Monday, June 17, 2024

ಸತ್ಯ | ನ್ಯಾಯ |ಧರ್ಮ

ಕಿರಂ ನೆನಪು: ಕಾಡುವ ಕಿ ರಂ ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ಪ್ರಶಸ್ತಿ ಪ್ರಧಾನ

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಿ ರಂ ನಾಗರಾಜ ಅವರ ನೆನಪಿನ ಕಾರ್ಯಕ್ರಮವನ್ನು ಈ ಬಾರಿಯೂ ಆಯಫಜಿಸಲಾಗಿದ್ದು ಇದೇ ತಿಂಗಳ 7ನೇ ತಾರೀಖಿನಂದು ಇಲ್ಲಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಅದು ರಾತ್ರಿಯಿಡೀ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಗಣ್ಯರಿಗೆ ಸನ್ಮಾನ ಮತ್ತು ಹಲವು ಕವಿಗೋಷ್ಟಿಗಳೂ ನಡೆಯಲಿವೆ.

ಕಾರ್ಯಕ್ರಮದಲ್ಲಿ ನಾಡಿನ ಹಿರಿಯ, ಕಿರಿಯ ಕವಿ, ವಿದ್ವಾಂಸರು, ಚಿಂತಕರು, ಚಿತ್ರ ಕಲಾವಿದರು, ಗಾಯಕರು ಪಾಲ್ಗೊಳ್ಳಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ನಾಡಿನ ಹಲವು ಕ್ಷೇತ್ರಗಳ ಹಿರಿಯರಿಗೆ 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಖ್ಯಾತ ವಿಚಾರವಾದಿಗಳಾದ ಪ್ರೊ.ನರೇಂದ್ರ ನಾಯಕ್, ಹಿರಿಯ ಚಿತ್ರ ಕಲಾವಿದರಾದ ಸಿ.ಎಸ್.ನಿರ್ಮಲಕುಮಾರಿ, ಹಿರಿಯ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಆರ್.ಜಿ.ಹಳ್ಳಿ ನಾಗರಾಜ್, ಹಿರಿಯ ಸಾಹಿತಿಗಳಾದ ನಾಗತಿಹಳ್ಳಿ ರಮೇಶ್, ಸಾಹಿತ್ಯ ಪರಿಚಾರಕರಾದ ಡಾ. ನಾಗೇಶ್ ದಸೂಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ

ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಜನಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರದೀಪ್ ಮಾಲ್ಗುಡಿ ಆಹ್ವಾನಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯ

ಪ್ರೊ.ನರೇಂದ್ರ ನಾಯಕ್, ವಿಚಾರವಾದಿಗಳು
ಮಂಗಳೂರು ಮೂಲದ ಪ್ರೊ.ನರೇಂದ್ರ ನಾಯಕ್ ಅವರು, ಫೆ. 5, 1951ರಂದು ಜನಿಸಿದರು. ಕಳೆದ ಮೂರು ದಶಕಕ್ಕೂ ಹೆಚ್ಚು ಅವಧಿಯಿಂದ ಸಮಾಜದಲ್ಲಿ ಜಾರಿಯಲ್ಲಿರುವ ಮೂಢನಂಬಿಕೆಯ ವಿರುದ್ಧ ಇವರು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ವೈಜ್ಞಾನಿಕ ಮನೋಭಾವನೆಯನ್ನು ಸಮಾಜದಲ್ಲಿ ತುಂಬುವುದೇ ಇವರ ಧ್ಯೇಯೋದ್ದೇಶವಾಗಿದೆ. ಭಾರತದ ವಿವಿಧ ರಾಜ್ಯಗಳು, ಆಸ್ಟ್ರೇಲಿಯಾ, ಗ್ರೀಸ್, ಇಂಗ್ಲೆಂಡ್, ನಾರ್ವೆ, ಡೆನ್ಮಾರ್ಕ್, ಶ್ರೀಲಂಕಾ, ನೇಪಾಳ ಮೊದಲಾದ ದೇಶಗಳಲ್ಲಿ ಮೂಢನಂಬಿಕೆ ವಿರೋಧಿಸುವ 2000ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿರುವುದು ಇವರ ಸಾಧನೆ. ನಕಲಿ ಬಾಬಾಗಳು, ಸ್ವಯಂಘೋಷಿತ ದೇವಮಾನವರು, ಜ್ಯೋತಿಷ್ಯ, ಭವಿಷ್ಯ, ವಾಸ್ತ್ರಶಾಸ್ತ್ರ ಇತ್ಯಾದಿಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಮತ್ತು ಜೀವಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ.

ನಿರ್ಮಲ ಕುಮಾರಿ ಸಿ.ಎಸ್.

ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ನಿರ್ಮಲಾಕುಮಾರಿ ಚಿತ್ರಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡವರು. ಬೆಂಗಳೂರಿನ ಪ್ರತಿಷ್ಠಿತ ಕೆನ್ ಕಲಾ ಶಾಲೆಯಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಪ್ರೊ.ಕಿ.ರಂ.ನಾಗರಾಜ ಅವರಂತೆಯೇ ನೂರಾರು ಶಿಷ್ಯರಿಗೆ ಕಲೆಯ ಪಾಠವನ್ನು ಹೇಳಿದವರು ನಿರ್ಮಲಾ. ಅವರ ಶಿಷ್ಯರು ಕಲಾವಿದರಾಗಿ ಬೆಳೆದಿದ್ದರೂ, ಇಂದಿಗೂ ನಿರ್ಮಲಾ ಅವರ ಬೋಧನಾ ಕ್ರಮವನ್ನು ನೆನಪಿಸಿಕೊಳ್ಳುತ್ತಾರೆ. ಅವರಿಗೆ ಸೌತ್ ಝೋನ್ ಕ್ಯಾಮಲಿನ್ ಫೌಂಡೇಶನ್ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಲಭಿಸಿವೆ.

ಸುಬ್ಬು ಹೊಲೆಯಾರ್

ಸುಬ್ಬು ಹೊಲೆಯಾರ್ ಎಂದೇ ನಾಡಿನಾದ್ಯಂತ ಖ್ಯಾತರಾಗಿರುವ ಹೆಚ್.ಕೆ.ಸುಬ್ಬಯ್ಯ ಇವರು ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ 21-09-1962 ರಂದು ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಜನಿಸಿದರು. ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು ಎಂಬ ಕವನ ಸಂಕಲನವನ್ನು 2003 ಪಕಟಿಸುವುದರ ಮೂಲಕ ನೊಂದವರ ಒಡಲ ದನಿಯಾಗಿ ಹೊರಹೊಮ್ಮಿದರು. ಇವರ “ಎಲ್ಲರ ಬೆರಳಲ್ಲೂ ಅಂಟಿಕೊಂಡ ದು:ಖವೇ” ಕವನ ಸಂಕಲನ ಹೊಸ ಒಳನೋಟಗಳನ್ನು ನೀಡಿದೆ. ವೃತ್ತಿಯೊಡನೆ ಕಾವ್ಯ ರಚನೆ, ಸಂಘಟನೆ, ಹೋರಾಟ, ಮತ್ತು ನಾಟಕ ನಿರ್ದೇಶನದ ಮೂಲಕ ತಳಸಮುದಾಯದವರ ನೋವಿನ ಆಳ ಅಗಲಗಳನ್ನು ಲೋಕಕ್ಕೆ ಪರಿಚಯಿಸಿದ್ದಾರೆ.

ಆರ್.ಜಿ.ಹಳ್ಳಿ ನಾಗರಾಜ್

ಆರ್.ಜಿ.ಹಳ್ಳಿ ನಾಗರಾಜ್ ಮೂಲತಃ ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯಲ್ಲಿ ಜನಿಸಿದವರು. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಜನಪರ ಚಳುವಳಿಯೊಡನೆ ಬೆಳೆಸಿಕೊಂಡ ಅವರ ಸಖ್ಯ ಇಂದಿಗೂ ಕೊನೆಯಾಗಿಲ್ಲ. ಎಲ್ಲ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಸದಾ ಬಂಡಾಯದ ಬಾವುಟ ಬೀಸುವ ಇವರು ಪತ್ರಕರ್ತರಾಗಿ, ಪ್ರಕಾಶಕರಾಗಿ, ಕವಿಯಾಗಿ, ಕತೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಅನ್ವೇಷಣೆ ಪತ್ರಿಕೆಯ ಮೂಲಕ ಹೊಸ ಕವಿ, ವಿಮರ್ಶಕರು ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ. ಕನ್ನಡ ಪರ, ರೈತಪರ, ಸರ್ಕಾರಿ ಶಾಲೆಗಳ ಉಳಿವಿನ ಪರ ಇವರು ಹೋರಾಟ ಮಾಡಿದ್ದಾರೆ. ಸಂಕರ, ಕಡೆಗೋಲು, ಊರುಗೋಲು, ಶಹನಾಯ್ ಕವನ ಸಂಕಲನಗಳಾದರೆ, ಸಿಡಿದವರು ಎಂಬುದು ಇವರ ಕಥಾ ಸಂಕಲನ. ವಿಮರ್ಶಾ ಕೃತಿ ಸಮೂಹ ಪ್ರಜ್ಞೆ, ರಂಗಭೂಮಿ ಕುರಿತು ಗ್ರೀನ್ ರೂಂ, ಮಾಧ್ಯಮ ಹಾಗೂ ಅಭಿವ್ಯಕ್ತಿ ಮೀಮಾಂಸೆ ಮೊದಲಾದ ಕೃತಿಗಳ ಮೂಲಕ ಸಾಹಿತ್ಯ, ಸಂಸ್ಕೃತಿ ಸೇವೆ ಮಾಡಿದ್ದಾರೆ.

ನಾಗತಿಹಳ್ಳಿ ರಮೇಶ್
ನಾಗತಿಹಳ್ಳಿ ರಮೇಶ್ 1967 ಜೂನ್ 1ರಂದು ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಜನಿಸಿದವರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಇವರು ಕಾನೂನು ಅಭ್ಯಾಸ ಮಾಡಿದರು. ವಿದ್ಯಾರ್ಥಿ ದೆಸೆಯಲ್ಲಿ 150ಕ್ಕೂ ಹೆಚ್ಚು ಚರ್ಚಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ಸಾಧನೆ ಇವರದು. 1990ರ ದಶಕದಲ್ಲಿ “ಸ್ಪರ್ಧಾ ಪ್ರಪಂಚ” ಮಾಸಿಕದ ಮೂಲಕ ವಿದ್ಯಾವಂತ ನಿರುದ್ಯೋಗಿಳಿಗೆ ಗಗನಕುಸುಮದಂತಿದ್ದ ಸರ್ಕಾರಿ ಹುದ್ದೆ ಗಳಿಸಲು ನೆರವು ನೀಡಿದರು. ಕಿರುಚಿತ್ರ, ಸಾಕ್ಷ್ಯಚಿತ್ರ, ಪರಿಸರಪರ ಕಾಳಜಿ, ಕೃಷಿ, ಸಿನಿಮಾ ಇವರ ಆಸಕ್ತ ಕ್ಷೇತ್ರಗಳು. ಸಮುದ್ರ ಮತ್ತು ಮಳೆ ಎಂಬ ಇವರ ಕವನ ಸಂಕಲನ ಮಾನವೀಯ ದೃಷ್ಟಿಕೋನವನ್ನು ಒಳಗೊಂಡಿದೆ. ತಮ್ಮ ತೆಕ್ಕೆಗೆ ಸಿಕ್ಕವರನ್ನೆಲ್ಲ ಬಾಚಿ ತಬ್ಬುವ ಗುಣ ಇವರಲ್ಲಿ ಸ್ಥಾಯಿಯಾಗಿದೆ.

ಡಾ.ನಾಗೇಶ್ ದಸೂಡಿ
ನಾಗೇಶ್ ದಸೂಡಿಯವರು ಚಿಕ್ಕನಾಯಕನ ಹಳ್ಳಿಯ ದಸೂಡಿಯಲ್ಲಿ 29.07.1963ರಲ್ಲಿ ಜನಿಸಿದವರು. ವೃತ್ತಿಯಲ್ಲಿ ಪಶುವೈದ್ಯರಾದರೂ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬಂಡಾಯ ಸಾಹಿತ್ಯ ಸಂಘಟನೆಯ ಬೆಂಗಳೂರು ವಿಭಾಗದ ಸಂಚಾಲಕರಾಗಿ ಸಾಮಾಜಿಕ ಹೋರಾಟದ ಜೊತೆಗೆ ಸಾಹಿತ್ಯ ಪರಿಚಾರಿಕೆ ಇವರ ಹವ್ಯಾಸವಾಗಿದೆ. ನಾಡಿನ ಬಹುತೇಕ ಲೇಖಕರ ಜೊತೆಗೆ ಒಡನಾಟ ಹೊಂದಿರುವ ಇವರು ಮಹತ್ವದ ಲೇಖಕರ ಕೃತಿಗಳನ್ನು ತಮ್ಮ ಒಡನಾಡಿಗಳಿಗೆ ಓದಿಸುವ ಕೆಲಸವನ್ನು ಕಾಯಕದಂತೆ ನಡೆಸಿಕೊಂಡು ಬಂದಿದ್ದಾರೆ. ಪಶು ಸಂಗೋಪನೆ, ಹೈನುಗಾರಿಕೆ ಅಭಿವೃದ್ಧಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಒದಗಿಸುವ ಮೂಲಕ ರಾಜ್ಯದ ರೈತರ ಮತ್ತು ಹೈನೋದ್ಯಮದಲ್ಲಿ ತೊಡಗಿಕೊಂಡಿರುವವರಿಗೆ ಬಂಧುವಾಗಿದ್ದಾರೆ. ನೇಪಾಳಿ ಕವಿತೆಗಳನ್ನು ಕನ್ನಡಕ್ಕೂ ಕನ್ನಡದ ಕವಿತೆಗಳನ್ನು ನೇಪಾಳಿ ಭಾಷೆಗೂ ಅನುವಾದಿಸುವ ಮಹತ್ವದ ಅನುಸಂಧಾನವನ್ನು ಇವರು ನೆರವೇರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು