Saturday, June 15, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಹೆಚ್.ಎಲ್.ಪುಷ್ಪಾ ಅಧಿಕಾರ ಸ್ವೀಕಾರ

ಮೂರು ವರ್ಷಗಳ ಅವಧಿಗೆ ನಡೆಯುವ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಸೆಪ್ಟೆಂಬರ್ 19 ಕ್ಕೆ ಹಾಲಿ ಅಧ್ಯಕ್ಷರಾದ ವನಮಾಲ ಸಂಪನ್ನಕುಮಾರ್ ಅವರ ಎದುರು ಡಾ.ಹೆಚ್.ಎಲ್.ಪುಷ್ಪಾ ಅವರು 62 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚುನಾವಣಾ ಫಲಿತಾಂಶ ಬಂದು ಸುಮಾರು 18 ದಿನಗಳ ನಂತರ ವನಮಾಲ ಸಂಪನ್ನಕುಮಾರ್ ಅವರು ಅಕ್ಟೋಬರ್ 6 ರ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸ ಅಧ್ಯಕ್ಷರಾದ ಹೆಚ್.ಎಲ್.ಪುಷ್ಪಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಅಧಿಕಾರ ಹಸ್ತಾಂತರದ ನಂತರ ಪೀಪಲ್ ಮೀಡಿಯಾ, ಹೊಸ ಅಧ್ಯಕ್ಷರಾದ ಹೆಚ್‌.ಎಲ್.ಪುಷ್ಪಾ ಅವರನ್ನು ಸಂಪರ್ಕಿಸಿ ಅವರ ಮುಂದಿನ ಕಾರ್ಯ ಯೋಜನೆ ಬಗ್ಗೆ ನಡೆಸಿದ ಚುಟುಕು ಸಂಭಾಷಣೆ ಇದು.

ಪೀಪಲ್ ಮೀಡಿಯಾ : ನಿಮ್ಮ ಪರವಾಗಿ ಬಂದ ಫಲಿತಾಂಶಕ್ಕೆ ಅಭಿನಂದನೆಗಳು. ಫಲಿತಾಂಶದ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಹೆಚ್.ಎಲ್.ಪುಷ್ಪಾ : ಧನ್ಯವಾದಗಳು. ತುಂಬಾ ಖುಷಿಯಾಗಿದೆ. ಮೊದಲಿಗೆ ನನ್ನ ಪರವಾಗಿ ನಿಂತ, ಮತ ನೀಡಿ ಗೆಲ್ಲಿಸಿದ ಎಲ್ಲಾ ಸ್ನೇಹಿತರು, ಹಿತೈಷಿಗಳಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಧ್ಯೇಯೋದ್ಧೇಶಕ್ಕೆ ಜೊತೆಯಾಗಿ ಸಂಘವನ್ನು ಒಳ್ಳೆಯ ರೀತಿಯಲ್ಲಿ ಮೇಲೆತ್ತಲು ಸಹಕರಿಸುವ ಎಲ್ಲರನ್ನೂ ನನ್ನ ಮನದಲ್ಲಿಟ್ಟು ಅವರ ಸಲಹೆಗಳ ಅಡಿಯಲ್ಲಿ ಕೆಲಸ ಮಾಡಲು ಇಚ್ಚಿಸುತ್ತೇನೆ.

ಪೀಪಲ್ ಮೀಡಿಯಾ : ಸಧ್ಯಕ್ಕೆ ನಿಮ್ಮ ಮುಂದಿರುವ ಸವಾಲುಗಳೇನು?

ಹೆಚ್.ಎಲ್.ಪುಷ್ಪಾ : ಕನ್ನಡದಲ್ಲಿ ಅದ್ಭುತವಾಗಿ ಬರೆಯುವ ಹೊಸ ತಲೆಮಾರಿನ ಲೇಖಕಿಯರು ಹಲವಷ್ಟು ಮಂದಿ ಇದ್ದಾರೆ. ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕು. ಬರವಣಿಗೆ ಬಗ್ಗೆ ಉತ್ತೇಜಿಸಿ ವೈಚಾರಿಕ ಹಿನ್ನೆಲೆಯಲ್ಲಿ ಅವರನ್ನು ಗುರುತಿಸುವಂತೆ ಮಾಡುವುದು ನಮ್ಮ ಕೆಲಸವಾಗಲಿದೆ.

ಪೀಪಲ್ ಮೀಡಿಯಾ : ನಿಮ್ಮ ಮುಂದಿನ ಕಾರ್ಯಯೋಜನೆ ಏನು.? ಸಂಘ ಬೆಳೆಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಮುಂದಾಗುವಿರಿ.?

ಹೆಚ್.ಎಲ್.ಪುಷ್ಪಾ : ಮೊದಲಿಗೆ ಸಂಘಕ್ಕೆ ಇರುವ ಕಟ್ಟಡವನ್ನು ಪುನರುಜ್ಜೀವನಗೊಳಿಸಬೇಕು. ಸುಸಜ್ಜಿತ ಗ್ರಂಥಾಲಯ ನಿರ್ಮಿಸುವ ಉದ್ದೇಶ ಕೂಡಾ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಅನುಧಾನ ಮುಖ್ಯ. ಈ ವರೆಗೂ ಸರ್ಕಾರದಿಂದ ಬರುತ್ತಿದ್ದ ಅನುಧಾನ ತೀರಾ ಕಡಿಮೆ ಇದೆ. ಅನುಧಾನ ಹೆಚ್ಚಳಕ್ಕೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಆ ನಂತರ ಬಿಡುಗಡೆಯಾಗುವ ಅನುಧಾನಕ್ಕೆ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುತ್ತೇನೆ. ನನ್ನನ್ನು ಒಪ್ಪಿ ನನ್ನ ಗೆಲುವಿಗೆ ಸಹಕರಿಸಿದ ಎಲ್ಲರ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುವುದೇ ನನ್ನ ಮೊದಲ ಉದ್ದೇಶ.
ಧನ್ಯವಾದಗಳು.
..‌‌‌‌…..
ಸಂಘದ 1,330 ಸದಸ್ಯರಲ್ಲಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಬೇರೆಬೇರೆ ಜಿಲ್ಲೆಗಳಲ್ಲಿ ಸದಸ್ಯರು ಅಂಚೆಗಳ ಮೂಲಕ ಮತ ಚಲಾಯಿಸಿದ್ದರು. ಬೆಂಗಳೂರಿನಲ್ಲಿ 650 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಆದರೆ, ಸುಮಾರು 275 ಮಂದಿ ಮಾತ್ರ ಮತ ಚಲಾಯಿಸಿದ್ದರು. ರಾಜ್ಯದ ಇತರೆ ಭಾಗಗಳಿಂದ 387 ಮಂದಿ ಅಂಚೆ ಮೂಲಕ ಮತ ಚಲಾಯಿಸಿದರು. ಅಂದರೆ ರಾಜ್ಯದ ಎಲ್ಲೆಡೆಯಿಂದ ಒಟ್ಟಾರೆ 699 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 44 ಮತಗಳು ತಿರಸ್ಕರಿಸಲ್ಪಟ್ಟಿವೆ. ಒಟ್ಟು 62 ಮತಗಳ ಅಂತರದಿಂದ ಹೆಚ್.ಎಲ್.ಪುಷ್ಪಾ ಅವರು ಜಯಭೇರಿ ಆಗಿದ್ದರು.

Related Articles

ಇತ್ತೀಚಿನ ಸುದ್ದಿಗಳು