Home ದೇಶ ಭಾರತೀಯರೆಲ್ಲರಲ್ಲೂ ‘ಮಹಾದೇವನ ಡಿಎನ್‌ಎ’ ಇದೆ: ಜಾಮಿಯಾ ಉಪಕುಲಪತಿ ಮಜಹರ್ ಆಸಿಫ್ ಹೇಳಿಕೆಗೆ ಬಿಜೆಪಿ ಬೆಂಬಲ

ಭಾರತೀಯರೆಲ್ಲರಲ್ಲೂ ‘ಮಹಾದೇವನ ಡಿಎನ್‌ಎ’ ಇದೆ: ಜಾಮಿಯಾ ಉಪಕುಲಪತಿ ಮಜಹರ್ ಆಸಿಫ್ ಹೇಳಿಕೆಗೆ ಬಿಜೆಪಿ ಬೆಂಬಲ

0

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪಕುಲಪತಿ ಮಜಹರ್ ಆಸಿಫ್ ಅವರು “ಭಾರತೀಯರೆಲ್ಲರೂ ಮಹಾದೇವನ ಡಿಎನ್‌ಎ ಹಂಚಿಕೊಂಡಿದ್ದಾರೆ” ಎಂದು ನೀಡಿರುವ ಹೇಳಿಕೆಯನ್ನು ಬಿಜೆಪಿ ಗುರುವಾರ ಬೆಂಬಲಿಸಿದೆ. ಈ ಹೇಳಿಕೆಯ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು “ನಾಗರಿಕತೆಯ ವಿಚಾರಗಳ ಕುರಿತು ಕುಸಿಯುತ್ತಿರುವ ಸಹಿಷ್ಣುತೆಯನ್ನು” ಪ್ರತಿಫಲಿಸುತ್ತವೆ ಎಂದು ಪಕ್ಷ ಹೇಳಿದೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್ (X)ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆಸಿಫ್ ಅವರ ಹೇಳಿಕೆಯನ್ನು ಅಕ್ಷರಶಃ ಅರ್ಥದಲ್ಲಿ ವಿಶ್ಲೇಷಿಸಿ ಅದನ್ನು “ಅವೈಜ್ಞಾನಿಕ” ಎಂದು ತಳ್ಳಿಹಾಕುವುದು ಅದರ ವಿಶಾಲವಾದ ಅರ್ಥವನ್ನು ಕಳೆದುಕೊಂಡಂತೆ ಎಂದು ತಿಳಿಸಿದ್ದಾರೆ. ಭಾರತೀಯ ಸಂದರ್ಭದಲ್ಲಿ ಇಂತಹ ಅಭಿವ್ಯಕ್ತಿಗಳು “ಪ್ರಯೋಗಾಲಯದ” ಪ್ರತಿಪಾದನೆಗಳಿಗಿಂತ ಹೆಚ್ಚಾಗಿ “ನಾಗರಿಕತೆಯ ರೂಪಕಗಳಾಗಿವೆ” (civilisational metaphors) ಎಂದು ಅವರು ಪ್ರತಿಪಾದಿಸಿದ್ದಾರೆ. “ಇವು ಸಾವಿರಾರು ವರ್ಷಗಳಿಂದ ರೂಪಿತವಾಗಿರುವ ಹಂಚಿಕೆಯ ಪೂರ್ವಜರು, ಸಾಂಸ್ಕೃತಿಕ ನಿರಂತರತೆ ಮತ್ತು ಸಾಮೂಹಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಮಾಳವಿಯಾ ಹೇಳಿದ್ದಾರೆ.

ಆರ್‌ಎಸ್‌ಎಸ್ ಆಯೋಜಿಸಿದ್ದ ಯುವ ಕುಂಭ ಕಾರ್ಯಕ್ರಮದಲ್ಲಿ ಆಸಿಫ್ ಅವರು ನೀಡಿದ್ದ ಈ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆಸಿಫ್ ಅವರು, “ಭಾರತೀಯರೆಲ್ಲರ ಡಿಎನ್‌ಎ ಭಗವಾನ್ ಮಹಾದೇವನಿಗೆ ಸಂಬಂಧಿಸಿದೆ” ಎಂದು ಹೇಳಿದ್ದರು. ವಿಡಿಯೋದಲ್ಲಿ ಅವರು, “ಇಲ್ಲಿ ಕುಳಿತಿರುವ ಪ್ರತಿಯೊಬ್ಬರ ಮಾತೃಭಾಷೆ, ಬೆಳೆದು ಬಂದ ರೀತಿ ಅಥವಾ ಸಂಸ್ಕೃತಿ ಒಂದೇ ಆಗಿರಲಿಕ್ಕಿಲ್ಲ. ಭೌಗೋಳಿಕವಾಗಿ ಅವರು ಒಂದೇ ಪ್ರದೇಶದವರಲ್ಲದಿರಬಹುದು ಮತ್ತು ಅವರ ಧರ್ಮಗಳು ಸಹ ಬೇರೆಯಾಗಿರಬಹುದು. ಆದರೂ ನಾವೆಲ್ಲರೂ ಭಾರತೀಯರಾಗಿದ್ದೇವೆ. ನಮ್ಮ ಡಿಎನ್‌ಎ ಒಳಗೆ ಮಹಾದೇವನ ಡಿಎನ್‌ಎ ಇರುವುದರಿಂದಲೇ ನಾವು ಭಾರತೀಯರಾಗಿದ್ದೇವೆ” ಎಂದು ಹೇಳಿರುವುದು ಕಂಡುಬಂದಿದೆ.

ಆಸಿಫ್ ಅವರ ಈ ಮಾತುಗಳು ವಿಭಜಕವಲ್ಲ, ಬದಲಾಗಿ ಏಕತೆಯನ್ನು ಪ್ರತಿಪಾದಿಸುವಂತಿವೆ ಎಂದು ಮಾಳವಿಯಾ ಹೇಳಿದ್ದಾರೆ. ಭಾರತೀಯ ಮುಸ್ಲಿಮರು ಈ ದೇಶದ ಸಂಯೋಜಿತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಹಿಂದೂಗಳಂತೆಯೇ ಅದೇ ಭೂಮಿ ಮತ್ತು ವಂಶಾವಳಿಯಿಂದ ಬಂದವರು ಎಂದು ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ವಾಹಿದುದ್ದೀನ್ ಖಾನ್ ಅವರಂತಹ ನಾಯಕರು ಪ್ರತಿಪಾದಿಸಿದ್ದರು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಅಲ್ಲದೆ, ಮುಹಮ್ಮದ್ ಇಕ್ಬಾಲ್ ಅವರು ಭಗವಾನ್ ರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ವರ್ಣಿಸುವ ಮೂಲಕ ಭಾರತದ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಒಪ್ಪಿಕೊಂಡಿದ್ದರು ಎಂದು ಮಾಳವಿಯಾ ಸ್ಮರಿಸಿದ್ದಾರೆ.

You cannot copy content of this page

Exit mobile version