Friday, June 14, 2024

ಸತ್ಯ | ನ್ಯಾಯ |ಧರ್ಮ

ಪುತ್ಥಳಿ: ಸರಿಯಲಿರುವ ವಿಸ್ಮೃತಿ

ಅದಿ ಚುಂಚನ ಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಭಾನುವಾರ ಚಾಲನೆಗೊಂಡ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಮೆರವಣಿಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಸಂಜೆ ಮಂಗಳೂರು ತಲಪಲಿದೆ. 1837ರಲ್ಲಿ ನಡೆದ ಕರಾವಳಿ ಮಲೆನಾಡಿನ ರೈತರ ಹೋರಾಟ ದಕ್ಷಿಣ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧದ ಈ ಹೋರಾಟವನ್ನು ನೆನಪಿಸುವ ನಿಟ್ಟಿನಲ್ಲಿ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ವಿಶೇಷ ಮಹತ್ವವಿದೆ ಎನ್ನುತ್ತಾರೆ ʼಅಮರ ಸುಳ್ಯದ ಸಶಸ್ತ್ರ ಹೋರಾಟ-1837′ ಕೃತಿಯ ಲೇಖಕ ಕೆ ಆರ್‌ ವಿದ್ಯಾಧರ.

ಸಮಾಜದ ವಿಸ್ಮೃತಿ ಎನ್ನುವುದು ಅದಾಗಿ ರೂಪುಗೊಂಡ ಸ್ಥಿತಿಯಲ್ಲ. ಅದರ ಹಿಂದೆ ಒಂದೊಮ್ಮೆ ಅನುಭವಿಸಿದ ಅಗಾಧ ನೋವೂ ಇರುತ್ತದೆ, ಸಮಯ ಸಾಧಕ ತನದ ಕಥಾನಕಗಳೂ ಇರುತ್ತವೆ. 1837ರಲ್ಲಿ ಅಮರ ಸುಳ್ಯವನ್ನು ಕೇಂದ್ರವನ್ನಾಗಿಟ್ಟುಕೊಂಡು ನಮ್ಮ ರೈತ ಮಕ್ಕಳು ಬ್ರಿಟಿಶರ ವಿರುದ್ಧ ನಡೆಸಿದ ಸಶಸ್ತ್ರ ಹೋರಾಟದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಸಹ ಇಂತಹ ಕಾರಣಗಳು ಕೆಲಸ ಮಾಡಿವೆ. ವಸಾಹತು ಶಾಹಿಯ ಪ್ರಭಾವಕ್ಕೆ, ದಾಸ್ಯಕ್ಕೆ ಒಗ್ಗಿಹೋದ ಮನಸ್ಸುಗಳು ಈ ಹೋರಾಟವನ್ನು ದೇಶದ್ರೋಹವೆಂಬಂತೆ ಕಂಡಿದ್ದಾರೆ, ತಾತ್ಸಾರದಿಂದ ನೋಡಿದ್ದಾರೆ. ಸ್ವಾತಂತ್ಯ ಪೂರ್ವದ ಚಿಂತನೆಯ ನೆರಳುಗಳು ನಂತರವೂ ಹಾದು ಹೋಗಿವೆ, ಅಲ್ಲೊಮ್ಮೆ ಇಲ್ಲೊಮ್ಮೆ ಈಗಲೂ ಹಾದು ಹೋಗುತ್ತಿರುತ್ತವೆ.

ದೇಶ ಮತ್ತು ಸ್ವಾತಂತ್ರ್ಯದ ಕುರಿತಾದ ಇಂದಿನ ವ್ಯಾಖ್ಯಾನಗಳು ಅಂದಿನ ದಿನಗಳಿಗೆ ಅನ್ವಯಿಸುವುದು ಸರಿಯಾದ ಕ್ರಮವಲ್ಲ. ಹಾಗಿದ್ದರೂ, ಮೈಸೂರು ಸಾಮ್ರಾಜ್ಯದ ಅರಸ ಟಿಪ್ಪು ಸುಲ್ತಾನ ಮತ್ತು ಕೊಡಗಿನ ಹಾಲೇರಿ ಸಂಸ್ಥಾನದ ದೊರೆ ಚಿಕ್ಕವೀರರಾಜ ಉಳಿಸಿಹೋದ ಬ್ರಿಟಿಷ್ ವಿರೋಧಿ ಧೋರಣೆ, ದೂರದ ದೇಶಗಳೊಂದಿಗೆ ಅವರುಗಳಿಗೆ ಇದ್ದ ರಾಜತಾಂತ್ರಿಕ ಸಂಬಂಧ ಕೊಡಗು-ಕೆನರಾ ಪ್ರಜೆಗಳ ತಿಳುವಳಿಕೆಯನ್ನು ವಿಸ್ತರಿಸಿತ್ತು ಎನ್ನುವುದು ವಿವಾದಾತೀತ.

1799ರಲ್ಲಿ ಯುದ್ಧಭೂಮಿಯಲ್ಲಿ ಟಿಪ್ಪುವಿನ ಹತ್ಯೆಯಾದ ತಕ್ಷಣ ಆಂಗ್ಲರ ವಿರುದ್ಧ ಏಕ ಕಾಲದಲ್ಲಿ ಹಲವು ಹೋರಾಟಗಳು ಸ್ಫೋಟಗೊಂಡಿವೆ. ದೋಂಡಿಯಾ ವಾಘ್, ಮೆಹ್ತಾಬ್ ಖಾನ್, ನರಸಿಂಹ ದೊಂಬ ಹೆಗ್ಗಡೆ, ವೆಂಕಟಾದ್ರಿ ನಾಯಕ ಮೊದಲಾದವರು ಕೆಚ್ಚಿನಿಂದ ಕಾದಾಡಿ ಜೀವ ತೆತ್ತಿದ್ದಾರೆ. ದಳವ ವೇಲುತಂಬಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಉಸ್ಮಾನ್ ಬೇಗ್ ಎಲ್ಲ ಈ ಸಾಲಿನಲ್ಲಿ ಸಂದು ಹೋಗುತ್ತಾರೆ. ಈ ಭಾಗದ ಚರಿತ್ರೆಯನ್ನು ಗಮನಿಸುವುದಾದರೆ 1811ರ ಮಂಗಳೂರು ಕಂದಾಯ ನಿರಾಕರಣೆಯ ಪ್ರತಿರೋಧ ಮತ್ತು 1831ರ ಮಂಗಳೂರು ಕೂಟ ಹೋರಾಟ ಪ್ರಮುಖವಾದವುಗಳು. ನೆರೆಯ ಶಿವಮೊಗ್ಗದ ಪ್ರಖ್ಯಾತ ನಗರ ರೈತ ಹೋರಾಟವು ಹಳೆ ಮೈಸೂರಿನ ಉದ್ದಕ್ಕೂ ಪ್ರಸರಿಸಿತ್ತು, ಅದರ ಗಾಢ ಪ್ರಭಾವ ಕೊಡಗು ಮತ್ತು ಕೆನರಾ ಪ್ರಾಂತಗಳ ಮೇಲಿತ್ತು.

ಇಂಗ್ಲಿಶರು 1834ರ ಏಪ್ರಿಲ್ ತಿಂಗಳಲ್ಲಿ ಚಿಕ್ಕವೀರರಾಜನನ್ನು ಪಟ್ಟದಿಂದ ಇಳಿಸಿ ಕಾಶಿಗೆ ಗಡಿಪಾರು ಮಾಡುತ್ತಾರೆ. ಸಂಪಾಜೆಯಿಂದ ಪುತ್ತೂರು ತನಕ ಇದ್ದ ಕೆಳಕೊಡಗು ಎಂದು ಕರೆಯಲ್ಪಡುತ್ತಿದ್ದ ಕೊಡಗಿನ ದೊಡ್ಡದೊಂದು ಭೂಪ್ರದೇಶವನ್ನು ಕೆನರಾ ಜಿಲ್ಲೆಗೆ ಸೇರಿಸುತ್ತಾರೆ. ಅದಾದ ಮೇಲೆ ಬ್ರಿಟಿಶರನ್ನು ಕೊಡಗು-ಮೈಸೂರು ಪ್ರಾಂತ್ರ್ಯದಿಂದ ಹೊಡೆದೋಡಿಸಲು ಕನಿಷ್ಟ ಎರಡು ಸಿದ್ಧತೆಗಳು ನಡೆದವು, ಆದರೆ ಆರಂಭದಲ್ಲೇ ವಿಫಲತೆಯನ್ನು ಕಂಡವು. ನಂತರ ನಡೆದದ್ದು 1837ರ ಸಮರ. ಆಂಗ್ಲರನ್ನು ಇಲ್ಲಿಂದ ಹೊಡೆದಟ್ಟುವುದು ಹೋರಾಟಗಾರರ ಅಂತಿಮ ಗುರಿಯಾಗಿತ್ತು ಎನ್ನುವುದನ್ನು ಲೆವಿನ್, ಕಾಟನ್ ಮೊದಲಾದ ಬ್ರಿಟಿಶ್ ಅಧಿಕಾರಿಗಳು ದಾಖಲಿಸಿದ್ದಾರೆ.

ಪುತ್ಥಳಿ ಸ್ವಾಗಿಸಲು ಸಂಪಾಜೆಯಲ್ಲಿ ಕಾದಿರುವ ನಾಗರಿಕರು

ಕೆದಂಬಾಡಿ ರಾಮಯ್ಯ ಗೌಡ ಎನ್ನುವ ಜಮೀನ್ದಾರ ನಡೆಸಿದ ಪ್ರಬಲ ಸಂಘಟನೆಯೊಂದಿಗೆ 1837ರ ಹೋರಾಟವು ಆರಂಭಗೊಂಡಿದೆ. ಮೊದಲು ಶನಿವಾರ ಸಂತೆಯ ಹೆಮ್ಮನೆ ಪುಟ್ಟಬಸಪ್ಪ ಎಂಬಾತನನ್ನು, ಆತ ಹಾಲೇರಿ ರಾಜಕುಟುಂಬಕ್ಕೆ ಸೇರಿದವನೆಂದು ಸುದ್ದಿ ಹಬ್ಬಿಸಿ ಅವನಿಗೆ ಕಲ್ಯಾಣಸ್ವಾಮಿ ಎಂದು ಹೆಸರಿಟ್ಟು ಸುಳ್ಯಕ್ಕೆ ಕರೆತರಲಾಗುತ್ತದೆ. ಮೂರು ವಾರಗಳ ಕಾಲ ಅವನನ್ನು ಪೂಮಲೆ ಅರಣ್ಯದೊಳಗೆ ಆಶ್ರಮ ನಿರ್ಮಿಸಿ ಇರಿಸಿಕೊಳ್ಳಲಾಗುತ್ತದೆ. 1837ರ ಮಾರ್ಚ್ 30ರಂದು ಸುಳ್ಯ ಸನಿಹದ ಉಬರಡ್ಕ ಗ್ರಾಮದ ಮದುವೆ ಗದ್ದೆ ಎಂಬಲ್ಲಿ ಸಾವಿರದ ಇನ್ನೂರಕ್ಕೂ ಹೆಚ್ಚು ಶಸ್ತ್ರಸಜ್ಜಿತ ರೈತಯೋಧರನ್ನು ಕೆದಂಬಾಡಿ ರಾಮಯ್ಯ ಗೌಡ ಒಂದೆಡೆ ಸೇರಿಸುತ್ತಾನೆ. ಅಂದು ಹೊರಟ ಅಮರ ಸೈನ್ಯವು ಬೆಳ್ಳಾರೆ-ಕಾಸರಗೋಡು-ಕುಂಬ್ಳೆ-ಮಂಜೇಶ್ವರ-ಕುಕ್ಕೆ ಸುಬ್ರಹ್ಮಣ್ಯ-ಉಪ್ಪಿನಂಗಡಿ-ಬೆಳ್ತಂಗಡಿ-ಧರ್ಮಸ್ಥಳ-ಮೂಡಬಿದಿರೆ-ಕಾರ್ಕಳ-ಪುತ್ತೂರು-ಬಂಟ್ವಾಳ ಮೊದಲಾದ ಪ್ರದೇಶಗಳನ್ನು ವಶ ಪಡಿಸಿಕೊಂಡು ಎಪ್ರಿಲ್ 5ರ ವೇಳೆಗೆ ಮಂಗಳೂರಿಗೆ ಲಗ್ಗೆ ಹಾಕುತ್ತದೆ. ಎರಡು ವಾರಗಳ ಕಾಲ ಈ ಪ್ರಾಂತವು ಬ್ರಿಟಿಶರಿಂದ ಸ್ವಾತಂತ್ರ್ಯವನ್ನು ಪಡೆದಿದ್ದುದು ನಮ್ಮ ನಾಡಿನ ಹೆಮ್ಮೆಯ ಇತಿಹಾಸ. ಮುಂದೆ ಮಡಿಕೇರಿಯನ್ನು ಲಗ್ಗೆ ಹಾಕುವ ಪ್ರಯತ್ನದಲ್ಲಿದ್ದಾಗ, ಹೋರಾಟಗಾರರ ದಂಡುಗಳು ಇಂಗ್ಲಿಶರ ಪುನರಾಯೋಜನೆಗೊಂಡ ಶಿಸ್ತುಬದ್ಧ ಸೈನ್ಯಗಳ ಮುಂದೆ ಸೋಲನ್ನು ಕಾಣುತ್ತಾರೆ. ಸಾವಿರಕ್ಕೂ ಹೆಚ್ಚು ಜನ ಬಂದಿಗಳಾಗುತ್ತಾರೆ, ವಿಚಾರಣೆಯನ್ನು ಎದುರಿಸುತ್ತಾರೆ. ನಂದಾವರ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿ ಮಂಜ, ಹೆಮ್ಮನೆ ಪುಟ್ಟಬಸಪ್ಪ ಹಾಗೂ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮರಣ ದಂಡನೆಗೆ ಒಳಪಡಿಸಲಾಗುತ್ತದೆ.

ಈ ವೇಳೆಗೆ ಕೆದಂಬಾಡಿ ರಾಮಯ್ಯ ಗೌಡ ಬಂಧನಕ್ಕೆ ಒಳಗಾಗುವುದಿಲ್ಲ. ಆತ ಹೋರಾಟವನ್ನು ಮತ್ತೆ ಕಟ್ಟುವ ಉದ್ದೇಶದಿಂದ ಶಿವಮೊಗ್ಗದ ನಗರ ಪ್ರಾಂತ್ಯದ ನಾಯಕರುಗಳನ್ನು ಭೇಟಿ ಮಾಡಲು ಹೊರಟಿದ್ದ, ಆದರೆ ನಗರದ ದಾರಿಯಲ್ಲಿ ಅವನು ಕಬ್ಬಿನಾಲೆಯಲ್ಲಿದ್ದಾಗ ಇಂಗ್ಲಿಶರಿಗೆ ಸೆರೆ ಸಿಕ್ಕುತ್ತಾನೆ. ಮುಂದೆ ಅವನಿಗೆ ಕರಿನೀರಿನ ಸಜೆಯನ್ನು ವಿಧಿಸಲಾಗುತ್ತದೆ. ಕೆದಂಬಾಡಿ ರಾಮಯ್ಯ ಗೌಡ, ಆತನ ಮಗ ಸಣ್ಣಯ್ಯ ಗೌಡ, ನಾಲ್ಕುನಾಡು ಚೆಟ್ಟಿಕುಡಿಯ, ಬಂಟ್ವಾಳದ ಬೀರಣ್ಣ ಬಂಟ, ಕೂಜುಗೋಡು ಮಲ್ಲಪ್ಪ ಗೌಡ, ಗುಡ್ಡೆಮನೆ ತಮ್ಮಯ್ಯ, ಪೆರಾಜೆ ಕೃಷ್ಣಯ್ಯ, ಕುಕ್ಕುನೂರು ಚೆನ್ನಯ್ಯ ಮುಂತಾದವರನ್ನು ಸಿಂಗಾಪುರ, ಬರ್ಮಾ ಕಡೆಗೆ ಗಡಿಪಾರು ಮಾಡುತ್ತಾರೆ. ಸಮುದ್ರದಾಚೆಗಿನ ಆ ಊರುಗಳಲ್ಲಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ರಸ್ತೆ ನಿರ್ಮಾಣದಂಥ ದೈಹಿಕ ಶ್ರಮದ ಸಾರ್ವಜನಿಕ ಸೇವೆಗಳಿಗೆ ಬಳಸಿಕೊಂಡಿದ್ದಾರೆ. ಇತರ ನೂರಾರು ಹೋರಾಟಗಾರರಿಗೆ ವಿವಿಧ ಅವಧಿಯ ಕಾರಾಗೃಹವಾಸದ ಸಜೆ ನೀಡಲಾಗುತ್ತದೆ.

ಕೆದಂಬಾಡಿ ರಾಮಯ್ಯ ಗೌಡ ಶ್ರೀಮಂತ ಜಮೀನ್ದಾರ. ಸುಳ್ಯದ ಉಬರಡ್ಕ ಮತ್ತು ಮಡಿಕೇರಿಯ ಚೆಟ್ಟಿಮಾನಿ ಎಂಬಲ್ಲಿ ಅವನಿಗೆ ಅಪಾರವಾದ ಜಮೀನುಗಳಿದ್ದವು. ಅವುಗಳನ್ನು ಬ್ರಿಟಿಶರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ರಾಮಯ್ಯ ಗೌಡನ ಮಗ ಸಣ್ಣಯ್ಯ ಗೌಡ. ಮಗಳ ಗಂಡ ಮಡಿಯಾರು ತಿಮ್ಮಯ್ಯ, ಅಣ್ಣ ಕೃಷ್ಣಪ್ಪ ಗೌಡನ ಮಕ್ಕಳು ಲಕ್ಷ್ಮಣ ಹಾಗೂ ದೇರಣ್ಣ, ಇನ್ನೊಬ್ಬ ಸಹೋದರನ ಮಗ ಸುಬ್ಬಯ್ಯ. ಇವರೆಲ್ಲರೂ ತೀವ್ರತಮ ಶಿಕ್ಷೆಗೆ ಒಳಗಾಗುತ್ತಾರೆ.

1837ರ ಹೋರಾಟವು ದಂಗೆ, ಕಾಟುಕಾಯಿ ಅಥವಾ ಬಂಡಾಯವಲ್ಲ. ಇದು ಅಂತಹ ಪರಿಭಾಷೆಗಳಿಗೆ, ಪರಿಕಲ್ಪನೆಗಳಿಗೆ ಹೊರತಾದ ಸಶಸ್ತ್ರ ಸಂಗ್ರಾಮ. ಕೆದಂಬಾಡಿ ರಾಮಯ್ಯ ಗೌಡನ ಸಮರ್ಥ ಸಂಘಟನೆಯಿಂದ ಹುಟ್ಟಿಕೊಂಡ ಮತ್ತು ಬ್ರಿಟಿಶರನ್ನು ಈ ನಾಡಿನಿಂದ ಹೊಡೆದೋಡಿಸುವ ಮಹದುದ್ದೇಶದಿಂದ ನಡೆಸಲಾದ ಅಪೂರ್ವ ಸಮರ. ಆಂಗ್ಲರ ಹೊಸ ಕಂದಾಯ ನೀತಿ, ನೂತನ ನ್ಯಾಯಾಂಗ ಪದ್ಧತಿ, ಹೊಗೆಸೊಪ್ಪು ಹಾಗೂ ಉಪ್ಪು ಮೇಲಿನ ಏಕಸ್ವಾಮ್ಯ ಇವೆಲ್ಲ ಅಂದು ಮುಖ್ಯವಾದ ವಿಚಾರಗಳಾಗಿರಲಿಲ್ಲ. ಮಿಶನರಿಗಳ ಮತಾಂತರದಿಂದ ಜನ ಕ್ರೋಧಗೊಂಡಿದ್ದರು ಎನ್ನುವುದು ಈ ದಿನದ ರಾಜಕೀಯ ಸಿದ್ಧಾಂತಕ್ಕೆ ಒಗ್ಗಿಸಲಾದ ಮಿಥ್ಯಾರೋಪವಷ್ಟೆ.

ಇಂದು ವಿಸ್ಮೃತಿಯ ತೆರೆ ಸರಿಯುತ್ತಿದೆ. ನೇಪಥ್ಯಕ್ಕೆ ನೂಕಲ್ಪಟ್ಟ ಜನ ನಾಯಕ ಕೆದಂಬಾಡಿ ರಾಮಯ್ಯ ಗೌಡನ ಪುತ್ಥಳಿಯ ಸ್ಥಾಪನೆಯೊಂದಿಗೆ ನಮ್ಮ ನಾಡಿನ ರೈತರು ಕಟ್ಟಿದ ಹೋರಾಟದ, ಅದರಲ್ಲಿ ಭಾಗಿಯಾದ ಎಲ್ಲ ಸ್ವಾತಂತ್ರ್ಯಾಕಾಂಕ್ಷಿಗಳ ನೆನಪು ನೋಡುಗರ ಮನದಲ್ಲಿ ಅನುರಣಿಸುತ್ತಲಿರುತ್ತದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಕೆ.ಆರ್. ವಿದ್ಯಾಧರ,
ವಕೀಲರು, ಕಥೆಗಾರರು

Related Articles

ಇತ್ತೀಚಿನ ಸುದ್ದಿಗಳು