Friday, June 14, 2024

ಸತ್ಯ | ನ್ಯಾಯ |ಧರ್ಮ

UCC ಜಾರಿಗೊಳಿಸುವ ಮೊದಲು ಆದಿವಾಸಿ ಸಮುದಾಯಗಳ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಿ; RŞS ಸುಶೀಲ್‌ ಮೋದಿ

ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಏಕರೂಪದ ಕಾನೂನು ಮಾಡಲು ಏಕರೂಪ ನಾಗರಿಕ ಸಂಹಿತೆ (UCC) ತರಲು ಸಿದ್ಧತೆ ನಡೆದಿದೆ. ಈ ಕುರಿತು ಚರ್ಚೆ ಆರಂಭಗೊಳ್ಳುತ್ತಿರುವಂತೆ ಆದಿವಾಸಿ ಸಮುದಾಯಕ್ಕೆ ಈ ಕಾಯಿದೆಯಿಂದ ವಿನಾಯಿತಿ ನೀಡುವ ಕುರಿತು ಸಲಹೆಗಳೂ ಆರಂಭಗೊಂಡಿವೆ. ಯುಸಿಸಿಗೆ ಸಂಬಂಧಿಸಿದಂತೆ ಕಾನೂನು ವ್ಯವಹಾರಗಳ ಸಂಸದೀಯ ಸಮಿತಿಯ ಸಭೆ ನಡೆದಿದ್ದು, ಅಧ್ಯಕ್ಷ ಸುಶೀಲ್ ಮೋದಿ ಅವರು ಆದಿವಾಸಿಗಳನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಮಾತನಾಡಿದರು.

ಇದರೊಂದಿಗೆ RSS ಅಂಗಸಂಸ್ಥೆ ವನವಾಸಿ ಕಲ್ಯಾಣ ಆಶ್ರಮ ಕೂಡ ಇದೇ ಸಲಹೆಯನ್ನು ನೀಡಿದೆ. ಈ ಕುರಿತು ಕಾನೂನು ಆಯೋಗಕ್ಕೆ ಪತ್ರ ಬರೆದಿರುವ ವನವಾಸಿ ಕಲ್ಯಾಣ ಆಶ್ರಮ ʼಈ ವಿಚಾರದಲ್ಲಿ ತರಾತುರಿಯಲ್ಲಿ ವರದಿ ಸಲ್ಲಿಸಬಾರದುʼ ಎಂದು ತಿಳಿಸಿದೆ.

ಈ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಕಾನೂನು ಆಯೋಗವು ಬುಡಕಟ್ಟು ಸಮಾಜದ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು RSS ಸಂಘಟನೆ ಹೇಳಿದೆ. ಇದಕ್ಕಾಗಿ ಅವರು ಬುಡಕಟ್ಟು ಸಂಘಟನೆಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಮಾತನಾಡಬೇಕು. ಈ ವಿಚಾರದಲ್ಲಿ ಬುಡಕಟ್ಟು ಸಮಾಜದ ಜನರು ತಮ್ಮ ಸಲಹೆಗಳನ್ನು ಆಯೋಗದ ಮುಂದೆ ಮಂಡಿಸುವಂತೆ RSS ಮನವಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನಿರ್ಲಕ್ಷಿಸಿ ಬುಡಕಟ್ಟು ಸಮಾಜದ ಜನರು ತಮ್ಮ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಂಘಟನೆ ಹೇಳಿದೆ.

ಮುಂದುವರಿಯುವ ಮೊದಲು ಆದಿವಾಸಿಗಳ ರೀತಿ-ರಿವಾಜುಗಳನ್ನು ಅರ್ಥಮಾಡಿಕೊಳ್ಳಿ

ವನವಾಸಿ ಕಲ್ಯಾಣ ಆಶ್ರಮ ಹೊರಡಿಸಿದ ಹೇಳಿಕೆಯಲ್ಲಿ, ಬುಡಕಟ್ಟು ಜನಾಂಗದವರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡುವ ಸಂಸದೀಯ ಸಮಿತಿಯ ಸಲಹೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆಯಾದರೂ ಹೆಚ್ಚಿನ ಜನರಲ್ಲಿ ತಿಳುವಳಿಕೆಯ ಕೊರತೆಯಿದೆ ಎಂದು ಸಂಘ ಹೇಳಿದೆ. ಇದರಿಂದಾಗಿ ಜನರು ಗೊಂದಲಕ್ಕೊಳಗಾಗಿದ್ದು, ಬುಡಕಟ್ಟು ಸಮಾಜದ ಜನರಲ್ಲೂ ಗೊಂದಲ ಸೃಷ್ಟಿಯಾಗುತ್ತಿದೆ ಎಂದಿದೆ. ಕೆಲವರು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಅದು ಹೇಳಿದೆ.

ಗಮನಾರ್ಹವಾಗಿ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅನೇಕ ರಾಜಕೀಯ ಪಕ್ಷಗಳು ಯುಸಿಸಿ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.

ಆದಿವಾಸಿ ಬಾಹುಳ್ಯದ ರಾಜ್ಯಗಳಲ್ಲಿ ಬಿಜೆಪಿಗೆ ಆತಂಕ

ಪ್ರಸ್ತುತ ಈಶಾನ್ಯ ಭಾರತ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಬಂಗಾಳ ಮತ್ತು ಜಾರ್ಖಂಡ್‌ನಂತಹ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. UCC ಈರಾಜ್ಯಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಈ ವಿಷಯ ರಾಜಕೀಯವಾಗಿಯೂ ಸೂಕ್ಷ್ಮವಾಗಿದ್ದು, ಈ ವರ್ಷ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಆದಿವಾಸಿ ಸಮುದಾಯದಲ್ಲಿ ಯಾವುದೇ ಗೊಂದಲ ಉಂಟಾಗುವುದು ಬಿಜೆಪಿ ಸರ್ಕಾರಕ್ಕೂ ಇಷ್ಟವಿಲ್ಲ, ಅದರ ಪರಿಣಾಮ ಚುನಾವಣೆಯಲ್ಲಿ ಗೋಚರಿಸಲಿದೆ. ಹೀಗಾಗಿ UCC ಎನ್ನುವುದು ಬಿಜೆಪಿ ಪಾಲಿಗೆ ಹುಲಿ ಸವಾರಿಯಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ.

CAA ನಂತರ ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬರಲಿರುವ ಇನ್ನೊಂದು ಕಾನೂನು ಕೂಡ ಗೊಂದಲದ ಗೂಡಾಗಲಿರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು