ಬೀದರ್ : ಶಾಸಕ ಪ್ರಭು ಚವ್ಹಾಣ್ ನನ್ನ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದ್ದು, ಇದರಿಂದ ನನಗೆ ಆಘಾತವಾಗಿದೆ. ಇದರ ಬಗ್ಗೆ ಸಾರ್ವಜನಿಕವಾಗಿ ಉತ್ತರಿಸಿ ಪಕ್ಷಕ್ಕೆ ಮುಜುಗರ ತರುವುದಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಈಚೆಗೆ ಬಿಜೆಪಿಯ ಕಾರ್ಯಕಾರಿಣಿಸಭೆಯಲ್ಲಿ ಮಾತನಾಡಿದ ಅವರು, ವರಿಷ್ಠರು ಅನುಮತಿ ನೀಡಿದರೆ ಚವ್ಹಾಣ್ ವಿರುದ್ಧ 100 ಕೋಟಿ ರು.ಗಳ ಮಾನಹಾನಿ ಮೊಕದ್ದಮೆ ಹೂಡುವ ವಿಚಾರ ಮಾಡಿದ್ದು, ತಮ್ಮ ಕ್ಷೇತ್ರಕ್ಕೆ ಉಪಚುನಾವಣೆ ಮಾಡಿಸುವ ಮತ್ತು ಅದಕ್ಕಾಗಿ ನನ್ನನ್ನು ರಸ್ತೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡುವ ಮಾತು ಭಗವಂತ ಖೂಬಾ ಆಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಖೂಬಾ, ಬಿಜೆಪಿ ಶಿಸ್ತಿನ ಪಕ್ಷ, ಒಂದೆಡೆ ಕುಳಿತು ಸಮಸ್ಯೆ ಬಗೆಹರಿಯುತ್ತೆ ಎಂದು ನಂಬಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡುವುದಾಗಲಿ, ಅವರ ಮೇಲೆ ಆರೋಪ ಮಾಡುವುದಾಗಲಿ ಮಾಡಲಿಲ್ಲ. ಕೇಂದ್ರ ಮತ್ತು ರಾಜ್ಯದ ವರಿಷ್ಠರ ಗಮನಕ್ಕೆ ಈ ವಿಷಯ ಬಂದಿದೆ. ವರಿಷ್ಠರು ನನಗೆ ಕರೆ ಮಾಡಿ ಸಮಾಧಾನ ಮಾಡಿದ್ದು, ನಾನು ವರಿಷ್ಠರ ಗಮನಕ್ಕೆ ಎಲ್ಲವನ್ನೂ ತಂದಿದ್ದೇನೆ ಎಂದು ವಿವರಿಸಿದರು.
ಚವ್ಹಾಣ್ರನ್ನು ಕರೆಸಿ ಮಾತನಾಡಿ, ಸಮಾಧಾನದ ಉತ್ತರ ಕೊಡಿಸುವ ಭರವಸೆ ನೀಡಿದ್ದು, ಒಂದು ವೇಳೆ ನನಗೆ ಸಮಾಧಾನ ಆಗದಿದ್ದಲ್ಲಿ, ವರಿಷ್ಠರು ಅನುಮತಿ ನೀಡಿದಲ್ಲಿ ಅವರ ಮೇಲೆ 100 ಕೋಟಿ ರು.ಗಳ ಮಾನಹಾನಿ ಮೊಕದ್ದಮೆ ಹೂಡುವ ವಿಚಾರ ಮಾಡಿದ್ದೇನೆ ಎಂದು ಸೂಚಿಸಿದರು.