Sunday, June 8, 2025

ಸತ್ಯ | ನ್ಯಾಯ |ಧರ್ಮ

ಫೋಟೋ ಸೆಷನ್ ಮಾಡಿಸಿಕೊಂಡಿದ್ದು ರಾಜಕಾರಣಿಗಳು, ಅವರ ಪರಿವಾರ; ಆದರೆ, ಶಿಕ್ಷೆ ಮಾತ್ರ ಬೆಂಗಳೂರು ಪೊಲೀಸ್ ಕಮಿಷನರ್’ಗೆ: ಸರ್ಕಾರದ ವಿರುದ್ಧ ಜೆಡಿಎಸ್‌ ಚಾಟಿ

ಬೆಂಗಳೂರು: RCB ಕಪ್‌ ಗೆದ್ದ ಸಂಭ್ರಮದ ಆಚರಣೆ ಸಮಯದಲ್ಲಿ ನಡೆದ ದುರಂತದ ಕುರಿತಂತೆ ರಾಜಕೀಯ ಕೆಸರು ಎರಚಾಟ ಮೇರೆ ಮೀರಿದ್ದು, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಒಬ್ಬರ ನಂತರ ಒಬ್ಬರಂತೆ ಸರ್ಕಾರ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ ದಯಾನಂದ ಅವರ ಅಮಾನತು ಈಗ ಈಗ ದೊಡ್ಡ ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟಿದೆ. ಈ ಕುರಿತು ಹೇಳಿಕೆ ನೀಡಿರುವ ಜೆಡಿಎಸ್‌ “ಕೋತಿ ಮೊಸರು ತಿಂದು ಮೇಕೆ ಬಾಯಿಗೆ ವರೆಸಿತು” ಇಂತಹ ಘನ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ.‌ ಫೋಟೋ ಸೆಷನ್ ನಡೆಸಿ ಸಂಭ್ರಮಿಸಿದ್ದು ಸಿಎಂ‌, ಸಿಎಂ ಮೊಮ್ಮಕ್ಕಳು, ಡಿಸಿಎಂ, ಸಚಿವರು, ಅವರ ಮಕ್ಕಳು, ಆಡಳಿತ ಪಕ್ಷದ ಶಾಸಕರು, ಅವರ ಕುಟುಂಬದವರು ಹಾಗೂ ಅಧಿಕಾರಿಗಳು. ಆದರೆ, ಶಿಕ್ಷೆ ಮಾತ್ರ ಬೆಂಗಳೂರು ಪೊಲೀಸ್ ಕಮಿಷನರ್’ಗೆ. ಸರ್ಕಾರ ಮಾಡಿರುವ ಅಚಾತುರ್ಯಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ ! ಇದು ಯಾವ ನ್ಯಾಯ ?” ಎಂದು ಪಕ್ಷವು ಕೇಳಿದೆ.

ಮುಂದುವರೆದು “ದುರಂತಕ್ಕೆ ಪ್ರಮುಖ ಕಾರಣರಾದ ಬೆಂಗಳೂರು ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಹಾಕುವ ಮೂಲಕ ಸಿಎಂ‌ ಸಿದ್ಧರಾಮಯ್ಯ ನಿಮ್ಮ ನೈತಿಕತೆಯನ್ನು ಉಳಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮಂತಹ ಕಟುಕರು, ಪಾಪ ಪ್ರಜ್ಞೆ ಇಲ್ಲದವರು ರಾಜಕಾರಣಕ್ಕೆ ಕಪ್ಪು ಚುಕ್ಕೆ” ಎಂದು ಕುಟುಕಿದೆ.

ಈ ಕುರಿತು ನಿಖಿಲ್‌ ಕುಮಾರಸ್ವಾಮಿ ಕೂಡಾ ಹೇಳಿಕೆ ಕೊಟ್ಟಿದ್ದು ಅವರ ಮೇನ್‌ ಟಾರ್ಗೆಟ್‌ ಡಿಕೆ ಶಿವಕುಮಾರ್‌ ಆಗಿದ್ದರೆ, ಜೊತೆಗೆ ಗೃಹ ಸಚಿವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ, “ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ!” ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ವಿಧಾನಸೌಧದ ಕಾರ್ಯಕ್ರಮ ನಾವೂ ಮಾಡಿದ್ದು, ಚಿನ್ನಸ್ವಾಮಿಯಲ್ಲಿ KSCA ಹಾಗೂ RCB ಅವರು ಮಾಡಿದ್ದರು ಅದು ನಮ್ಮ ಗಮನಕ್ಕೆ ಇರಲಿಲ್ಲ ಎಂದು ಹೇಳಿರುವುದು “ಹಸಿ ಸುಳ್ಳು”.

KSCA ನೇ DPAR ಕಾಯರ್ದರ್ಶಿಗೆ ಬರೆದ ಪತ್ರದಲ್ಲಿ ವಿಧಾನಸೌಧ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಸನ್ಮಾನ ಮಾಡುವಂತೆ ಕೋರಿ ಬರೆದ ಪತ್ರ ಇಲ್ಲಿದೆ. ಆದರೆ ಸರ್ಕಾರ ಮಾತ್ರ ಹಸಿಸುಳ್ಳು ಹೇಳಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಈ ಕಾರ್ಯಕ್ರಮವನ್ನು ಮುಂದೂಡಲು ಕೋರಿದರು ಕೂಡ ನೀವು ಅವರ ಮಾತಿಗೆ ಬೆಲೆ ಕೊಡದೇ ಕಾರ್ಯಕ್ರಮ ಆಯೋಜನೆ ಮಾಡಿ 11 ಜನರ ಬಲಿದಾನಕ್ಕೆ ಕಾರಣರಾಗಿದ್ದೀರಿ. ಗೃಹ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳೇ (ರೀಲ್ಸ್ ಮಿನಿಸ್ಟರ್)ನೈತಿಕೆ ಹೊಣೆಹೊತ್ತು ರಾಜೀನಾಮೆ ನೀಡಿ, ನೆಲದ ಕಾನೂನಿಗೆ ಗೌರವ ನೀಡಲು ಆಗ್ರಹಿಸುತ್ತೇನೆ” ಎಂದಿದ್ದಾರೆ

ಸಾಧ್ಯವಿರುವ ಕಡೆಯೆಲ್ಲ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಟಾರ್ಗೆಟ್‌ ಮಾಡುತ್ತಿರುವ ಜೆಡಿಎಸ್‌ ಈ ಪ್ರಕರಣವನ್ನು ಪೂರ್ಣಮಟ್ಟದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಒಂದರ ಹಿಂದೆ ಒಂದರಂತೆ ಟ್ವೀಟ್‌ ಮಾಡತೊಡಗಿದೆ.

ಈ ಕುರಿತು ಡಿಕೆ ಶಿವಕುಮಾರ್‌ ಅವರು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page