Monday, June 17, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ವಿಧೇಯಕ: ಕರವೇ ಸ್ವಾಗತ

ಬೆಂಗಳೂರು: ಕನ್ನಡವನ್ನು ಎಲ್ಲಾ ಆಡಳಿತ ಹಂತಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ”ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ”ವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಇಂತಹದ್ದೊಂದು ವಿಧೇಯಕವನ್ನು ಮಂಡಿಸುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಕಾರ್ಕಳ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ವಿಧೇಯಕದ ನಿಯಮಗಳನ್ನು ಗಟ್ಟಿಯಾಗಿ ಅನುಷ್ಟಾನಕ್ಕೆ ತರಲು ಮತ್ತು ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ನಿಟ್ಟಿನಲ್ಲಿ ಸರಕಾರ ಗಟ್ಟಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ಭಾವಿಸಿರುವುದಾಗಿ ತಿಳಿಸಿರುವ ಅವರು, ಸ್ಥಳೀಯ ಪ್ರಾಧಿಕಾರ ಸಂಘಗಳ ಉದ್ಯೋಗ ಪಡೆದುಕೊಳ್ಳಲು ಕನ್ನಡ ಕಡ್ಡಾಯವಾಗಿರುವುದರಿಂದ ಕನ್ನಡದ ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವ ಜೊತೆಗೆ, ಪ್ರಾಧಿಕಾರಗಳು ಮತ್ತು ಸಂಘಗಳೊಡನೆ ವ್ಯವಹರಿಸುವ ಕನ್ನಡಿಗರಿಗೂ ಕೂಡ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತದಲ್ಲಿ ಕನ್ನಡದ ಬಳಕೆ ದಶಕಗಳ ಕನಸು, ಈ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ, ಈ ವಿಧೇಯಕದ ಮೂಲಕವಾದರೂ ಆಡಳಿತದಲ್ಲಿ ಕನ್ನಡದ ಬಳಕೆಗೆ ಶಕ್ತಿ ಸಿಗಲಿ. ಕನ್ನಡ ಬಳಸದ ಅಧಿಕಾರಿಗಳು ಕರ್ನಾಟಕಕ್ಕೆ ಬೇಡ. ಅಂಥವರ ಮೇಲೆ ಶಿಸ್ತುಕ್ರಮ ಜರುಗಿಸಲಿ ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.

ತಂತ್ರಜ್ಞಾನದ ಮೂಲಕ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿಸಿಕೊಡಲು ಹೊರಟಿರುವುದೂ ಸಹ ಕನ್ನಡವನ್ನು ಗಟ್ಟಿಯಾಗಿ ಕಟ್ಟಿ ಮುಂದಿನ ಪೀಳಿಗೆಗೆ ಕೊಡಲು ಸಹಕಾರಿಯಾಗಿದೆ. ವಿಧೇಯಕ ತಂದಿರುವುದು ಎಷ್ಟು ಮುಖ್ಯವೋ ಅದನ್ನು ಜಾರಿಮಾಡುವುದು ಅಷ್ಟೇ ಮುಖ್ಯ. ಸರ್ಕಾರ ಅಧಿಕಾರಿಗಳ ನಡೆಯ ಮೇಲೆ ಕಣ್ಗಾವಲು ಇಟ್ಟು ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

🔶 ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/GBc6sg7E2FQLuXblEdBxSi

Related Articles

ಇತ್ತೀಚಿನ ಸುದ್ದಿಗಳು