Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕಡಬ: ಮುಸ್ಲಿಂ ಯುವಕರ ಮೇಲಿನ ಗುಂಪು ಹಲ್ಲೆಗೆ ಕಳ್ಳತನ, ಆಕ್ಸಿಡೆಂಟ್‌ ಬಣ್ಣ!

ಮಂಗಳೂರು: ನೆನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕಡಬ ಠಾಣಾ ವ್ಯಾಪ್ತಿಯ ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ನಡೆದಿರುವ ಭೀಕರ ಗುಂಪು ಹಲ್ಲೆಯ ಕುರಿತು ಫೇಕ್‌ ನ್ಯೂಸ್‌ ಹರಡಿಸಲಾಗುತ್ತಿದೆಯೇ? ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿ ಈ ಪ್ರಕರಣವನ್ನು ಬಿಂಬಿಸಲಾಗುತ್ತಿರುವ ರೀತಿ ನೋಡಿದರೆ ಹೌದೆನಿಸುತ್ತಿವೆ.

ಹಳ್ಳಿಗಳಲ್ಲಿ ಬೆಡ್‌ಶೀಟ್‌ ವ್ಯಾಪಾರ ಮಾಡಲು ಹೋಗಿದ್ದ ಇಬ್ಬರು ಮುಸ್ಲಿಂ ಯುವಕರು ಒಂದು ಮನೆಯಲ್ಲಿ ಮಹಿಳೆಯೊಬ್ಬರಿಗೆ ಬೆಡ್‌ಶೀಟ್‌ ಕೊಳ್ಳಲು ಸ್ವಲ್ಪ ಹೆಚ್ಚು ಒತ್ತಾಯ ಮಾಡಿದ್ದಾರೆ. ಸಾಮಾನ್ಯವಾಗಿ ವ್ಯಾಪಾರಿಗಳು ಹೀಗೆ ಒತ್ತಾಯಿಸುವುದು ಇಲ್ಲವೇ ಗ್ರಾಹಕರು ಚೌಕಾಸಿ ಮಾಡುವುದು ಸರ್ವೇಸಾಮಾನ್ಯ ಸಂಗತಿ. ಆ ಯುವಕರೇ ಹೇಳಿಕೊಂಡಿರುವಂತೆ, ʼಅವರು ಬೇಡ ಎಂದರು, ನಾವು ಸ್ವಲ್ಪ ಹೆಚ್ಚು ಒತ್ತಾಯಿಸುತ್ತಿದ್ದೆವು.

ಅಷ್ಟರಲ್ಲಿ ಅವರು ಯಾರಿಗೋ ಪೋನ್‌ ಮಾಡಿದರು. ನಾವು ಅಲ್ಲಿಂದ ವ್ಯಾಪಾರ ಮುಗಿಸಿಕೊಂಡು ಹೊರಟು ಊರು ದಾಟಿ ಹೋಗುವಾಗ ರಸ್ತೆ ಮಾರ್ಗದಲ್ಲಿ ನಮ್ಮ ಕಾರಿಗೆ ಪಿಕಪ್‌ ಅಡ್ಡ ನಿಲ್ಲಿಸಿ ಒಂದು ಗುಂಪು ನಮ್ಮನ್ನು ಅಡ್ಡಗಟ್ಟಿತ್ತು. ನಮ್ಮ ಕಾರನ್ನು ಜಕಂ ಮಾಡಿತು. ನಂತರ ನಮ್ಮನ್ನು ಹತ್ತಾರು ಜನರು ಹೀನಾಮಾನ ಹೊಡೆದರುʼ.

ಈ ಉದ್ರಿಕ್ತ ಯುವಕರ ಗುಂಪು ಭೀಕರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಅಲ್ಲಿದ್ದವರೇ ವಿಡಿಯೋ ಮಾಡಿಕೊಂಡು ಅದು ಸಹ ವೈರಲ್‌ ಆಗಿದೆ.

ವಸ್ತುಸ್ಥಿತಿ ಹೀಗಿರುವಾಗ ಆರ್‌ ಎಸ್‌ ಎಸ್‌ ಗೆ ಸೇರಿದ ಕೆಲವು ಫೇಕ್‌ನ್ಯೂಸ್‌ ಜಾಲತಾಣಗಳು ತಪ್ಪು ಮಾಹಿತಿ ನೀಡತೊಡಗಿವೆ. ಆ ಯುವಕರು ಕಳ್ಳರೆಂದೂ, ಸರಗಳ್ಳತನ ಮಾಡಲು ಪ್ರಯತ್ನಿಸಿದರೆಂದೂ, ಮಾನಹರಣ ಮಾಡಲು ಪ್ರಯತ್ನಿಸಿ ಪರಾರಿಯಾಗುವಾಗ ಕಾರು ಪಲ್ಟಿ ಹೊಡೆಯಿತೆಂದೂ ವಿವಿದ ರೀತಿಯಲ್ಲಿ ಕತೆ ಹೆಣೆಯಲಾಗುತ್ತಿದೆ. ಈ ಹಲ್ಲೆ ಪ್ರಕರಣದ ಫೋಟೋಗಳು ಮತ್ತು ವಿಡಿಯೋಗಳು ವೈರಲ್‌ ಆಗಿವೆ. ಯುವಕರ ಮೇಲೆ ದೊಣ್ಣೆಗಳಿಂದ ಹೊಡೆದಿರುವ ಗುರುತುಗಳು ಕಾಣುತ್ತಿವೆ. ಮಣ್ಣಿನಲ್ಲಿ ಎಳೆದಾಡಿ ಬಿಸಾಕಿರುವುದು ಸಹ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಬೇಕೆಂದೇ ಸುಳ್ಳು ಕತೆಗಳನ್ನು ಹರಿಬಿಡಲಾಗುತ್ತಿದೆ.

ಮುಸ್ಲಿಂರ ಮೇಲೆ ಹಲ್ಲೆ ನಡೆಸುವ ವಿಷಯದಲ್ಲಿ ಕರ್ನಾಟಕವು ಮತ್ತೊಂದು ಉತ್ತರ ಪ್ರದೇಶವಾಗುತ್ತಿದೆಯೇ ಎಂಬ ಪ್ರಶ್ನೆ ಈ ಘಟನೆಯ ಬಳಿಕ ಎದುರಾಗಿದೆ. ನೆನ್ನೆಯಷ್ಟೇ ಸುಪ್ರೀಂ ಕೋರ್ಟು ದ್ವೇಷದ ಮಾತುಗಳಿಗೆ ಕಡಿವಾಣ ಹಾಕುವ ಸೂಚನೆಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿದೆ. ಆದರೆ ಇಂತಹ ದ್ವೇಷದ ಮಾತುಗಳಿಂದ ಪ್ರಚೋದನೆಗೊಂಡು ಮುಸ್ಲಿಮರ ಮೆಲೆ ಹಲ್ಲೆ ನಡೆಸುವ ಘಟನೆಗಳನ್ನು ಮುಚ್ಚಿಹಾಕಲು ಸ್ವತಃ ಪೊಲೀಸ್‌ ಇಲಾಖೆಯೇ ಮುಂದೆ ನಿಂತಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಏಕೆಂದರೆ ಹತ್ತಾರು ಯುವಕರು ಸೇರಿ ಇಬ್ಬರಿಗೆ ಕ್ರೂರವಾಗಿ ಥಳಿಸುವ ವಿಡಿಯೋ ವೈರಲ್‌ ಆಗಿದ್ದರೂ ಕಡಬ ಪೊಲೀಸರಾಗಲೀ, ಪುತ್ತೂರಿನ ಪೊಲೀಸರಾಗಲೀ ಹಲ್ಲೆ ನಡಸಿದವರನ್ನು ಇನ್ನೂ ಬಂಧಿಸಿಲ್ಲವೇಕೆ? ಒಂದೊಮ್ಮೆ ಈ ಯುವಕರೇ ತಪ್ಪೆಸಗಿದ್ದರೂ ಅವರ ಮೆಲೆ ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಒಪ್ಪಿಸುವ ಹೊಣೆ ಪೊಲೀಸರದೇ ಆಗಿತ್ತು.

ಆದರೆ ಒಂದು ಉದ್ರಿಕ್ತ ಗುಂಪು ತಾನೇ ಕಾನೂನು ಕೈಗೆ ತೆಗೆದುಕೊಂಡಾಗ ಪೊಲೀಸ್‌ ಇಲಾಖೆ ಮಾಡಿಬೇಕಿರುವುದೇನು? ಹೀಗೆ ಇಡೀ ರಾಜ್ಯದಲ್ಲಿ ಯಾರು ಬೇಕಾದರೂ ತಮಗೆ ತೋಚಿದ ರೀತಿಯಲ್ಲಿ ಕಾನೂನು ಕೈಗೆ ತೆಗೆದುಕೊಂಡರೆ ಕಾನೂನು ಸುವ್ಯವಸ್ಥೆ ಉಳಿಯುವುದು ಸಾಧ್ಯವೇ? ಪೊಲೀಸ್‌ ಇಲಾಖೆಯೇ ಅರಾಜಕತೆಗೆ, ಹಿಂಸೆಗೆ ದಾರಿ ಮಾಡಿಕೊಡುವುದಿಲ್ಲವೇ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೊಣೆಗಾರಿಕೆ ಏನು ಎಂದು ಸಾರ್ವಜನಿಕರು ಕೇಳುವಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು