Wednesday, June 26, 2024

ಸತ್ಯ | ನ್ಯಾಯ |ಧರ್ಮ

ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತರಿಗೆ ಸ್ವಾರ್ಥ ರಾಜಕಾರಣಿಗಳ ಬಗ್ಗೆ ಎಚ್ಚರ ಅಗತ್ಯ

ಪತ್ರಕರ್ತರಿಗೆ ಕೊಡುವ ಉಡುಗೊರೆಗಳನ್ನು ಕುರಿತಂತೆ ಸಾರ್ವತ್ರಿಕವಾಗಿ ಅಂಗೀಕಾರವಾಗಬಹುದಾದ ನೀತಿಸಂಹಿತೆಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳೂ ಅನುಸರಿಸುವಂತಾಗುವುದು ಸಾಧ್ಯವಿದೆಯೇ?  ಎಂಬ ಪ್ರಶ್ನೆ ಹಿರಿಯ ಪತ್ರಕರ್ತರಾದ ಸಿ.ಜಿ.ಮಂಜುಳಾ ಅವರದು. ʼದೀಪಾವಳಿ ಭಕ್ಷೀಸು ಹಗರಣʼ ಬಯಲಾದ ನಂತರ ಮಾಧ್ಯಮ ಭ್ರಷ್ಟಾಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನು ಓದುಗರ ಮುಂದಿಡುವ ಪ್ರಯತ್ನವನ್ನು ಪೀಪಲ್‌ ಮೀಡಿಯಾ ಮಾಡುತ್ತಿದೆ…

ಹೊಸ ವರ್ಷ ಅಥವಾ ದೀಪಾವಳಿ ಸಂದರ್ಭಗಳಲ್ಲಿ ಪತ್ರಿಕಾ ಕಚೇರಿಗಳಿಗೆ ಉಡುಗೊರೆಗಳ ಪೊಟ್ಟಣಗಳು ಬರುವುದು ಮಾಮೂಲು. ಸರ್ಕಾರದ ವಿವಿಧ ಕಾರ್ಯಾಲಯಗಳು ಅಥವಾ ಕಾರ್ಪೊರೇಟ್ ಕಚೇರಿಗಳಿಂದ ಬರುವ ಇಂತಹ  ಉಡುಗೊರೆಗಳಲ್ಲಿ ಸಿಹಿ ತಿಂಡಿ, ಒಣಹಣ್ಣು, ಕೇಕ್ ಅಥವಾ  ಡೈರಿ, ಪೆನ್ನು ಮುಂತಾದ ವೃತ್ತಿಗೆ ಸಂಬಂಧಿಸಿದ ಸ್ಟೇಷನರಿ ವಸ್ತುಗಳು ಇರುತ್ತಿತ್ತು. ಆದರೆ ಲಕ್ಷಗಟ್ಟಲೆ ನೋಟುಗಳ ಕಂತೆ ಸಿಹಿತಿಂಡಿ ಬಾಕ್ಸ್ ಗಳಲ್ಲಿತ್ತು ಎಂಬುದು  ಗಾಬರಿ ಬೀಳಿಸುವ ವಿಚಾರ. ನೇರವಾಗಿ ಹಣ ನೀಡಿ ಪತ್ರಕರ್ತರ ಸಂವೇದನೆಯನ್ನೇ ತಮ್ಮೆಡೆಗೆ ಸೆಳೆದುಕೊಳ್ಳುವಂತಹ ಆಮಿಷವಿದು ಎಂಬುದರಲ್ಲಿ ಎರಡು ಮಾತಿಲ್ಲ.  ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ವಿರೋಧ ಪಕ್ಷದ ರೀತಿ, ಆಡಳಿತದ ಕಾವಲು ಕಾಯುವಂತಹ ಕೆಲಸ ಮಾಡಬೇಕು ಎಂಬುದು ಪತ್ರಕರ್ತರ ಕುರಿತಾಗಿ ಇರುವ ನಿರೀಕ್ಷೆ. ಸರ್ಕಾರದ ನೀತಿ ಹಾಗೂ ಆಡಳಿತ ವೈಖರಿಗಳ ವರದಿ ಮಾಡಬೇಕಾದ ಪತ್ರಕರ್ತರು ಅಧಿಕಾರ ಕೇಂದ್ರಗಳ ಜೊತೆಗೆ ವೃತ್ತಿಪರ ಸಂಬಂಧದ ಹೊರತಾಗಿ ವೈಯಕ್ತಿಕ ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ವಸ್ತುನಿಷ್ಠತೆ ಮತ್ತು ನಿಖರತೆ ವೃತ್ತಿಪರ ಪತ್ರಕರ್ತರ ಮೂಲಧರ್ಮ. ಈ ಮೌಲ್ಯಗಳನ್ನು ಅನುಸರಿಸುವುದು ಹಣ ಸ್ವೀಕರಿಸಿದ ಪತ್ರಕರ್ತರಿಂದ ಸಾಧ್ಯವಾಗುತ್ತದೆಯೇ?  ವ್ಯಕ್ತಿ ನಿಷ್ಠೆ, ಪೂರ್ವಗ್ರಹಗಳಿಗೆ ಹೊರತಾದ ವಸ್ತುನಿಷ್ಠ ವರದಿಗಳ ನಿರೀಕ್ಷೆ ಸಾಕಾರವಾಗುವುದು ಸಾಧ್ಯವೇ?  ‘‘ತುರ್ತು ಪರಿಸ್ಥಿತಿ ಕಾಲದಲ್ಲಿ ಬಾಗಿ ಎಂದರೆ ತೆವಳಿದರು’, ‘ಪ್ರೆಸ್ಟಿಟ್ಯೂಟ್ಸ್’ ಎಂಬೆಲ್ಲಾ ನಿಂದನಾ ನುಡಿಗಳಲ್ಲಿ ಪತ್ರಕರ್ತರ ಕುರಿತಾಗಿ ರಾಜಕಾರಣಿಗಳು ಷರಾ ಬರೆದಾಗಿದೆ. ಹಾಗೆಯೇ ಸ್ವಾರ್ಥ ರಾಜಕಾರಣಕ್ಕಾಗಿ ರಾಜಕಾರಣಿಗಳು ನಡೆಸುವ ಪತ್ರಕರ್ತರ ಓಲೈಕೆಯ ಬಗೆಗೂ ಪತ್ರಕರ್ತರು ಎಚ್ಚರ ವಹಿಸಬೇಕಾದುದು ಮುಖ್ಯ.  ಹಲವು ಬಗೆಗಳ ನಿರ್ಬಂಧಗಳನ್ನು ಎದುರಿಸುತ್ತಿರುವಂತಹ ಹಲವು ಪತ್ರಕರ್ತರೂ ನಮ್ಮ ಜೊತೆಗಿರುವಂತಹ ಸದ್ಯದ ವಾತಾವರಣದಲ್ಲಿ ಸಿಹಿ ಜೊತೆಗೆ ಹಣ ಹಂಚಿಕೆಯ ಕರಾಳ ವಿದ್ಯಮಾನ ಪತ್ರಿಕೋದ್ಯಮ ವೃತ್ತಿಯ ಘನತೆಯನ್ನು ಪಾತಾಳಕ್ಕೆ ತಳ್ಳುವಂತಹದ್ದು. ಮಾಧ್ಯಮ ಮೌಲ್ಯಗಳು ಅಧಃ ಪತನಕ್ಕೆ ಸರಿಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ , ‘ಉಡುಗೊರೆ’ಗಳನ್ನು ಕುರಿತಂತೆ ಸಾರ್ವತ್ರಿಕವಾಗಿ ಅಂಗೀಕಾರವಾಗಬಹುದಾದ ನೀತಿಸಂಹಿತೆಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳೂ ಅನುಸರಿಸುವಂತಾಗುವುದು ಸಾಧ್ಯವಿದೆಯೇ? 

ಇದನ್ನೂ ಓದಿ: ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತ ಸಮುದಾಯಕ್ಕೇ ಕೆಟ್ಟ ಹೆಸರು ಬರುವಂತಾಗಬಾರದು

Related Articles

ಇತ್ತೀಚಿನ ಸುದ್ದಿಗಳು