ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಅಲ್ಲಿನ ಚುನಾವಣಾ ಆಯೋಗದ ಕ್ರಮವೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಜಾರಿಗೊಳಿಸಿದ ಅಧಿಕೃತ ಪತ್ರವೊಂದರಲ್ಲಿ ಬಿಜೆಪಿ ಪಕ್ಷದ ಮುದ್ರೆ (Seal) ಕಂಡುಬಂದಿರುವುದು ಸಂಚಲನ ಮೂಡಿಸಿದೆ.
ಕೇಂದ್ರ ಚುನಾವಣಾ ಆಯೋಗವು 2019ರ ಚುನಾವಣಾ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಪತ್ರವೊಂದನ್ನು ಇತ್ತೀಚೆಗೆ ಕೇರಳದ ರಾಜಕೀಯ ಪಕ್ಷಗಳಿಗೆ ವಿತರಿಸಿತ್ತು. ರಾಜಕೀಯ ಪಕ್ಷಗಳ ಪ್ರಚಾರ ಮತ್ತು ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ಸರ್ಕಾರಿ ಪತ್ರದ ಮೇಲೆ ಬಿಜೆಪಿ ಪಕ್ಷದ ಸೀಲು ಇರುವುದು ಕಂಡುಬಂದಿದೆ.
ಈ ಪತ್ರದ ಫೋಟೋವನ್ನು ಸಿಪಿಎಂ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. “ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ ಒಳಸಂಚು ನಡೆದಿದೆ ಎಂಬ ಆರೋಪಗಳು ಮೊದಲೇ ಇದ್ದವು, ಈಗ ಆಯೋಗದ ಪತ್ರದ ಮೇಲೆಯೇ ಬಿಜೆಪಿ ಸೀಲು ಇರುವುದು ಅನುಮಾನಗಳನ್ನು ಪುಷ್ಠೀಕರಿಸುತ್ತಿದೆ. ಬಿಜೆಪಿ ಈಗ ತನ್ನೆಲ್ಲಾ ನಾಟಕಗಳನ್ನು ಬಿಟ್ಟು ಬಹಿರಂಗವಾಗಿ ಆಯೋಗವನ್ನು ಬಳಸಿಕೊಳ್ಳುತ್ತಿದೆಯೇ?” ಎಂದು ಸಿಪಿಎಂ ಪ್ರಶ್ನಿಸಿದೆ.
ಈ ವಿವಾದದ ಬಗ್ಗೆ ಕೇರಳದ ಮುಖ್ಯ ಚುನಾವಣಾಧಿಕಾರಿ (CEO) ರತನ್ ಯು. ಕೇಲ್ಕರ್ ಪ್ರತಿಕ್ರಿಯಿಸಿದ್ದಾರೆ. ಇದೊಂದು “ಕ್ಲರಿಕಲ್ ತಪ್ಪು” (ಕಚೇರಿ ಮಟ್ಟದ ಗುಮಾಸ್ತರ ತಪ್ಪು) ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. “ಬಿಜೆಪಿಯ ಕೇರಳ ಘಟಕವು ಚುನಾವಣಾ ಮಾರ್ಗಸೂಚಿಗಳ ಬಗ್ಗೆ ವಿವರಣೆ ಕೋರಿ ನಮ್ಮ ಕಚೇರಿಗೆ ಭೇಟಿ ನೀಡಿತ್ತು. ಆ ಸಮಯದಲ್ಲಿ ಅವರು ಸಲ್ಲಿಸಿದ ಅರ್ಜಿಯೊಂದಿಗೆ ಲಗತ್ತಿಸಿದ್ದ ಇಸಿಐ ಪತ್ರದ ಪ್ರತಿಯಲ್ಲಿ ಬಿಜೆಪಿ ಮುದ್ರೆ ಇತ್ತು. ಅದನ್ನೇ ನಮ್ಮ ಸಿಬ್ಬಂದಿ ಅಚಾತುರ್ಯದಿಂದ ಇತರ ರಾಜಕೀಯ ಪಕ್ಷಗಳಿಗೂ ವಿತರಿಸಿದ್ದಾರೆ,” ಎಂದು ಕೇಲ್ಕರ್ ವಿವರಣೆ ನೀಡಿದ್ದಾರೆ.
ಕೇರಳದಲ್ಲಿ ಸೋಮವಾರದಂದು ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ಬೆನ್ನಲ್ಲೇ ಈ ಮುದ್ರೆ ವಿವಾದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
