Tuesday, May 13, 2025

ಸತ್ಯ | ನ್ಯಾಯ |ಧರ್ಮ

ಕೆಜಿ ಸುಬ್ರಹ್ಮಣ್ಯನ್:‌ ಚಿತ್ರಕಲಾ ಪರಿಷತ್‌ನಲ್ಲಿ ಚಿಂತಕನೊಬ್ಬನ ಕಲಾಕೃತಿಗಳ ಪ್ರದರ್ಶನ

ಕಲೆ ಮನುಷ್ಯರ ಬದುಕಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವಂತಹದ್ದು, ಭಾಷೆಗೂ ಮೊದಲು ಹುಟ್ಟಿದ ಸಂಭಾಷಣೆ ಕಲೆ. ʼಗುಹಾ ಚಿತ್ರʼಗಳಿಂದ ಹಿಡಿದು, ಪ್ರಕೃತಿಯ ಆಳದಿಂದ ಮನುಷ್ಯರ ಬಾಳಿಗೆ ಇಳಿದ ಶಬ್ದ ತರಂಗಳವರೆಗೆ ಕಲೆಯ ಸಾಧ್ಯತೆಗಳು ಅಪರಿಮಿತ. ಹಲವು ಭಾಷೆಗಳ ಲಿಪಿಗಳು ಚಿತ್ರಗಳನ್ನೇ ಅಕ್ಷರಗಳಾಗಿಸಿದಂತಿರುವುದು ಇದಕ್ಕೆ ಸಾಕ್ಷಿ.

ಮಕ್ಕಳು ಹುಟ್ಟುತ್ತಲೇ ವಿಶ್ವಮಾನವರಾಗಿರುತ್ತಾರೆ, ಬೆಳೆಯುತ್ತಾ ಬೆಳೆಯುತ್ತಾ ನಾವು ಅವರನ್ನು ಅಲ್ಪಮಾನವರಾಗಿಸುತ್ತೇವೆ ಎಂದವರು ನಮ್ಮ ಕುವೆಂಪು. ಅಂತೆಯೇ, ಮಕ್ಕಳು ಹುಟ್ಟುತ್ತಲೇ ಕಲಾವಿದರು ಆಗಿರುತ್ತಾರೆ ಅನ್ನಬಹುದು. ಅಥವಾ ಮಕ್ಕಳ ಸೃಜನಶೀಲತೆಯ ವೈವಿಧ್ಯತೆಗಳನ್ನು ಅರಗಿಸಲು ಸಾಧ್ಯವಾಗದ ನಾವು ಅವರನ್ನು ನಮ್ಮದೇ ಹಳಸಲು ಕಣ್ಣಿಂದ ನೋಡಿ, ಒಳಗಣ್ಣಿಂದ ನೋಡಲಾಗದೆ ಸೋತು ಹೋಗುತ್ತೇವೆ. ಅವರ ದಾರಿಗಳನ್ನು ಮೊಟಕುಗೊಳಿಸುತ್ತೇವೆ. ಇವೆಲ್ಲವನ್ನೂ ಮೀರಿ ಆಧುನಿಕ ಲೋಕದಲ್ಲಿ ತಮ್ಮೊಳಗೆ ಕಲೆಯ ರಸಸ್ವಾಧವನ್ನು ಆವಾಹಿಸಿಕೊಳ್ಳುವವರು ವಿರಳ. ಅದರಲ್ಲೂ ಸಾಮಾಜಿಕವಾಗಿ, ರಾಜಕೀಯವಾಗಿ ಕಲೆಯ ಅಗತ್ಯವನ್ನು ಅರಿತಿರುವ ಕಲಾವಿದರು ಅಪರೂಪ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಖ್ಯಾತ ಚಿತ್ರ ಕಲಾವಿದ ‘ಕೆ ಜಿ ಸುಬ್ರಹ್ಮಣ್ಯನ್’ ಅವರ ವರ್ಣಚಿತ್ರಗಳ ಪ್ರದರ್ಶನ “ಒನ್ ಹಂಡ್ರೆಡ್ ಇಯರ್ಸ್ ಅಂಡ್ ಕೌಂಟಿಂಗ್: ರಿ-ಸ್ಕ್ರಿಪ್ಟಿಂಗ್ ಕೆ.ಜಿ. ಸುಬ್ರಹ್ಮಣ್ಯನ್” ಎಂಬ ಪರಿಕಲ್ಪನೆಯೊಂದಿಗೆ ‘ಎಮಾಮಿ ಆರ್ಟ್ ಗ್ಯಾಲರಿʼ ಮತ್ತು ʼಸೀಗಲ್ ಫೌಂಡೇಶನ್ ಫಾರ್ ದ ಆರ್ಟ್ಸ್ʼ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿದೆ.

ಎಪ್ರಿಲ್‌ 5, 2025 ರಂದು ಆರಂಭವಾಗಿರುವ ಈ ಪ್ರದರ್ಶನವು ಮೇ 20, 2025 ವರೆಗೆ ನಡೆಯಲಿದೆ. ಇದನ್ನು ಖ್ಯಾತ ಕ್ಯುರೇಟರ್ ‘ನ್ಯಾನ್ಸಿ ಅಡಜಾನಿಯʼ ಕ್ಯುರೇಟ್‌ ಮಾಡಿದ್ದಾರೆ.

ಮುಂಬಯಿಯಲ್ಲಿ ನೆಲೆಸಿರುವ ನ್ಯಾನ್ಸಿ ಖ್ಯಾತ ಕಲಾವಿದರಾದ ನವಜೋತ್ ಅಲ್ತಾಫ್, ಸುಧೀರ್ ಪಟವರ್ಧನ್, ಮೆಹ್ಲಿ ಗೋಬಾಯ್ ಮತ್ತು ನೆಲ್ಲಿ ಸೇತ್ನಾ ಅವರುಗಳ ಜೀವಮಾನ ಸಾಧನೆಯ ಕುರಿತು ಸಂಶೋಧಾನಾತ್ಮಕ ಪ್ರದರ್ಶನಗಳನ್ನು ಏರ್ಪಡಿಸಿದ ಅನುಭವವನ್ನು ಹೊಂದಿದ್ದಾರೆ. ಭಾರತದ ಸ್ತ್ರೀವಾದಿ ಚಳುವಳಿಯ ಹಿನ್ನೆಲೆಯಲ್ಲಿ ʼವುಮೆನ್‌ ಈಸ್‌ ಆಸ್‌ ವುಮೆನ್‌ ಡಸ್‌ʼ ಎಂಬ ಮಹತ್ವದ ಕಲಾ ಪ್ರದರ್ಶನವನ್ನು ಸಂಯೋಜಿಸಿದ್ದಾರೆ. ಉಪಕಥನಗಳು (ಸಬಾಲ್ಟಾರ್ನ್), ಮಾಧ್ಯಮ ಕಲೆ, ಜನಪರ ಕಲೆ, ಸಹಯೋಗದ ಕಲೆ, ಬಹುಸಾಂಸ್ಕೃತಿಕ ಕಲೆಗಳ ಜೊತೆಗೆ ಕಲಾ ಇತಿಹಾಸ, ಸ್ತ್ರೀವಾದಿ ತತ್ವ, ಮಾನವಶಾಸ್ತ್ರ, ಸಾಮಾಜಿಕ ಪ್ರಜ್ಞೆ ಮತ್ತು ತತ್ವಶಾಸ್ತ್ರಗಳ ಕುರಿತು ಹೊಸ ತಾತ್ವಿಕ ಮಾದರಿಗಳನ್ನು ತಮ್ಮ ವಿಸ್ತೃತ ಬರವಣಿಗೆಯ ಮೂಲಕ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ.

ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ನ್ಯಾನ್ಸಿ ಅಡಜಾನಿಯವರು ಕೆ ಜಿ ಸುಬ್ರಹ್ಮಣ್ಯನ್ ಅವರ ಕಲಾ ಲೋಕದ ಆಳ, ಅಗಲ ಮಾತ್ರವಲ್ಲದೇ, ಅದರಲ್ಲಿನ ದ್ವಂದ್ವ ನಿಲುವುಗಳ ಬಗ್ಗೆ ಕೂಡಾ ತುಂಬಾ ವಿವರವಾಗಿ ಮತ್ತು ವಿಮರ್ಶಾತ್ಮಾಕವಾಗಿ ಬೆಳಕು ಚೆಲ್ಲಿದ್ದಾರೆ. ಸುಬ್ರಹ್ಮಣ್ಯನ್ ಅವರ ಆಕ್ರಿಲಿಕ್ ಮಾಧ್ಯಮದ ಹಿಮ್ಮುಖ ಚಿತ್ರಕಲೆಯನ್ನು ಮತ್ತು ಅಂಚೆಪತ್ರ ಅಳತೆಯ ರೇಖಾಚಿತ್ರಗಳನ್ನು ಪ್ರಸ್ತುತಪಡಿಸುತ್ತಲೇ, ಅವರ ಕೃತಿ ನಿರ್ಮಿತಿಯ ಕುರಿತಾದ ಗುರುತರವಾದ ಮೊತ್ತದ ಪತ್ರಾಗಾರದ ವಸ್ತುವಿಷಯಗಳನ್ನು ಕುರಿತೂ ಸಹ ನೋಡುಗರ ಮತ್ತು ಕೇಳುಗರ ಗಮನ ಸೆಳೆಯುವುದು ಸಹ ಈ ಚಿತ್ರ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಅಡಜಾನಿಯವರು.

ಚಿತ್ರಕಲಾವಿದನ ಸುತ್ತ ಹೀರೋ ಎಂಬ ಪ್ರಭಾವಳಿಯನ್ನು ಸೃಷ್ಟಿಸಿ, ಆತನ ಕಲೆಯ ನೈಜವಾದ ವಿಮರ್ಶೆ ಮಾಡದಿರುವುದು ಕಲಾವಿದನಿಗೆ ಬಗೆದ ದ್ರೋಹ. ನ್ಯಾನ್ಸಿಯವರು ಈ ಪ್ರದರ್ಶನದಲ್ಲಿ ಕೆಜಿಎಸ್‌ ಅವರ ಕಲೆಯ ಮೂಲಕ ಅವರಿಗೆ ಮಹಿಳೆಯರ ದೇಹದ ಬಗ್ಗೆ ಇದ್ದ ಪೂರ್ವಾಗ್ರಹಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಅನೇಕ ಕಲಾಕೃತಿಗಳಲ್ಲಿ ಮಹಿಳೆಯರ ಬಗ್ಗೆ ಮತ್ತು ಲೈಂಗಿಕತೆಯ ಬಗ್ಗೆ ಇರುವ ದ್ವಂದ್ವ ದೃಷ್ಟಿಕೋನಗಳನ್ನು ನೋಡಬಹುದು.

ಕೆ ಜಿ ಎಸ್ ೧೯೨೪ ರಲ್ಲಿ ಕೇರಳದ ʼʼಕೂತುಪರಂಬ್‌ʼನಲ್ಲಿ ಹುಟ್ಟಿದರು. ಆರಂಭದಲ್ಲಿ ಗಾಂಧೀಜಿಯ ಪ್ರಬಾವಕ್ಕೊಳಗಾದ ಇವರು ಸ್ವಲ್ಪಕಾಲ ಸೆರೆವಾಸವನ್ನು ಅನುಭವಿಸಿದ್ದಲ್ಲದೇ, ಮುಂದಿನ ವಿಧ್ಯಾಭ್ಯಾಸಕ್ಕಾಗಿ ಯಾವುದೇ ಸರಕಾರಿ ಕಾಲೇಜಿಗೆ ಸೇರದಂತೆ ಬ್ರಿಟೀಷ್‌ ಸರಕಾರ ಇವರ ಮೇಲೆ ನಿರ್ಬಂಧವನ್ನೂ ಹೇರಿತ್ತು. ಅಧ್ಯಯನಕ್ಕಾಗಿ ಠಾಗೋರರ ಶಾಂತಿನಿಕೇತನದ ಕಲಾಭವನಕ್ಕೆ ಸೇರ್ಪಡೆಯಾದದ್ದು ಒಬ್ಬ ಕಲಾವಿದನಾಗಿ ಅವರ ಜೀವನದ ಮಹತ್ವದ ತಿರುವು ನೀಡಿತ್ತು. ತದನಂತರ ಅವರು ಲಂಡನ್ನಿನ ʼಸ್ಲೇಡ್‌ ಸ್ಕೂಲ್‌ ಆಫ್‌ ಆರ್ಟ್‌ʼ ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದ್ದರು.

ಬರೋಡಾದ ಎಂ ಎಸ್‌ ವಿಶ್ವವಿಧ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ಸುಬ್ರಹ್ಮಣ್ಯನ್ ರವರು 1962 ರಿಂದ 1979 ರ ವರೆಗೂ ಅಲ್ಲಿನ ಲಲಿತಕಲಾ ಮೇಳದಲ್ಲಿ ತಯಾರಿಸಲಾದ ಬೊಂಬೆಗಳನ್ನು ಸಹ ಈ ಚಿತ್ರಕಲಾ ಪ್ರದರ್ಶನದಲ್ಲಿ ಇಡಲಾಗಿದೆ. ಇವಲ್ಲದೇ, ಇಲ್ಲಿಯವರೆಗೂ ನೋಡಿರದ, ಕೆಜಿಎಸ್ ಅವರನ್ನು ಕುರಿತಾದ ಪತ್ರಾಗಾರದ ಸಾಮಗ್ರಿಗಳಾದ ಮಕ್ಕಳ ಪುಸ್ತಕಗಳ ಬಗ್ಗೆ ಕರಕುಶಲ ಮಾಕ್-ಆಪ್ಗಳು, ಭಿತ್ತಿಚಿತ್ರಗಳ ಸೃಷ್ಟಿಗಾಗಿ ಅವಶ್ಯಕವಿರುವ ಆರಂಭಿಕ ಕರಡು ರೇಖಾಚಿತ್ರಗಳು ಮತ್ತು ಅವರ ಸಶಕ್ತ ಭಿತ್ತಿಚಿತ್ರ ‘ದ ವಾರ್ ಆಫ್ ದ ರೆಲಿಕ್ಸ್’ (2012) ಗಾಗಿ ನಿರ್ಮಿಸಲಾದ ‘ಮೆಕೆ’ (ಕಿರು ಮೂಲಮಾದರಿ) ಸಹ ಇಲ್ಲಿವೆ.

ಅವರ ರಾಜಕಾರಣ ತಾತ್ವಿಕತೆಯು ಒಂದು ನಿರಂತರ ಕ್ರಿಯೆಯಾಗಿದ್ದು, ಕಿರು ಪ್ರಕಾರವಾಗಿ ಹೊರ ಹೊಮ್ಮಿರುವ ಅವರ ಮಕ್ಕಳ ಕೃತಿಗಳಲ್ಲಿಯೂ ಈ ಸತ್ವವು ಅಡಕವಾಗಿಹುದು. ಇದನ್ನು ಈ ಕಲಾವಿದ ಸುದೀರ್ಘ ಕಾಲಾವಧಿಯಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಇವರ ‘ಸುಪ್ತಾವಸ್ತೆಯ ಕನಸʼನ್ನು ಪ್ರದರ್ಶಿಸುವ      ಬೊಂಬೆಗಳಲ್ಲೂ ಈ ಅಂಶಗಳು ಕಂಡುಬರುತ್ತವೆ. ಭವಿಷ್ಯದ ಜನಾಂಗಗಳು ಸಾಮಾಜಿಕ, ರಾಜಕೀಯ ಪ್ರಕ್ರಿಯೆಗಳಿಗೆ ತೆರೆದುಕೊಳ್ಳಬೇಕಾದ ಅಗತ್ಯಗಳ ಬಗ್ಗೆ ಕೆಜಿಎಸ್‌ ಅವರಿಗಿದ್ದ ಕಾಳಜಿ ಅವರ ಕಲೆಯಲ್ಲಿ ವ್ಯಕ್ತವಾಗುತ್ತದೆ.

ಕೆ.ಜಿ. ಸುಬ್ರಹ್ಮಣ್ಯನ್ ಅವರ ಶತಮಾನೋತ್ಸವ ಪ್ರದರ್ಶನದ ಎರಡನೇ ಆವೃತ್ತಿಯಾದ ಇದು ಮೊದಲಿಗೆ ಕೊಲ್ಕೊತ್ತದ ಇಮಾಮಿ ಆರ್ಟ್ ಕೇಂದ್ರದಲ್ಲಿ ಪ್ರದರ್ಶಿತವಾಗಿತ್ತು. ಈ ಬೆಂಗಳೂರಿನ ಆವೃತ್ತಿಯು ಕೊಲ್ಕೊತ್ತಾದ ಪ್ರದರ್ಶನದ ವಿಸ್ತೃತ ರೂಪವಾಗಿದ್ದ, ಇದರಲ್ಲಿ ಹೆಚ್ಚುವರಿ ಕೃತಿಗಳನ್ನು ಸೇರಿಸಲಾಗಿದೆ. ಕೆಜಿಎಸ್ ಅವರ ಪ್ರಮುಖ ಚಿತ್ರಕೃತಿಗಳಾದ ‘ಚಿನ್ನಮಸ್ತ’ (1991), ‘ಗರ್ಲ್ ವಿತ್ ಕ್ಯಾಟ್ ಬಾಯ್’ (1991), ‘ಬಿರ್ಭುಮ್ ನೇಟಿವಿಟಿ’ (1991), ‘ದೇವಿ ೨ ಮತ್ತು ೩’ (2008) ಮತ್ತು ‘ಮಾಡೋನ ಅಂಡ್ ಚೈಲ್ಡ್’ (2005) ಅಂತಹ ಕೃತಿಗಳೊಂದಿಗೆ ಮತ್ತಷ್ಟು ಕೃತಿಗಳೂ ಇಲ್ಲಿವೆ. ಈ ಬೆಂಗಳೂರು ಆವೃತ್ತಿಯು ಕೆಜಿಎಸ್‌ರವರ ಪಿರಾಮೆಲ್ ಆರ್ಟ್ ಫೌಂಡೇಶನ್ಗೆ ಸೇರಿದ 1960ರ ಮಧ್ಯಭಾಗದ ಐತಿಹಾಸಿಕ ಪೋಸ್ಟ್ ಕ್ಯೂಬಿಸ್ಟ್ ಕೃತಿಗಳನ್ನೂ ಒಳಗೊಂಡಿವೆ. ಈ ನಿರ್ಮಿತಿಗಳು ಕಲಾ ಪರಿಣಿತನ ಮೇರುಕೃತಿಗಳ ಪ್ರಮುಖ ಪರಿವರ್ತನ ಹಂತವನ್ನು ಪ್ರತಿನಿಧಿಸುತ್ತವೆ. ಜೊತೆಗೆ ಕೆಜಿಎಸ್ ಅವರ ಮತ್ತೊಂದು ಸರಣಿಕೃತಿ ‘ಅಟ್ ದ ಜಿಂಚೆಂಗ್ ಹೋಟೆಲ್: ಡ್ರಾಯಿಂಗ್ ಫ್ರಮ್ ಚೈನಾ’ (1985) ಚೈನಾದ ಸಣ್ಣಪುಟ್ಟ ಹಳ್ಳಿ ಪಟ್ಟಣಗಳಲ್ಲಿನ ದೈನಂದಿನ ಜನಜೀವನವನ್ನು ಕುರಿತಾದ ಸೂಕ್ಷ್ಮಗಳನ್ನು ಕಟ್ಟಿಕೊಡುವ ಕೃತಿಸರಣಿ ಸ್ಥಳೀಯ ಸೂಕ್ಷ್ಮಇತಿಹಾಸದ ಮೇರುಕೃತಿಯಾಗಿ ಪ್ರದರ್ಶನದಲ್ಲಿದೆ.

ಕೆ ಜಿ ಸುಬ್ರಹ್ಮಣ್ಯನ್ ಸೃಜನಶೀಲತೆಯನ್ನು ಅದರ ಎಲ್ಲಾ ವೈವಿಧ್ಯತೆಗಳೊಂದಿಗೆ ಅನಾವರಣ ಮಾಡಿದ ಕಲಾವಿದ. ಲೇಖಕ, ದೃಶ್ಯಚಿಂತಕ ಹಾಗು ಶಿಕ್ಷಣ ತಜ್ಞರೂ ಆಗಿದ್ದ ಕೆಜಿಎಸ್ ಕಲಾತ್ಮಕತೆಯ ಅಪರಿಮಿತ ಸಾಧ್ಯತೆಗಳನ್ನು ಸಮೃದ್ಧಗೊಳಿಸಿದ ಆಧುನಿಕ ಕಲಾವಿದರಲ್ಲಿ ಅತ್ಯಂತ ಪ್ರಮುಖ ಹೆಸರು. ಕೆಜಿಎಸ್ ಎಂಬ ಸೃಜನಶೀಲ ಮೇಧಾವಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ಪ್ರಸ್ತುತ ಪ್ರದರ್ಶನವು ಅನಾವರಣಗೊಳಿಸುತ್ತಾ, ಇವರ ಕುರಿತು ಇಲ್ಲಿಯವರೆಗೂ ನೆಲನಿಂತಿರುವ ರೂಢಿಗತ ಅರಿವನ್ನು ಕೆಡವಿ ಮತ್ತೆ ಕಟ್ಟಲು ಪ್ರೇರೇಪಿಸುತ್ತದೆ.

ನಮ್ಮ ಗತ ಇತಿಹಾಸವನ್ನು ಆರೋಗ್ಯಕರ ವಿಮರ್ಶೆಯ ಮಾದರಿಗಳಾಗಿ ಕಾಣಬೇಕೇ ಹೊರತು ಉಸಿರುಗಟ್ಟಿಸುವ ಸಂಪ್ರದಾಯವಾಗಿಯಲ್ಲ ಎಂದು ಸುಬ್ರಹ್ಮಣ್ಯನ್ ಅವರು ನಮಗೆ ಕಲಿಸಿದ ಪಾಠವು ಇಂದು ಬಹಳ ಪ್ರಸ್ತುತವಾಗಿದೆ. ಈ ಪಾಠ ಅವರದೇ ಕಲಾಕೃತಿಗಳನ್ನು ನೋಡುವಾಗಲು ಅನ್ವಯವಾಗುತ್ತದೆ.

ಪ್ರಸ್ತುತ ರಾಜಕೀಯ ಮತ್ತು ಸಾಂಸ್ಕೃತಿಕ ಯುದ್ಧದಲ್ಲಿ ಭೂತಕಾಲವನ್ನು, ಪುರಾತನವನ್ನು ಸಶಸ್ತ್ರಗೊಳಿಸಿ ಯುದ್ದಕ್ಕೆ ನಿಲ್ಲಿಸಲಾಗಿದೆ. ಯಾರು ಇಲ್ಲಿ ಒಳಗೊಳ್ಳುತ್ತಾರೆ, ಯಾರು ಹೊರಗುಳಿಯುತ್ತಾರೆ ಎಂಬುದನ್ನೂ ನಿರ್ಧರಿಸಲಾಗುತ್ತಿದೆ. ಇಂತಹ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ, ಸುಬ್ರಹ್ಮಣ್ಯನ್ ಅಂತಹ ಕಲಾವಿದ-ಕಲಾ ಚಳುವಳಿಕಾರರ ಕೃತಿಸಮುಚ್ಛಯದಲ್ಲಿ ಅಡಕವಾಗಿರುವ ಅಭಿವ್ಯಕ್ತಿ ಕ್ರಮವನ್ನು ಪುನರ್ ಭೇಟಿ ಮಾಡುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ನ್ಯಾನ್ಸಿ ಅಡಜಾನಿ.

ಈ ಪ್ರದರ್ಶನದಲ್ಲಿ ಕೆಜಿಎಸ್‌ ಅವರ ರಾಜಕೀಯ ಕೃತಿಗಳನ್ನು ನೋಡಬಹುದು. ಉದಾಹರಣೆಗೆ 1971 ರ ಬಾಂಗ್ಲಾದೇಶ ಯುದ್ಧವನ್ನು ನೆನಪಿಸುವ ಟೆರಾಕೋಟಾಗಳು ಮತ್ತು ಮಕ್ಕಳಿಗಾಗಿ ಬರೆದ ಪುಸ್ತಕ ‘ದಿ ಟಾಕಿಂಗ್ ಫೇಸ್’ ನಲ್ಲಿ ಇರುವ 1975-1977 ರ ತುರ್ತು ಪರಿಸ್ಥಿತಿಯ ಕಟುವಾದ ವಿಮರ್ಶೆ. ಈ ಕೃತಿಗಳು ರಾಜಕೀಯ ಸಂದರ್ಭಗಳಿಗೆ ನೀಡಿದ ಪ್ರತಿಕ್ರಿಯೆಯಾಗಿ ಕಂಡರೂ,  ಇದು ಅವರ ರಾಜಕೀಯ ತಾತ್ವಿಕೀಕರಣದ ನಿರಂತರ ಪ್ರಕ್ರಿಯೆಯಾಗಿ ಕಾಣುತ್ತದೆ.

ಈ ಚಿತ್ರ ಪ್ರದರ್ಶನವು ಈ ಮೊದಲು ಕಲ್ಕತ್ತಾದಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರದರ್ಶನವು ಹೆಚ್ಚು ಸಂಕೀರ್ಣವೂ, ವಿಶಾಲವೂ ಆಗಿದೆ.

ಲೇಖನ: ಗುರು ಸುಳ್ಯ

Related Articles

ಇತ್ತೀಚಿನ ಸುದ್ದಿಗಳು

You cannot copy content of this page