Saturday, June 7, 2025

ಸತ್ಯ | ನ್ಯಾಯ |ಧರ್ಮ

ಕೋವಿಡ್-19 ನಿರ್ವಹಣೆಯಲ್ಲಿನ ಅವ್ಯವಹಾರದ ತನಿಖೆ | ಕರ್ನಾಟಕ ಸರ್ಕಾರದಿಂದ ತನಿಖಾ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು: ಕರ್ನಾಟಕ ಸರ್ಕಾರವು ಕೋವಿಡ್-19 ನಿರ್ವಹಣೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ತನಿಖಾ ಆಯೋಗಗಳ ಅವಧಿಯನ್ನು ವಿಸ್ತರಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ರಚಿತವಾದ ಈ ಆಯೋಗಗಳು ಗಂಭೀರ ಆರೋಪಗಳ ಕುರಿತು ತನಿಖೆ ನಡೆಸುತ್ತಿವೆ.

2021ರ ಜುಲೈ-ಆಗಸ್ಟ್‌ನಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಇತರೆ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಇದರಲ್ಲಿ ಔಷಧಿ, ಉಪಕರಣಗಳ ಖರೀದಿ, ಆಮ್ಲಜನಕ ನಿರ್ವಹಣೆ, ಮತ್ತು ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಸೇರಿವೆ.

ಈ ಆರೋಪಗಳನ್ನು ತನಿಖೆ ಮಾಡಲು ಸರ್ಕಾರವು 25 ಆಗಸ್ಟ್ 2023ರಂದು Commission of Inquiry Act 1952ರ ಅಡಿಯಲ್ಲಿ ಶ್ರೀ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿತ್ತು.

ದಿನಾಂಕ 04 ಜೂನ್ 2025 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ. ತಂಡದ ಅಭಿನಂದನಾ ಸಮಾರಂಭದ ವೇಳೆ ಉಂಟಾದ ಕಾಲ್ತುಳಿತದಿಂದ ಸಾವು-ನೋವುಗಳು ಸಂಭವಿಸಿದೆ. ಈ ಘಟನೆಯ ತನಿಖೆಗಾಗಿ ಸರ್ಕಾರವು 05 ಜೂನ್ 2025 ರಂದು ಶ್ರೀ ಜಾನ್ ಮೈಕಲ್ ಕುನ್ಹಾ ಇವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ. ಈ ತನಿಖೆಯ ತುರ್ತು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಒಂದು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಗೆ ಆದ್ಯತೆ ನೀಡಿರುವ ಕಾರಣ, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದ ತನಿಖೆಯ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page