Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕಾದಲವೇಣಿ ಎಂಬ ನೆಲಗರ್ಭದೊಳು ಕಳುವಾದ
“ಬಾಂದರವಿ” ಎಂಬೋ ಜೀವಚಿಲುಮೆ…

ಕೋಲಾರದ ಅವಿಭಜಿತ ಜಿಲ್ಲೆಯ ಗೌರಿಬಿದನೂರು ತಾಲೂಕಿನ “ಕಾದಲವೇಣಿ” ಎಂಬ ಗ್ರಾಮದಲ್ಲಿ ಮೂಲತಃ ಮಾದಿಗ ಸಮುದಾಯ ನಡೆಸಿ ಕೊಡುವ ಆಚರಣೆ. ನೂರ ಐವತ್ತಕ್ಕೂ ಹೆಚ್ಚಿನ ಮನೆಗಳಿರುವ ಸಣ್ಣ ಗ್ರಾಮ. ಇಲ್ಲಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ನಡೆಯುವ ಕಾದಲವೇಣಿ ಮಾರಮ್ಮನ ಜಾತ್ರೆ ತುಂಬಾ ಪ್ರಸಿದ್ದ. ಈ ಜಾತ್ರೆ ನಡಿಯೋದಕ್ಕೆ ಮಾರೆಮ್ಮನ ಕುರಿತ ಸಣ್ಣ ಜನಪದ ಕತೆಯೊಂದು ಬೆಸೆದುಕೊಂಡಿದೆ.

“ಬ್ರಾಹ್ಮಣರ ಹುಡುಗಿಯಾದ ಮಾರೆಮ್ಮನನ್ನು ಮಾದಿಗರ ಹುಡುಗನೊಬ್ಬ ಮೋಸದಿಂದ ಮದುವೆಯಾದ್ನಂತೆ.. ಅವನ ಅಸಲಿ ಜಾತಿ ತಿಳಿದ ಮೇಲೆ ‘ಇನ್ನೂ ಮುಂದೆ ನಾನು ಮಾರಿಯಾಗಿ ಬಂದು ಕೋಣನಾದ ನಿನ್ನನ್ನು ಬಲಿ ತೆಗೆದುಕೊಳ್ಳುತ್ತೇನೆ; ನನ್ನ ಕರುಳು ಉರಿದಂತೆ ಅವನ ತಾಯಿಯ ಕರುಳು ಉರಿಯಬೇಕು”.. ಎಂದು ಶಾಪಕೊಟ್ಟಳಂತೆ. ಸ್ವಲ್ಪ ವ್ಯತ್ಯಾಸಗಳೊಂದಿಗೆ ಎಲ್ಲಾ ಕಡೆ ಮಾರೆಮ್ಮನ ಕತೆಗಳಲ್ಲಿ ಕಂಡುಬರುತ್ತದೆ. ಅಂತರ್ಜಾತಿ ವಿವಾಹವನ್ನೂ ನಿಷೇದಿಸಲಿಕ್ಕೆಂದೆ ಪುರೋಹಿತವರ್ಗದಿಂದ ಸೃಷ್ಟಿಸಲ್ಪಟ್ಟಂಥವುಗಳೆಂದು ಈಗಾಗಲೇ ವಿದ್ವಾಂಸರುಗಳು ಅಭಿಪ್ರಾಯ ಪಟ್ಟಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ.

ಚೈತ್ರಮಾಸದಲ್ಲಿ ಈ ಜಾತ್ರೆಯನ್ನು ಊರಿನ ಸಕಲಕುಲಗಳು ಸೇರಿ ಆಚರಿಸಲ್ಪಡುತ್ತಾರೆ.. ಈ ಮಾರಮ್ಮನ ಆಚರಣೆ ಕರಾವಳಿ ಭಾಗದಲ್ಲಿ ನಡೆಯುವ ಭೂತ, ಕೋಲ ಆಚರಣೆಯನ್ನೇ ಹೋಲುತ್ತದೆ. ಇಲ್ಲಿಯೂ ಸಹ ಮಾರೆಮ್ಮನನ್ನು ಊರಗಡಿ ದಾಟಿಸುವ ಸಾಂಪ್ರದಾಯವಿದೆ.

“ಬಾಂದರವಿ” ಏನಿದು ?!

೧.”ಬಾಂದರವಿ” ಗ್ರಾಮದೇವತೆ & ಮಾರೆಮ್ಮನ ಜಾತ್ರೆಗಳಲ್ಲಿ ಅನ್ನ ಬೇಯಿಸುವ ಮಡಕೆ.

೨. ಶಾಪಗ್ರಸ್ತಳಾದ ಮಾರೆಮ್ಮನ ಗಂಡನ ತಾಯಿಯೇ ಬಾಂದರವಿಯಾಗಿದ್ಧಾಳೆಂದು ನಂಬಿಕೆ.

೩. ಪಾಪ ಪರಿಹಾರಾರ್ಥವಾಗಿ ಬಾಂದರವಿಯಲ್ಲಿ ಬೇಯಿಸಿದ ಅನ್ನವನ್ನು ಪ್ರಸಾದವಾಗಿ ಎಲ್ಲರಿಗೂ ಹಂಚುತ್ತಾರೆ.

೫. ಕೋಣ ಬಲಿ ನಂತರ ಈ ಬಾಂದರವಿಗೆ ಬೆಂದ ಅನ್ನವನ್ನು ೧೨ ಭಾಗಮಾಡಿ ಆಯಗರಿಗೆ ಹಂಚಿಕೆ ಮಾಡುತ್ತಾರೆ. ಅನುಕ್ರಮವಾಗಿ ಶಾನುಭೋಗ, ಪಟೇಲ, ರೆಡ್ಡಿ, ಅಕ್ಕಸಾಲಿಗ, ಸುಣ್ಣಕಲ್ಲು, ಕಂಬಾರ, ಹೊಲೆಯ, ಹಟ್ಟಿಗೌಡ, ಇವರಿಗೆ ಹಂಚಿಕೆ ಮಾಡುತ್ತಾರೆ.

೬. ಮಾರೆಮ್ಮನ ತಾಳಿ ಮತ್ತು ಒಡವೆಯನ್ನು ಅಸಾದಿ ಕಿತ್ತುಕೊಂಡು ಹೋಗುತ್ತಾನೆ.. ಇದು ಅವನ ಹಕ್ಕು.

ಈ ಮೇಲಿನ ಕಾದಾಲವೇಣಿ ಮಾರೆಮ್ಮನಜಾತ್ರೆಗೆ ಸಂಬಂದಿಸಿದ ಪ್ರಚಲಿತ ಕತೆಯನ್ನು ಸಂಗ್ರಹಿಸಿದವರು ನನ್ನ ಗುರುಗಳಾದ ಸಿ.ಎಂ.ಗೋವಿಂದರೆಡ್ಡಿರವರು ತಮ್ಮ “ಕೋಲಾರ ಜಾತ್ರೆಗಳು” ಸಂಶೋಧನ ಪ್ರಬಂಧದಲ್ಲಿ

ನನ್ನನ್ನು ಕಾಡಿದ್ದು!!

೧.ಇಲ್ಲಿ ಅನ್ನದ ಮಡಿಕೆಯನ್ನು ಅಸ್ರೃಶ್ಯ ಹೆಣ್ಣೆಂದು ಭಾವಿಸಿರುವುದು.

೨. ಆ.. ಅಸ್ರೃಶ್ಯ ಮಡಕೆಯಲ್ಲಿನ ಅನ್ನವನ್ನು ಇಲ್ಲಿ ೧೨ ಬಾಗ ಮಾಡಿ ಮೇಲ್ವರ್ಗಗಳು ಹಂಚಿ ತಿನ್ನುವ ಕ್ರಮ.

೩.ಹಂಚಿ ತಿನ್ನುವವರು ಒಂದೇ ಪಣಕಟ್ಟಿಗೆ ಸೇರಿರುವವರಾಗುತ್ತಾರೆ. ಇಲ್ಲವೇ ಇವರಲ್ಲಿ ಮೂಲದಲ್ಲಿ ವೈವಾಹಿಕ ಕೂಡಿಕೆಯ ಸಂಬಂಧಗಳಿದ್ದಿರಬೇಕು.

೪. ಶಕ್ತಿ ದೇವತೆಗೆ ಕೋಣನ ಬಲಿ ನೀಡಿರುವುದು ಆದಿಮಾನವನ ಕಾಲದಿಂದಲೂ ಬಂದಿರುವಂಥದ್ದು.
ಅದರ ನೆತ್ತರನ್ನು ಊರ ಹೊಲ,ಗದ್ದೆಗಳಿಗೆ ಎರಚುವುದು ಫಲವಂತಿಕೆಯ ಸಂಕೇತ. ಕೋಣನ ಬಲಿ ನಂತರ ಮಾಂಸವನ್ನು ಹಂಚಿಕೆ ಮಾಡುವುದು ಅವರ ಕುಲದ ಹಕ್ಕು..

೫. ಕೋಣನ ಬಲಿಯನ್ನು ಜಾತಿಹಿನ್ನಲೆಗೆ ಕಟ್ಟಿದ ಕಟ್ಟುಕಥೆ.

೬. “ಬಾಂದರವಿ” ಆಚರಣೆ ಒಂದೇ ತಟ್ಟೆಯಲ್ಲಿ ಕೂತು ಉಣ್ಣುವುದು ವಿಶ್ವಕುಟುಂಬದ ಸಂಕೇತ.

೭. ಮಾರೆಮ್ಮನ ಜಾತ್ರೆ ಮಾತೃಪ್ರಧಾನ ಕುಟುಂಬದ ಸಂಕೇತ. ಸ್ತ್ರೀಪ್ರಧಾನ ಆಚರಣೆ

೮. ಜಾತ್ರೆ ಮುಗಿದ ನಂತರ ಬಾಂದರವಿಯನ್ನು ಮಾದಿಗ ಸಮುದಾಯದವರು ತಮ್ಮ ಮನೆಗೆ ಒಯ್ಯುತ್ತಾರೆ..
ಮೂಲದಲ್ಲಿ ಇದು ಮಾದಿಗ ಸಮುದಾಯದವರ ಆಚರಿಸುವ ಆಚರಣೆ ಇದ್ದಿರಬಹುದೆಂದು ಊಹಿಸಬಹುದು..

೯. ಮಾರೆಮ್ಮ ಬ್ರಾಹ್ಮಣಳಾಗಿದ್ದರೆ ಈ ಅಚರಣೆಯಲ್ಲಿ ಬ್ರಾಹ್ಮಣರು ಭಾಗವಹಿಸಬೇಕಾಗಿತ್ತು ಆದರೆ ಇಲ್ಲಿ ಬ್ರಾಹ್ಮಣರ ಯಾವುದೇ ಪಾತ್ರವಿಲ್ಲ…ಈ ಆಚರಣೆಯಲ್ಲಿ ಶೂದ್ರ ಸಮುದಾಯ ಭಾಗವಹಿಸುತ್ತಿರವುದು ಗಮನಿಸಬೇಕಾದ ವಿಷಯ.

೧೦. ಮಾರೆಮ್ಮನ ಜಾತ್ರೆ ಮುಗಿದ ನಂತರ ಮಾರೆಮ್ಮನ ಮೈಮೇಲಿರುವ ಒಡವೆ, ರವಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.. ಹಾಗಾದರೆ ಮೂಲದಲ್ಲಿ ಈ ಮಾರೆಮ್ಮ ಮಾದಿಗರ ಆರಾದ್ಯ ದೇವತೆಯಾಗಿರಬೇಕು. ಇಲ್ಲವೇ ಮಾತೃ, ಮಾತಂಗಿಯೇ ಆಗಿರಬೇಕುವೆಂದು ಊಹಿಸಬಹುದು…

೧೧. ಈ ಆಚರಣೆಯನ್ನು ಪಣಕಟ್ಟುವಿಗೆ ಸಂಬಂದಿಸಿದ ಕುಲಮೂಲ ಮೀಮಾಂಸೆಯಲ್ಲಿಟ್ಟು ಗ್ರಹಿಸುವುದು..

ಈ “ಬಾಂದರವಿ ದಲಿತ ಸಮುದಾಯದ ಜೀವನೆಲೆಯಾದ “ಗಲ್ಲೇಬಾನಿ”ಯನ್ನು ನೆನಪಿಸುವಂತಿದೆ…

ಗಂಗಪ್ಪ ತಳವಾರ್
ಲೇಖಕರು

Related Articles

ಇತ್ತೀಚಿನ ಸುದ್ದಿಗಳು