Tuesday, April 22, 2025

ಸತ್ಯ | ನ್ಯಾಯ |ಧರ್ಮ

ನಾಳೆ ʼಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘʼಕ್ಕೆ ಚಾಲನೆ

ಬೆಂಗಳೂರು: ನಾಳೆ ಅಂದರೆ ಏಪ್ರಿಲ್‌ 23ರಂದು ಸಂಜೆ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ʼಕರ್ನಾಟಕ ಪುಸ್ತಕ ಮಾರಾಟಗಾರರು,ಪ್ರಕಾಶಕರು ಹಾಗೂ ಲೇಖಕರ ಸಂಘʼ ಚಾಲನೆ ಪಡೆಯಲಿದೆ. ಕನ್ನಡ ಪುಸ್ತಕೋದ್ಯಮವನ್ನು ಬೆಳೆಸುವುದು ಮತ್ತು ಪುಸ್ತಕ ಮಾರಾಟಗಾರರು, ಪ್ರಕಾಶಕರು ಮತ್ತು ಲೇಖಕರ ನಡುವೆ ಸೇತುವೆಯಾಗಿ ಕೆಲಸು ಮಾಡುವುದು ಈ ಸಂಘಟನೆಯ ಉದ್ದೇಶವಾಗಿದೆ ಎಂದು ಸಂಘಟನೆಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಪುಸ್ತಕಗಳಿಗೆ ಓದುಗರ ಕೊರತೆ ಕಾಡುತ್ತಿದೆ. ಕನ್ನಡ ಪುಸ್ತಕೋದ್ಯಮವೂ ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟದಲ್ಲಿದೆ. ಇಂಥ ಸನ್ನಿವೇಶದಲ್ಲಿ ತಮ್ಮ ಪುಸ್ತಕ ಪ್ರಕಟಿಸಬೇಕೆಂಬ ಆಶಯ ಇರುವ ಲೇಖಕರು, ಪುಸ್ತಕ ಮಾರಾಟವನ್ನೇ ಬದುಕಾಗಿಸಿಕೊಂಡ ದೂರದೂರುಗಳ ಪುಸ್ತಕ ಮಾರಾಟಗಾರರು ಹಾಗೂ ಸಣ್ಣ ಪ್ರಕಾಶಕರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕೆಂಬ ಆಶಯದಿಂದ ಈ ಸಂಘವನ್ನು ಹುಟ್ಟು ಹಾಕಲಾಗುತ್ತಿದೆ.

ಸಂಘವು ಪುಸ್ತಕ ಪ್ರಕಾಶಕರು, ವಿತರಕರು ಮತ್ತು ಲೇಖಕರ ಮಧ್ಯೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುವ ಉದ್ದೇಶ ಹೊಂದಿದೆ. ವಿಚಾರಸಂಕಿರಣ, ಕಾರ್ಯಾಗಾರ, ತರಬೇತಿ ಮತ್ತು ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು; ಇದಕ್ಕಾಗಿ ಪುಸ್ತಕ ಮೇಳ, ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಸದಸ್ಯರ ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಾಂಸ್ಥಿಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪುಸ್ತಕ ಪ್ರದರ್ಶನ/ಮೇಳಗಳನ್ನು ಸರ್ಕಾರದ ನಾನಾ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳು, ನಿಗಮ-ಮಂಡಳಿಗಳು, ಪ್ರಾಧಿಕಾರಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವುದು ಹಾಗೂ ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುವ ಪುಸ್ತಕ ಪ್ರದರ್ಶನ/ಮೇಳಗಳಲ್ಲಿ ಪಾಲ್ಗೊಳ್ಳಲು ಸದಸ್ಯರಿಗೆ ನೆರವಾಗುವುದು ಸಂಘದ ಉದ್ದೇಶಗಳಲ್ಲಿ ಒಂದು. ಇದೆಲ್ಲವನ್ನೂ ಸಂಘಟನೆ ಮೂಲಕ, ಸಾಮೂಹಿಕ ಪ್ರಯತ್ನದ ಮೂಲಕ ಸಾಧ್ಯವಾಗಿಸುವ ಉದ್ದೇಶ ಹೊಂದಲಾಗಿದೆ. ಸಮಾನತೆ, ಸಮಸಮಾಜ ಮತ್ತು ಸಂವಿಧಾನ ನಮ್ಮ ಗುರಿಯಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ

ಚಿಂತಕ ಡಾ. ರಹಮತ್‌ ತರಿಕೆರೆಯವರು ʼಸಮಕಾಲೀನ ಸಂದರ್ಭದಲ್ಲಿ ಪುಸ್ತಕಗಳುʼ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಲೇಖಕಿ ಆರ್.‌ ಪೂರ್ಣಿಮಾ, ದಲಿತ ಮುಖಂಡ ಮಾವಳ್ಳಿ ಶಂಕರ್‌, ಆಕೃತಿ ಪ್ರಕಾಶನದ ಗುರುಪ್ರಸಾದ್‌ ಡಿ.ಎನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಸವರಾಜ ಸೂಳಿಭಾವಿ, ಧನಂಜಯ್‌, ಮಾಧವ್‌ ಐತಾಳ್‌, ರಾಜೇಶ್ವರಿ, ಅಕ್ಷತಾ ಹುಂಚದಕಟ್ಟೆ, ವಿ.ಆರ್.ಕಾರ್ಪೆಂಟರ್‌, ಚಂದ್ರು ತುರಹುಣಸೆ, ಅನಿಲ್‌ ಚಿಕ್ಕದಳವಟ್ಟ ಮತ್ತು ನಿತೇಶ್‌ ಕುಂಟಾಡಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page