ತಿರುವನಂತಪುರ: ರಾಜ್ಯಪಾಲರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಕಚೇರಿಗಳಲ್ಲಿ ಬಳಸುವ ಭಾರತಮಾತೆ ಛಾಯಾಚಿತ್ರವನ್ನು ಬಳಸಿರುವುದು ಕೇರಳದಲ್ಲಿ ವಿವಾದ ಉಂಟುಮಾಡಿದ ಬೆನ್ನಲ್ಲೇ, ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಛಾಯಾಚಿತ್ರದ ಬಳಕೆಯ ಮೇಲೆ ನಿಷೇಧ ಹೇರಿದೆ.
ರಾಜ್ಯಪಾಲರ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇವಲ ರಾಷ್ಟ್ರೀಯ ಚಿಹ್ನೆಗಳನ್ನು ಮಾತ್ರ ಬಳಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಪಾಲರ ಭವನಕ್ಕೆ ಸೂಚನೆಯನ್ನು ರವಾನಿಸಿದ್ದಾರೆ.
ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿರುವುದರಿಂದ, ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜಕೀಯ ಅಥವಾ ಧಾರ್ಮಿಕ ಚಿಹ್ನೆಗಳು ಮತ್ತು ಲಾಂಛನಗಳ ಬಳಕೆಗೆ ಸಂವಿಧಾನ ಒಪ್ಪಿಗೆ ನೀಡುವುದಿಲ್ಲ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಪಿಣರಾಯಿ ತಮ್ಮ ಸೂಚನಾಪತ್ರದಲ್ಲಿ ರಾಜಭವನಕ್ಕೆ ತಿಳಿಸಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ತಮ್ಮ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತಿರುವ ಕೇಸರಿ ಧ್ವಜವನ್ನು ಹಿಡಿದಿರುವ ಭಾರತಮಾತೆಯ ಪ್ರತಿಮೆಯನ್ನು ಇರಿಸಿಕೊಂಡಿರುವುದಕ್ಕೆ ಆಡಳಿತಾರೂಢ ಎಲ್ಡಿಎಫ್ ಮತ್ತು ವಿಪಕ್ಷ ಯುಡಿಎಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.