ಅಲಹಾಬಾದ್: ವಕೀಲರಿಂದ ಲಂಚದ ರೂಪದಲ್ಲಿ ಪೇಟಿಎಂನಲ್ಲಿ ಹಣ ಸಂಗ್ರಹಿಸುತ್ತಿದ್ದ ಜಮಾದರ್ ಓರ್ವರನ್ನು ಅಲಹಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ.
ನ್ಯಾಯಾಲಯದಲ್ಲಿ ಜಮಾದಾರ್(Bundle Lifter) ಆಗಿರುವ ರಾಜೆಂದ್ರ ಕುಮಾರ್ ಅವರು ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ / ಕ್ಯೂಆರ್ ಕೋಡ್ಅನ್ನು ಬಳಸಿ ಹಣ ಸಂಗ್ರಹಿಸಿಕೊಳ್ಳುತ್ತಿರುವ ಬಗ್ಗೆ ನ್ಯಾ.ಅಜಿತ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿಗೆ ಪತ್ರದ ಮುಖೇನ ವಿಷಯ ತಿಳಿಸಿದ್ದಾರೆ ಎಂದು ರಿಜಿಸ್ಟ್ರಾರ್ ಜನರಲ್ ಆಶೀಷ್ ಗರ್ಗ್ ಹೇಳಿದ್ದಾರೆ.
ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಜೇಶ್ ಬಿಂದಾಲ್ ಅವರು ಈ ಕುರಿತು ಕೂಡಲೆ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದು, ಜಮಾದಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರದಂದು ಅಮಾನತು ಗೊಳಿಸಿದೆ.
ಅಮಾನತಿನ ವೇಳೆ ರಾಜೇಂದ್ರ ಕುಮಾರ್ ಅವರನ್ನು ನಜರತ್ ವಿಭಾಗಕ್ಕೆ ಹಾಕಲಾಗಿದ್ದು, ರಿಜಿಸ್ಟ್ರಾರ್ ಅನುಮತಿ ಪಡೆಯದೇ ಹೊರಹೋಗದಂಯೆ ಆದೇಶ ಮಾಡಲಾಗಿದೆ. ಅಲ್ಲದೇ ಅವರು ಯಾವುದೇ ಉದ್ಯೋಗ, ವ್ಯವಹಾರ, ವೃತ್ತಿಯಲ್ಲಿ ತೊಡಗಿಕೊಂಡಿಲ್ಲ ಎಂಬುದರ ಕುರಿತು ದಾಖಲೆಗಳು ಸಲ್ಲಿಸಿದ ಬಳಿಕ ರಾಜೇಂದ್ರ ಕುಮಾರ್ ಅವರಿಗೆ ಜೀವನ ಭತ್ಯೆ ಪಾವತಿಸಲಾಗುವುದು ಎಂದು ಅಮಾನತು ಮಾಡಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.