ಕೊನೆಗೂ ತಿಹಾರ್ ಜೈಲಿನಿಂದ ಜೆಎನ್‍ಯು ವಿದ್ಯಾರ್ಥಿ ನಾಯಕರ ಬಿಡುಗಡೆ

ದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿ ಸಂಘದ ನಾಯಕರು ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಭಾನುವಾರ ರಾತ್ರಿ 14 ಮಂದಿ ವಿದ್ಯಾರ್ಥಿ ನಾಯಕರು ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಕ್ಯಾಂಪಸ್‌ನಲ್ಲಿನ ಜಾತಿ ತಾರತಮ್ಯವನ್ನು ತೊಡೆದುಹಾಕಬೇಕು ಮತ್ತು ತಮ್ಮ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಜೆಎನ್‍ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಿದ್ಯಾರ್ಥಿ ನಾಯಕರ ಮೇಲೆ ಬಲಪ್ರಯೋಗ ಮಾಡಿದ್ದಲ್ಲದೆ, ಅವರನ್ನು ತಿಹಾರ್ ಜೈಲಿಗೆ ಅಟ್ಟಲಾಗಿತ್ತು.

ಈ ತಿಂಗಳ 26ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಒಟ್ಟು 51 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ 37 ಮಂದಿಯನ್ನು ಪೊಲೀಸರು ಮೊದಲೇ ಬಿಡುಗಡೆ ಮಾಡಿದ್ದರು. ಆದರೆ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅದಿತಿ ಮಿಶ್ರಾ (ಅಧ್ಯಕ್ಷೆ), ಕೆ. ಗೋಪಿಕಾ ಬಾಬು (ಉಪಾಧ್ಯಕ್ಷೆ), ಡ್ಯಾನಿಶ್ ಅಲಿ (ಜಂಟಿ ಕಾರ್ಯದರ್ಶಿ) ಸೇರಿದಂತೆ 14 ಮಂದಿ ಪ್ರಮುಖ ನಾಯಕರನ್ನು ಜೈಲಿನಲ್ಲಿ ಇರಿಸಲಾಗಿತ್ತು.

ಈ ನಾಯಕರಿಗೆ ಶುಕ್ರವಾರವೇ ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೂ ಜೈಲು ಅಧಿಕಾರಿಗಳು ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಂತಿಮವಾಗಿ ಭಾನುವಾರ ರಾತ್ರಿ ಇವರೆಲ್ಲರೂ ಜೈಲಿನಿಂದ ಬಿಡುಗಡೆಯಾಗಿದ್ದು, ವಿದ್ಯಾರ್ಥಿ ಸಮೂಹ ಅವರನ್ನು ಸ್ವಾಗತಿಸಿದೆ.

Related Articles

ಇತ್ತೀಚಿನ ಸುದ್ದಿಗಳು