಾಗಿರುವ ಹೆಚ್ಚುವರಿ ಕವನಗಳನ್ನು ನೋಡಿದಾಗ ನಾನೇ ಕೆಸರಿನ ನಂತರ ಹುಲ್ಲಿನ ನಡುವೆ ಸಿಕ್ಕಿಕೊಂಡಂತೆ ಆಗಿದೆ. ಇಲ್ಲಿನ ಕವಿತೆಗಳು ಹೆಚ್ಚು ಗಂಭೀರ ಹಾಗೂ ಸಶಕ್ತವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ದೇಶದ ಪರಂಪರೆಯನ್ನು ಒಳಗೊಳ್ಳುವ, ಸಮಕಾಲೀನ ಹಾಗೂ ಹಿಂದಿನ ತಲೆಮಾರಿನ ಇರುವಿಕೆ ಕಂಡು ಬರುತ್ತದೆ. ಹೀಗಾಗಿ ಇವು ಜನಪ್ರಿಯ ಹಾಗೂ ಗಂಭೀರ ಕವಿತೆಗಳ ನಡುವೆ ಬರುತ್ತವೆ. ಇದರಿಂದ ಕಾವ್ಯಕ್ಕೂ ಶಕ್ತಿ, ಕವಿಗೂ ಮೆರಗು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಾಹು ಮಹಾರಾಜ್‌, ನಾರಾಯಣ ಗುರು, ಟಿಪ್ಪು ಸುಲ್ತಾನ್‌, ಕಾನ್ಸಿರಾಂ, ಸಾವಿತ್ರಿ ಬಾಫುಲೆ, ಪೆರಿಯಾರ್‌, ಡಾ.ಬಿ.ಆರ್. ಅಂಬೇಡ್ಕರ್‌, ಬುದ್ಧ, ಬಸವಣ್ಣ, ಮಹದೇಶ್ವರ ಮೊದಲಾದ ದಾರ್ಶನಿಕರ ಬಗ್ಗೆ ಇಲ್ಲಿ ಕವನಗಳಿವೆ. ಪ್ರಸ್ತುತ ಸಮಾಜಕ್ಕೆ ಈ ಎಲ್ಲಾ ಮಹನೀಯರ ಆದರ್ಶಗಳು ಬೇಕಾಗಿವೆ ಎಂದರು.

ಧ್ವನಿಸುರಳಿಯನ್ನು ಪ್ರಗತಿಪರ ಚಿಂತಕ ಬಸವರಾಜ ದೇವನೂರು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಮಹದೇವ ಶಂಕನಪುರ ಮುಖ್ಯ ಅತಿಥಿಯಾಗಿದ್ದರು. ಗೋವಿಂದಸ್ವಾಮಿ ಗುಂಡಾಪುರ ಇದ್ದರು. ಎಂ. ಸಿದ್ದರಾಜು ಸ್ವಾಗತಿಸಿದರು. ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಸದಸ್ಯರು ಗೀತಗಾಯನ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ಗಾಯನ ಕ್ಷೇತ್ರದ ಸಾಧಕರಾದ ಜಯಶಂಕರ್‌ ಮೇಸ್ತ್ರಿ, ನಾರಾಯಣಸ್ವಾಮಿ, ರಮೇಶ್‌, ಸಿದ್ದೇಶ್‌, ನವೀನ್‌, ಕೆ.ಎಸ್‌. ಭವತಾರಿಣಿ, ನಾಗೇಶ್‌ ಲಕ್ಷ್ಮೀರಾಮ್, ಅಮ್ಮ ರಾಮಚಂದ್ರ, ಶೇಷಣ್ಣ, ಗಾನಸುಮಾ ಪಟ್ಟಸೋಮನಹಳ್ಳಿ, ಮರಿಸ್ವಾಮಿ ಅವರಿಗೆ ಪದಪಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page