Monday, August 26, 2024

ಸತ್ಯ | ನ್ಯಾಯ |ಧರ್ಮ

ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶಕ್ಕೆ ಹೋಲಿಸಿದ ಕಂಗನಾ ರಣಾವತ್:‌ ಬಿಜೆಪಿಯಿಂದಲೇ ವಿರೋಧ

ಹೊಸದಿಲ್ಲಿ: ಮಂಡಿ ಸಂಸದೆ ಮತ್ತು ಬಿಜೆಪಿ ನಾಯಕಿ, ನಟಿ ಕಂಗನಾ ರಣಾವತ್ ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶದ ಅಶಾಂತಿಗೆ ಹೋಲಿಸಿ ಈಗ ಸಾಕಷ್ಟು ಚರ್ಚೆ ಕಾರಣವಾಗಿದ್ದು, ಹರಿಯಾಣದ ಬಿಜೆಪಿ ಮುಖಂಡರಿಂದ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಸರಕಾರ ಬಲವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ರೈತರಿಂದಾಗಿ ಬಾಂಗ್ಲಾದೇಶದ ಪರಿಸ್ಥಿತಿ ಭಾರತಕ್ಕೆ ಬರಬಹುದು ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕಂಗನಾ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಶವಗಳನ್ನು ನೇಣು ಹಾಕುವುದು ಮತ್ತು ಅತ್ಯಾಚಾರ ಪ್ರಕರಣಗಳು ನಡೆದ ಉದಾಹರಣೆಗಳಿವೆ ಎಂದು ರಣಾವತ್ ‌ ಆರೋಪಿಸಿದ್ದಾರೆ. ರೈತರ ಪ್ರತಿಭಟನೆಗಳಿಗೆ ವಿದೇಶಿ ಶಕ್ತಿಗಳ ಉತ್ತೇಜನವಿದೆ ಎಂದು ಅವರು ಹೇಳಿರುವುದು ರೈತರನ್ನು ಕೆರಳಿಸಿದೆ.

ಬಿಜೆಪಿ ಮೂಲಗಳ ಪ್ರಕಾರ, ಕಂಗನಾ ಅವರ ಹೇಳಿಕೆ ಚುನಾವಣೆಯ ಹೊಸ್ತಿಲಲ್ಲಿರುವ ಹರಿಯಾಣ ಬಿಜೆಪಿಗೆ ಅರಗಿಸಿಕೊಳ್ಳಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ನಾಯಕರೊಬ್ಬರು, “ನಾವು ಈ ವಿಚಾರವನ್ನು ಉನ್ನತ ನಾಯಕರ ಗಮನಕ್ಕೆ ತಂದಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ರಾಜ್ಯದ ರೈತರಿಂದ ವಿರೋಧ ಎದುರಿಸಿದ್ದರು.ಕಂಗನಾ ರಣಾವತ್ ಅವರ ಹೇಳಿಕೆಗಳು ರೈತರ ಕೋಪವನ್ನು ಮತ್ತೆ ಹೆಚ್ಚಿಸಬಹುದು ಮತ್ತು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಬಿಜೆಪಿ ನಾಯಕರು ಆತಂಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಆಕೆ ಹರಿಯಾಣದ ನಾಯಕಿಯೂ ಅಲ್ಲ. ಆಕೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅಗತ್ಯವಿರಲಿಲ್ಲ”, ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಶಹೀದ್ ಭಗತ್ ಸಿಂಗ್ ನ ವಕ್ತಾರ ತೇಜ್ವೀರ್ ಸಿಂಗ್, ರಣಾವತ್ ಅವರಿಗೆ ಪ್ರಚಾರದ ಹುಚ್ಚು. ಅದಕ್ಕೆ ಟೀಕೆಗಳನ್ನು ಮಾಡುತ್ತಾರೆ. ಮಣಿಪುರದಂತಹ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಅವರು ಮೌನ ತಾಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರು ವೀಡಿಯೊ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page